ಮಹಿಳಾ ಮೀಸಲು ವಿಧೇಯಕಕ್ಕೆ ಬಹುಮತದ ಕೊರತೆ; ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ

Kannadaprabha News   | Kannada Prabha
Published : Apr 17, 2026, 06:47 AM IST
Parliament session today

ಸಾರಾಂಶ

ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತ ವಿಧೇಯಕಗಳನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದ್ದು, ಎನ್‌ಡಿಎಗೆ ಸಂಖ್ಯಾಬಲದ ಕೊರತೆ ಇರುವುದರಿಂದ ವಿಪಕ್ಷಗಳ ಬೆಂಬಲವಿಲ್ಲದೆ ಈ ವಿಧೇಯಕದ ಭವಿಷ್ಯ ಅನಿಶ್ಚಿತವಾಗಿದೆ.

ನವದೆಹಲಿ (ಏ.17): ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಇವುಗಳ ಕುರಿತು ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ.

ಸಾಂವಿಧಾನಿಕ ತಿದ್ದುಪಡಿ ಇರುವ ಕಾರಣ ಈ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸುವುದು ಕಡ್ಡಾಯ. ಆದರೆ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಅಷ್ಟು ಬಲ ಇಲ್ಲ. ಮತ್ತೊಂದೆಡೆ ವಿಪಕ್ಷಗಳು ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಹೀಗಾಗಿ ವಿಧೇಯಕ ಅಂಗೀಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ತಂತ್ರ ರೂಪಿಸಲಿದೆ ಎಂಬ ಕುತೂಹಲ ಮೂಡಿದೆ.

ಒಂದು ವೇಳೆ ಈಗಾಗಲೇ ಘೋಷಿಸಿರುವಂತೆ ವಿಪಕ್ಷಗಳು, ಮಹಿಳಾ ಮೀಸಲು ವಿಧೇಯಕ ವಿರೋಧಿಸಿದರೆ ಅದನ್ನು ಮುಂಬರುವ ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ವಿಷಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಪಕ್ಷಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಂಡನೆ:

ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕ ಸೇರಿ 3 ಮಸೂದೆಗಳನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಅದರ ಬಗ್ಗೆ ಆಡಳಿತ ಮತ್ತು ವಿಪಕ್ಷಗಳು ಸುದೀರ್ಘ ಚರ್ಚೆ ನಡೆಸಿವೆ.

ವಿಧೇಯಕ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ನಾಯಕರು ಮಹಿಳಾ ಮೀಸಲು ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಹಿಳಾ ಮೀಸಲು ಜಾರಿಯಿಂದ ಪುರುಷರಿಗಾಗಲೀ ಅಥವಾ ದಕ್ಷಿಣದ ಸೇರಿದಂತೆ ಯಾವುದೇ ರಾಜ್ಯಗಳಿಗಾಗಲೀ ಅನ್ಯಾಯವಾಗದು. ಶೇ.50ರಷ್ಟು ಸೀಟು ಹೆಚ್ಚಳದ ಕಾರಣ ಎಲ್ಲಾ ರಾಜ್ಯಗಳು ಏರಿಕೆಯ ಲಾಭ ಪಡೆದುಕೊಳ್ಳಲಿವೆ. ಲೋಕಸಭಾ ಸ್ಥಾನವನ್ನು 543ರಿಂದ 816ಕ್ಕೆ ಏರಿಸುವ ಕಾರಣ ಮಹಿಳೆಯರಿಗೆ 272 ಸೀಟು ಲಭ್ಯವಾಗಲಿವೆ ಎಂದು ಭರವಸೆ ನೀಡಿದ್ಧಾರೆ. ಆದರೆ ಮತ್ತೊಂದೆಡೆ, ಈ ಮಸೂದೆ ಅಂಗೀಕಾರವಾದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಥೆಯೇ ಮುಗಿದು ಹೋಗಲಿವೆ ಎಂದು ಕಳವಳ ವ್ಯಕ್ತಪಡಿಸಿವೆ.

ಮಹಿಳಾ ಮೀಸಲಾತಿಗಿಂದು ಅಗ್ನಿಪರೀಕ್ಷೆ:

ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು 360 ಮತಗಳ ಅಗತ್ಯವಿದೆ. ಆದರೆ ಎನ್‌ಡಿಎ ಬಲ ಇರುವುದು 293 ಮಾತ್ರ. ವಿಪಕ್ಷಗಳ ಬಲ 233 ಇದೆ. ಉಳಿದಂತೆ 7 ಪಕ್ಷೇತರರು, 7 ಜನ ವೈಎಸ್‌ಆರ್‌ಪಿ, ಎಂಐಎಂ, ಶಿರೋಮಣಿ ಅಕಾಲಿದಳ ಸದಸ್ಯರಿದ್ದಾರೆ. ಆದರೆ ಇವರು ಇನ್ನೂ ಬಹಿರಂಗವಾಗಿ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 360 ಮತಗಳನ್ನು ಪಡೆಯಲು, ಒಂದೋ ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್‌ (98) ಬೆಂಬಲಿಸಬೇಕು. ಇಲ್ಲದೇ ಹೋದಲ್ಲಿ ಎಸ್‌ಪಿ (37), ಟಿಎಂಸಿ (28), ಡಿಎಂಕೆ (22) ಪೈಕಿ ಯಾವುದಾದರೂ ಎರಡು ಪಕ್ಷಗಳು ಬೆಂಬಲಿಸಬೇಕು. ಒಂದು ವೇಳೆ ಬೆಂಬಲಿಸದಿದ್ದರೂ, ಮತದಾನದ ವೇಳೆ ಗೈರಾದರು ಸದನದ ಬಲ ಕುಸಿದು ಸರ್ಕಾರ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು.

ಒಂದು ವೇಳೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾದರೆ ಮಾತ್ರವೇ ಅದನ್ನು ರಾಜ್ಯಸಭೆಯಲ್ಲೂ ಪರಿಗಣಿಸಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌
ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಚತುರತೆ ಕಂಡು ಬೆಚ್ಚಿಬೀಳುತ್ತಿದ್ದ: ಪ್ರಿಯಾಂಕಾ ವಾದ್ರಾ ಮಾತಿಗೆ ನಕ್ಕ ಅಮಿತ್‌ ಶಾ