
ರಾಂಚಿ(ಜೂ.26): ಈ ಊರಿನಲ್ಲಿ ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ಸ್ಪೀಕರ್ನಲ್ಲಿ ಶಾಲೆಯ ಪಾಠ ಕೇಳಿಬರಲಾರಂಭಿಸುತ್ತದೆ. ಎಲ್ಲ ಮಕ್ಕಳೂ ತಮ್ಮತಮ್ಮ ಮನೆಗೆ ಸಮೀಪವಿರುವ ಸ್ಪೀಕರ್ ಬಳಿ ಹೋಗಿ ಕುಳಿತು ಪಾಠ ಕೇಳುತ್ತಾರೆ. ಒಂದು ಕ್ಲಾಸ್ಗೆ ಪಾಠ ಮುಗಿದ ನಂತರ ಮತ್ತೊಂದು ಕ್ಲಾಸ್ಗೆ ಶುರುವಾಗುತ್ತದೆ. ಆಗ ವಿದ್ಯಾರ್ಥಿಗಳೂ ಬದಲಾಗುತ್ತಾರೆ.
ಇದು ಗುಡ್ಡಗಾಡು ರಾಜ್ಯವಾದ ಜಾರ್ಖಂಡ್ನ ಡುಮ್ಕಾ ಜಿಲ್ಲೆಯ ಬಂಕಾಟಿ ಎಂಬ ಹಳ್ಳಿಯ ಪ್ರಾಥಮಿಕ ಶಾಲೆ ನೀಡುತ್ತಿರುವ ‘ಆನ್ಲೈನ್’ ಶಿಕ್ಷಣದ ಝಲಕ್. ಈ ಊರಿನಲ್ಲಿರುವವರಲ್ಲಿ ಹೆಚ್ಚಿನವರು ಬಡವರು. 1ರಿಂದ 8ನೇ ಕ್ಲಾಸ್ವರೆಗೆ ಶಿಕ್ಷಣ ನೀಡಲು ಇಲ್ಲಿ ಶಾಲೆಯಿದೆ. ಅಲ್ಲಿ 246 ವಿದ್ಯಾರ್ಥಿಗಳಿದ್ದಾರೆ. ಆದರೆ 204 ಮಕ್ಕಳ ಮನೆಯಲ್ಲಿ ಸ್ಮಾರ್ಟ್ಫೋನ್ ಇಲ್ಲ.
ಮುಂದಿನ ತಿಂಗಳು ವಿದೇಶಗಳಿಗೆ ವಿಮಾನ ಸೇವೆ ಶುರು..?
ಹೀಗಾಗಿ ಶಾಲೆಯ ಹೆಡ್ಮಾಸ್ಟರ್ ಶ್ಯಾಂ ಕಿಶೋರ್ ಸಿಂಗ್ ಗಾಂಧಿ ಹೊಸ ಉಪಾಯ ಮಾಡಿದ್ದಾರೆ. ಅದರಂತೆ ಊರಿನ ಬೇರೆ ಬೇರೆ ಕಡೆ ಮರಗಳಿಗೆ, ದೊಡ್ಡ ಟೆರೇಸ್ ಇರುವ ಮನೆಗೆ ಅಥವಾ ಸಮುದಾಯ ಭವನಕ್ಕೆ ಸ್ಪೀಕರ್ ಅಳವಡಿಸಿದ್ದಾರೆ. ಪ್ರತಿದಿನ ಶಾಲೆಗೆ ಬರುವ ಶಿಕ್ಷಕರು ತಮ್ಮ ಕೊಠಡಿಯಲ್ಲಿ ಮೈಕ್ ಹಿಡಿದು ಪಾಠ ಮಾಡುತ್ತಾರೆ. ಅದು ಇಡೀ ಊರಿನಲ್ಲಿ ಪ್ರಸಾರವಾಗುತ್ತದೆ. ಒಂದೊಂದು ತರಗತಿಗೆ 2 ತಾಸು ಪಾಠ ಮಾಡಲಾಗುತ್ತದೆ. ಮಕ್ಕಳು ದೂರ ದೂರ ಕುಳಿತು ಕೇಳುತ್ತಾರೆ. ಏ.16ರಿಂದ ಶಾಲೆ ಇದೇ ಮಾದರಿಯಲ್ಲಿ ಶಿಕ್ಷಣ ನೀಡುತ್ತಿದೆ.
ಮಕ್ಕಳಿಗೆ ಪಾಠದಲ್ಲೇನಾದರೂ ಅನುಮಾನ ಬಂದರೆ ಯಾರದ್ದಾದರೂ ಮೊಬೈಲ್ ಮೂಲಕ ಶಿಕ್ಷಕರಿಗೆ ಕಳಿಸಬಹುದು. ಮರುದಿನದ ಪಾಠದ ವೇಳೆ ಶಿಕ್ಷಕರು ಆ ಅನುಮಾನ ಬಗೆಹರಿಸುತ್ತಾರೆ. ಮುಖ್ಯಶಿಕ್ಷಕ ಶ್ಯಾಂ ಕಿಶೋರ್ ಅವರ ಈ ಉಪಾಯಕ್ಕೆ ಊರಿನ ಹಿರಿಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಫೋನ್ ಇಲ್ಲದ ಮಕ್ಕಳಿಗೆ ರಾಜ್ಯಾದ್ಯಂತ ಇದೇ ರೀತಿಯಲ್ಲಿ ಪಾಠ ಮಾಡಿ ಎಂದು ಜಾರ್ಖಂಡ್ ಸರ್ಕಾರದ ಅಧಿಕಾರಿಗಳು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ