Covid Third Wave: ಶಾಲೆಗಳಿಂದ ಸೋಂಕು ಹಬ್ಬುತ್ತೆ ಎಂಬುದು ನಿಜವಲ್ಲ: ವಿಶ್ವ ಬ್ಯಾಂಕ್‌

By Kannadaprabha NewsFirst Published Jan 17, 2022, 2:59 AM IST
Highlights

ಕೊರೋನಾ ಪ್ರಕರಣಗಳು ಹೆಚ್ಚಾದ ಕಾರಣ ಸರ್ಕಾರಗಳು ಶಾಲೆಗಳನ್ನು ಬಂದ್‌ ಮಾಡುತ್ತಿರುವುದಕ್ಕೆ ವಿಶ್ವ ಬ್ಯಾಂಕ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸೋಂಕು ಹೆಚ್ಚಾಯಿತು ಎಂದು ಶಾಲೆ ಮುಚ್ಚುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. 

ನವದೆಹಲಿ (ಜ. 17):  ಕೊರೋನಾ ಪ್ರಕರಣಗಳು (Corona Cases) ಹೆಚ್ಚಾದ ಕಾರಣ ಸರ್ಕಾರಗಳು ಶಾಲೆಗಳನ್ನು ಬಂದ್‌ ಮಾಡುತ್ತಿರುವುದಕ್ಕೆ ವಿಶ್ವ ಬ್ಯಾಂಕ್‌ (World Bank) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸೋಂಕು ಹೆಚ್ಚಾಯಿತು ಎಂದು ಶಾಲೆ ಮುಚ್ಚುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಕೋವಿಡ್‌ (Covid19) ಹೊಸ ಅಲೆ ಸೃಷ್ಟಿಯಾದರೂ ಶಾಲೆ ಬಂದ್‌ (Schools Closed) ಮಾಡುವುದು ಕೊನೆಯ ಆಯ್ಕೆಯಾಗಬೇಕು. ಇಲ್ಲದೆ ಹೋದರೆ ಕಲಿಕಾ ಬಡತನ ಹೆಚ್ಚಾಗುತ್ತದೆ ಎಂದು ಹೇಳಿದೆ.

ಶಾಲೆಗಳನ್ನು ತೆರೆದಿದ್ದರಿಂದಲೇ ಸೋಂಕಿನ ಉಬ್ಬರವಾಯಿತು ಹಾಗೂ ಶಾಲೆಗಳು ಸುರಕ್ಷಿತ ಸ್ಥಳವಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಿಶ್ವ ಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೇಮಿ ಸಾವೇದ್ರ (Jaime Saavedra) ಅವರು ಹೇಳಿದ್ದಾರೆ. ರೆಸ್ಟೋರೆಂಟ್‌, ಬಾರ್‌ ಹಾಗೂ ಶಾಪಿಂಗ್‌ ಮಾಲ್‌ಗಳನ್ನು ತೆರೆಯಲು ಬಿಟ್ಟು, ಶಾಲೆಗಳನ್ನು ಮುಚ್ಚಿಸುವುದರಲ್ಲಿ ಅರ್ಥವೇ ಇಲ್ಲ. ಇದಕ್ಕೆ ನೆಪವೂ ಇಲ್ಲ. ಶಾಲೆಗಳನ್ನು ತೆರೆಯುವುದಕ್ಕೂ ಕೊರೋನಾ ಹರುಡುವುದಕ್ಕೂ ಸಂಬಂಧ ಇಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ವಾಷಿಂಗ್ಟನ್‌ನಿಂದ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶಾಲೆಗಳನ್ನು ತೆರೆಯುವುದರಿಂದ ಮಕ್ಕಳ ಆರೋಗ್ಯ ಮೇಲಾಗುವ ಪರಿಣಾಮ ಕಡಿಮೆ. ಆದರೆ ಶಾಲೆ ಬಂದ್‌ ಮಾಡುವುದರಿಂದ ಆಗುವ ನಷ್ಟಬಲು ಅಧಿಕ. ಹಲವು ದೇಶಗಳಲ್ಲಿ ಶಾಲೆ ಬಂದ್‌ ಆಗಿದ್ದಾಗಲೂ ಕೊರೋನಾ ಅಲೆಗಳು ಸೃಷ್ಟಿಯಾಗಿದ್ದವು. ಇದರರ್ಥ ಕೊರೋನಾ ಉಬ್ಬರದ ಹಿಂದೆ ಶಾಲೆಗಳ ಪಾತ್ರ ಇಲ್ಲ ಎಂಬುದಾಗಿದೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಲಸಿಕೆ ನೀಡಿದ ಬಳಿಕವೇ ಶಾಲೆ ಆರಂಭಿಸುತ್ತೇವೆ ಎಂದು ಯಾವುದೇ ದೇಶವೂ ಹೇಳಿಲ್ಲ. 

Corona In Karnataka ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಸಭೆ ಕರೆದ ಸಿಎಂ ಬೊಮ್ಮಾಯಿ

ಏಕೆಂದರೆ, ಅದರ ಹಿಂದೆ ಯಾವುದೇ ವಿಜ್ಞಾನ ಇಲ್ಲ. ಶಾಲೆಗಳನ್ನು ಬಂದ್‌ ಮಾಡುವುದರಿಂದ ಆಗುವ ಪರಿಣಾಮ ಹಿಂದೆ ಊಹಿಸಿದ್ದಕ್ಕಿಂತ ಅಧಿಕವಾಗಿದೆ. ಏಕೆಂದರೆ ಇದು ಕಲಿಕಾ ಬಡತನವನ್ನು ನಿರೀಕ್ಷೆಗೂ ಮೀರಿ ಹೆಚ್ಚಿಸುತ್ತದೆ ಎಂದಿದ್ದಾರೆ. 10ನೇ ವಯಸ್ಸಿಗೆ ಬಂದಾಗ ಒಂದು ಮಗು ಸರಳ ಸಂದೇಶವನ್ನೇ ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಆಗದಿರುವುದನ್ನು ಕಲಿಕಾ ಬಡತನ ಎನ್ನಲಾಗುತ್ತದೆ. ಇದು ಭಾರತದಲ್ಲಿ (India) ಶೇ.55ರಷ್ಟಿತ್ತು. ಈಗ ಶೇ.70ಕ್ಕೆ ಏರುವ ಸಂಭವವಿದೆ ಎಂದು ಅವರು ವಿವರಿಸಿದ್ದಾರೆ.

2.71 ಲಕ್ಷ ಕೇಸು, 314 ಸಾವು: ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,71,202 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಕೇರಳದ 106 ಮತ್ತು ಪಶ್ಚಿಮ ಬಂಗಾಳದ 39 ಸೋಂಕಿತರು ಸಾವಿಗೀಡಾಗುವುದರೊಂದಿಗೆ ಒಟ್ಟು 314 ಜನ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1.32 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿವೆ. ಇದರೊಂದಿಗೆ ಸಕ್ರಿಯ ಕೇಸು 15.5 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 7.5 ತಿಂಗಳ (225 ದಿನಗಳ) ಗರಿಷ್ಠವಾಗಿದೆ. 

ಗುಣಮುಖ ಪ್ರಮಾಣವು ಶೇ.94.51ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.16.28ರಷ್ಟಿದ್ದು, ಇದು ಶನಿವಾರದ ಶೇ.16.66ಕ್ಕಿಂತ ಕೊಂಚ ಉತ್ತಮ. ವಾರದ ಪಾಸಿಟಿವಿಟಿ ದರ ಶೇ.13.69ರಷ್ಟಿದೆ. ಒಟ್ಟು ಪ್ರಕರಣ 3.71 ಕೋಟಿಗೆ, ಒಟ್ಟು ಸಾವು 4.86 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 156.76 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

Covid Vaccine ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

ಒಮಿಕ್ರೋನ್‌ ದಾಖಲೆಯ ಕೇಸು ದಾಖಲು: ದೇಶದಲ್ಲಿ ಒಂದೇ ದಿನ 1,702 ಹೊಸ ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದೆ. ಇದು ಒಮಿಕ್ರೋನ್‌ ರೂಪಾಂತರಿ ಕಾಣಿಸಿಕೊಂಡ ನಂತರ ಕಾಣಿಸಿಕೊಂಡ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಈ ಮೂಲಕ ಒಮಿಕ್ರೋನ್‌ ಪ್ರಕರಣಗಳು 7,743ಕ್ಕೆ ಏರಿಕೆಯಾಗಿದೆ. 

ಒಮಿಕ್ರೋನ್‌ ಪ್ರಕರಣಗಳು ಶನಿವಾರಕ್ಕೆ ಹೋಲಿಸಿದರೆ ಶೇ.28.17ರಷ್ಟುಹೆಚ್ಚಾಗಿವೆ. ‘ದೈನಂದಿನ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿರುವುದರಿಂದ ಎಲ್ಲಾ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಮಾಡಲಾಗುತ್ತಿಲ್ಲ. ಆದರೆ ಕೋವಿಡ್‌ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಒಮಿಕ್ರೋನ್‌ ಕಾರಣ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

click me!