ಮಹಾರಾಷ್ಟ್ರ ಶಿವಸೇನೆ ವಿರುದ್ಧ ವ್ಯಂಗ್ಯವಾಡಿ ಬಂಧನದ ಭೀತಿ ಎದುರಿಸುತ್ತಿರುವ ಕಮಿಡಿಯನ್ ಕುನಾಲ್ ಕಮ್ರಾ, ಇದೀಗ ನಾರಾಯಣ ಮೂರ್ತಿ- ಸುಧಾ ಮೂರ್ತಿ ಕುರಿತು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಆಗಿದ್ದೇನು?
ಮಹಾರಾಷ್ಟ್ರ ಶಿವಸೇನೆ ನಾಯಕ, ಮಾಹಾರಾಷ್ಟ್ರ ಮಾಜಿ ಸಿಎಂ, ಸಚಿವ ಏಕನಾಥ್ ಶಿಂಧೆ ಸೇರಿದಂತೆ ಅನೇಕ ಗಣ್ಯರ ವಿರುದ್ಧ ಅವಹೇನಕಾರಿಯಾಗಿ ಹಾಸ್ಯ ಮಾಡಿ ಇದಾಗಲೇ ಕಮಿಡಿಯನ್ ಕುನಾಲ್ ಕಮ್ರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ, ನಿರೀಕ್ಷಣ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದ್ರೋಹಿ ಎಂದು ಕರೆದಿದ್ದರು. ಇದರಿಂದ ಆಕ್ರೋಶಗೊಂಡ ಶಿವಸೇನೆ ಕಾರ್ಯಕರ್ತರು ಕುನಾಲ್ ಕಮ್ರಾ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೋವನ್ನು, ಸಭಾಂಗಣವನ್ನೇ ದಾಂಧಲೆ ನಡೆಸಿ ಧ್ವಂಸಗೊಳಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದದಲ್ಲಿ ಅವರು ಸಿಲುಕಿದ್ದಾರೆ. ಅವರು ನಾರಾಯಣ ಮೂರ್ತಿ ಅವರು, ವಾರಕ್ಕೆ 70 ಗಂಟೆ ಕೆಲಸ ಮಾಡುವ ಬಗ್ಗೆ ಮಾತಮಾಡಿದ್ದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದಾಗಲೇ ನಾರಾಯಣ ಮೂರ್ತಿ ಅವರ ಈ ಹೇಳಿಕೆಯಿಂದ ಬಹಳಷ್ಟು ಮಂದಿ ಆಕ್ರೋಶ ಹೊರಹಾಕಿದ್ದು ಇದೆ. ಈ ವಿಚಾರವಾಗಿ ಭಾರಿ ವಿವಾದವೂ ಸೃಷ್ಟಿಯಾಗಿದ್ದ ಜೊತೆಗೆ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಬಳಿಕ ಮುಂಬೈನಲ್ಲಿ ನಡೆದಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಅವರು, ಸ್ಪಷ್ಟನೆ ನೀಡಿ, ಯಾರೊಬ್ಬರು ಯಾರ ಮೇಲೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ನೋಡಿದ್ದರು. ಅಲ್ಲಿಗೆ ಆ ವಿವಾದ ತಣ್ಣಗಾಗಿತ್ತು.
ಆದರೆ, ಕುನಾಲ್ ಕಮ್ರಾ ಅದನ್ನು ಮತ್ತೊಮ್ಮೆ ಕೆದಕಿದ್ದಾರೆ. 'ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸವನ್ನು ಏಕೆ ಮಾಡಲು ಬಯಸುತ್ತಾರೆ ಎನ್ನುವುದು ನನಗೆ ಅರ್ಥವಾಗಿದೆ. ಬಹುಶಃ ಇದು ನಿಮಗೆ ಅರ್ಥವಾದಂತಿಲ್ಲ ಎನ್ನುತ್ತಲೇ ಟಾಂಗ್ ಕೊಟ್ಟಿದ್ದರು. ಈ ಮಾತಿನಲ್ಲಿ ರಾಜ್ಯಸಭಾ ಸದಸ್ಯ, ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರನ್ನು ಎಳೆದು ತಂದಿದ್ದಾರೆ. ಸುಧಾ ಮೂರ್ತಿ ಅವರು ಮೇಲಿಂದ ಮೇಲೆ ನಾನು ಸಿಂಪಲ್ ('ಮೈ ಸಿಂಪಲ್ ಹೂಂ') ಎನ್ನುತ್ತಿರುತ್ತಾರೆ. ಈ ಸರಳತೆ ಅವರ ಪತಿಗೆ ಸಂಕಷ್ಟ ತಂದಿದೆ. ಆದ್ದರಿಂದ ಅವರು ಮೈ ಸಿಂಪಲ್ ಹೂಂ ಎನ್ನುವ ಪತ್ನಿಗೆ ವಿರುದ್ಧವಾಗಿ ಮೈ ಬಾಹರ್ ಹೂಂ ( ನಾನು ಮನೆಯಿಂದ ಹೊರಗಿರುತ್ತೇನೆ) ಎಂದು ಹೇಳುವ ಮೂಲಕ 70 ಗಂಟೆ ಕೆಲಸದಲ್ಲಿ ಮುಳುಗಿರುತ್ತಾರೆ' ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಅವರು, 'ಎರಡು ವರ್ಷಗಳವರೆಗೆ ಸುಧಾ ಮೂರ್ತಿ ಇಡೀ ಯುಕೆಯ ಅತ್ತೆಯಾಗಿದ್ದರು. ಈಗ ರಾಜ್ಯಸಭೆಗೂ ಹೋಗುತ್ತಿದ್ದಾರೆ. ಎಷ್ಟು ಸರಳಾಗಿದ್ದಾರೆ ಅಲ್ಲವೇ ಎಂದು ವ್ಯಂಗ್ಯದ ದನಿಯಲ್ಲಿ ಹೇಳಿದ್ದಾರೆ. ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಇವರ, ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಹೇಳುವುದಾದರೆ, ಕಮ್ರಾ ತಮಿಳುನಾಡಿನ ವಿಲ್ಲುಪುರಂನಲ್ಲಿ ಶಾಶ್ವತವಾಗಿ ವಾಸಿಸುತ್ತಿರುವುದರಿಂದ ಚೆನ್ನೈ ಹೈಕೋರ್ಟ್ನಲ್ಲಿ ಕುನಾಲ್ ಕಮ್ರಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯಲ್ಲಿ ತನ್ನ ಸ್ವಂತ ಊರು ವಿಲ್ಲುಪುರಂ ಎಂದು, ತಾನು ಮುಂಬೈಗೆ ಹೋದರೆ ಪೊಲೀಸರು ನನ್ನನ್ನು ಬಂಧಿಸುತ್ತಾರೆ, ಶಿವಸೇನೆ ಕಾರ್ಯಕರ್ತರಿಂದ ತನ್ನ ಜೀವಕ್ಕೆ ಅಪಾಯವಿದೆ ಹಾಗಾಗಿ ನನಗೆ ಇಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯನ್ನು ತುರ್ತು ಪ್ರಕರಣವಾಗಿ ವಿಚಾರಣೆ ನಡೆಸಬೇಕು ಎಂದು ಅವರ ವಕೀಲರು ಚೆನ್ನೈ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುಂದರ್ ಮೋಹನ್ ಅವರಲ್ಲಿ ಮನವಿ ಮಾಡಿದ್ದಾರೆ.
ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು? ಭಾರತಕ್ಕೆ ಶಾಕ್: ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದ ಸಮೀಕ್ಷೆ!