ಭಾರತೀಯ ಸೇನಾ ವಾಹನ ಗುರಿಯಾಗಿಸಿ ಉಗ್ರರ ದಾಳಿ, ನಾಲ್ವರು ಯೋಧರು ಹುತಾತ್ಮ!

By Chethan KumarFirst Published Jul 8, 2024, 8:58 PM IST
Highlights

ಭಾರತೀಯ ಸೇನೆ ಗುರಿಯಾಗಿಸಿ ಉಗ್ರರು ನಡೆಸುತ್ತಿರುವ ದಾಳಿ ಮುಂದುವರಿದಿದೆ. ಇದೀಗ ಕಥುವಾ ಬಳಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರೆ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
 

ಶ್ರೀನಗರ(ಜು.8)  ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಸೇನೆ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದೀಗ ಕಥುವಾ ಬಳಿ ಭಾರತೀಯ ಸೇನಾ ವಾಹನ ಗುರಿಯಾಗಿ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನ ಪ್ರತಿ ದಾಳಿ ನಡೆಸುತ್ತಿದ್ದಂತೆ ಉಗ್ರರು ಕಾಡಿನೊಳಗೆ ಪರಾರಿಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಇಂದು ಮಧ್ಯಾಹ್ನ 3.30ರ ವೇಳೆಗೆ ಬದ್ನೋಟಾ ಗ್ರಾಮದ ಬಳಿ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದಾರೆ. ಮಚೆಡಿ ಕಿಂಡ್ಲಿ ಮಲ್ಹರ್ ರಸ್ತೆಯಲ್ಲಿ ಭಾರತೀಯ ಸೇನೆ ಎಂದಿನಂತೆ ಪಟ್ರೋಲಿಂಗ್ ನಡೆಸುತ್ತಿರುವ ವೇಳೆ ಉಗ್ರರು ಕಾದು ಕುಳಿತು ದಾಳಿ ನಡೆಸಿದ್ದಾರೆ.  ಭಾರತೀಯ ಸೇನಾ ವಾಹನದ ಮೇಲೆ ಗ್ರೇನೆಡ್ ದಾಳಿ ನಡೆಸಿದ ಉಗ್ರರು ನಿರಂತರ ಫೈರಿಂಗ್ ನಡೆಸಿದ್ದಾರೆ.

Latest Videos

ಜಮ್ಮು ಕಾಶ್ಮೀರದಲ್ಲಿ ಡಬಲ್‌ ಎನ್‌ಕೌಂಟರ್‌, ಸೇನೆಗೆ ಸವಾಲು ಹಾಕಿದ ನಾಲ್ವರು ಭಯೋತ್ಪಾದಕರು ಹತ!

ಸೇನೆ ಪ್ರತಿ ದಾಳಿ ನಡೆಸುವ ಮೊದಲೇ 9 ಮಂದಿ ಗಾಯಗೊಂಡು ಕುಸಿದು ಬಿದ್ದಿದ್ದಾರೆ. ಸೇನೆ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಉಗ್ರರು ಪರಾರಿಯಾಗಿದ್ದರೆ. ಗಾಯಗೊಂಡ ಐವರ ಪೈಕಿ ಇಬ್ಬರು ಯೋಧರು ಪರಿಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಸೇನೆ ಸ್ಥಳಕ್ಕೆ ಧಾವಿಸಿದೆ. ಸಂಪೂರ್ಣ ವಲಯ ಸುತ್ತುವರಿದೆ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ಉಗ್ರರ ಸುಳಿವು ಪತ್ತೆಯಾಗಿಲ್ಲ.

ಕಳೆದ 48 ಗಂಟೆಯಲ್ಲಿ ಸೇನೆ ಮೇಲೆ ನಡೆದ 2ನೇ ದಾಳಿ ಇದಾಗಿದೆ. ಕಥುವಾ ಜಿಲ್ಲೆಯಲ್ಲಿ ಜೂನ್ 12 ಹಾಗೂ 13ರಂದು ಸೇನೆ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಓರ್ವ ಸಿಆರ್‌ಪಿಎಫ್ ಜವಾನ ಹುತಾತ್ಮರಾಗಿದ್ದರು. ಸೇನೆಯ ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. 

ಕುಲ್ಗಾಮ್ ಜಿಲ್ಲೆಯಲ್ಲಿ 6 ಭಯೋತ್ಪಾದಕರ ಹತ್ಯೆ ನಡೆಸಿದ ಮರು ದಿನವೇ ಸೇನೆ ಮೇಲೆ ಈ ದಾಳಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಯೋಧನೊಬ್ಬ ಹುತಾತ್ಮರಾಗಿದ್ದರು. ದಕ್ಷಿಣ ಕಾಶ್ಮೀರ ಜಿಲ್ಲೆಯ ಮೊಡೆರ್ಗಾಮ್ ಗ್ರಾಮದಲ್ಲಿ ಉಗ್ರರು ಬಂದಿರುವ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಆಗ ಭದ್ರತಾ ಸಿಬ್ಬಂದಿಯ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ಚಕಮಕಿಯಲ್ಲಿ ಯೋಧ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. 

ಜಮ್ಮು ಕಾಶ್ಮೀರಲ್ಲಿ 3 ಭಯೋತ್ಪಾದಕರ ಹತ್ಯೆ ಮಾಡಿದ ಭಾರತೀಯ ಸೇನೆ!

ಈ ಪ್ರದೇಶಲ್ಲಿ ಇತ್ತೀಚೆಗೆ ಭಯೋತ್ಪಾದಕ ಚಟುವಟಿಕೆಗಳು ಉಲ್ಬಣಿಸಿವೆ.; ಕಳೆದ ತಿಂಗಳಷ್ಟೇ, ದೋಡಾ ಜಿಲ್ಲೆಯ ಗಂಧೋ ಪ್ರದೇಶದಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದವು.
 

click me!