ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

By BK AshwinFirst Published Aug 24, 2022, 4:49 PM IST
Highlights

ಜಾರ್ಖಂಡ್‌ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತೆ ಹಲವು ಕಡೆ ರೇಡ್‌ ನಡೆಸಿದ್ದು, ಈ ವೇಳೆ ಅಲ್ಲಿನ ಸಿಎಂ ಸಹಾಯಕ ಎಂದು ಹೇಳಲಾದ ಪ್ರೇಮ್‌ ಪ್ರಕಾಶ್‌ ಅವರ ಮನೆಯಲ್ಲಿ ಎಕೆ - 47 ಹಾಗೂ ಬುಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿಕಟವರ್ತಿ ಎಂದು ಹೇಳಲಾದ ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಎರಡು ಎಕೆ -47 ರೈಫಲ್‌ಗಳು ಮತ್ತು 60 ಕಾರ್ಟ್ರಿಡ್ಜ್‌ಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಅವರ ಜಾರ್ಖಂಡ್ ನಿವಾಸದಲ್ಲಿ ಇಡಿ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಕಬ್ಬಿಣದ ಅಲ್ಮಿರಾದಲ್ಲಿ ಇರಿಸಲಾಗಿದ್ದ ಎರಡು ಎಕೆ -47 ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಪ್ರೇಮ್ ಪ್ರಕಾಶ್ ಅವರ ನಿವಾಸದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಪೊಲೀಸರೊಂದಿಗೆ ಭದ್ರತಾ ಸಿಬ್ಬಂದಿಗೆ ಸೇರಿವೆ ಎಂದು ಎಸ್‌ಎಚ್‌ಒ ಅರ್ಗೋರಾ ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಕುಮಾರ್ ತಿಳಿಸಿದ್ದಾರೆ.

ಪ್ರೇಮ್ ಪ್ರಕಾಶ್ ಮತ್ತು ಹೇಮಂತ್ ಸೊರೆನ್ ಅವರೊಂದಿಗಿನ ಸಂಬಂಧದ ಬಗ್ಗೆ ನಿರ್ದಿಷ್ಟ ಮಾಹಿತಿಯ ನಂತರ, ಅವರ ನಿವಾಸದಲ್ಲಿ ಶೋಧ ನಡೆಸಲಾಗಿದೆ ಎಂದು ಇಡ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್, ಬಿಹಾರ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಪ್ರೇಮ್ ಪ್ರಕಾಶ್ ಅವರ ನಿವಾಸ ಹೊರತುಪಡಿಸಿ ಇತರ 16 ಸ್ಥಳಗಳಲ್ಲಿ ಸಹ ಇಡಿ ಶೋಧ ಕಾರ್ಯ ನಡೆಸುತ್ತಿದೆ. ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೆನ್ ಕೂಡ ಇಡಿ ಪರಿಶೀಲನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮೂವರು ಕಾಂಗ್ರೆಸ್‌ ಶಾಸಕರಿದ್ದ ಕಾರಲ್ಲಿ ಪತ್ತೆಯಾಯ್ತು ಕಂತೆ ಕಂತೆ ನೋಟು..!

“ವಿವಿಧ ವ್ಯಕ್ತಿಗಳ ಹೇಳಿಕೆಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಒಳಗೊಂಡಂತೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಪುರಾವೆಗಳು ವಶಪಡಿಸಿಕೊಂಡ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಅರಣ್ಯ ಪ್ರದೇಶ ಸೇರಿದಂತೆ ಸಾಹಿಬ್‌ಗಂಜ್ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಪಡೆಯಲಾಗಿದೆ ಎಂದು ಬಹಿರಂಗಪಡಿಸಿದೆ. ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಅಪರಾಧದ ಇನ್ನೂ 100 ಕೋಟಿ ರೂ.ಗಳ ಜಾಡು ಕೂಡ ಪತ್ತೆಯಾಗಿದೆ ಮತ್ತು ಈ ನಿಟ್ಟಿನಲ್ಲಿ ಕಾರ್ಯ ನಡೆಲಾಗುತ್ತಿದೆ” ಎಂದು ಹಣಕಾಸು ತನಿಖಾ ಸಂಸ್ಥೆ ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಮಂತ್ ಸೊರೆನ್ ಅವರ ಶಾಸಕ ಪ್ರತಿನಿಧಿ ಪಂಕಜ್ ಮಿಶ್ರಾ ಸೇರಿದಂತೆ ಅವರ ಆಪ್ತ ಸಹಾಯಕರ 37 ಬ್ಯಾಂಕ್ ಖಾತೆಗಳಿಂದ ಇಡಿ 11.88 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಜಾರ್ಖಂಡ್‌ನ ಸಾಹಿಬ್‌ಗಂಜ್, ಬರ್ಹೆತ್, ರಾಜಮಹಲ್, ಮಿರ್ಜಾ ಚೌಕಿ ಮತ್ತು ಬರ್ಹರ್ವಾ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಈ ವೇಳೆ ಜುಲೈ 8 ರಂದು ಲೆಕ್ಕಕ್ಕೆ ಸಿಗದ 5.34 ಕೋಟಿ ರೂ. ನಗದು ಸಹ ಪತ್ತೆಯಾಗಿತ್ತು. ಅಲ್ಲದೆ, ಅಕ್ರಮವಾಗಿ ನಡೆಸುತ್ತಿದ್ದ ಐದು ಸ್ಟೋನ್ ಕ್ರಷರ್‌ಗಳು ಮತ್ತು ಐದು ಅಕ್ರಮ ಬಂದೂಕು ಕಾಟ್ರಿಡ್ಜ್‌ಗಳನ್ನು ಸಹ ಇಡಿ ವಶಪಡಿಸಿಕೊಂಡಿದೆ.

ಐಎಎಸ್‌ ಅಧಿಕಾರಿ ಆಪ್ತೆ ಬಳಿ 25 ಕೋಟಿ ನಗದು!

ಮೇ ತಿಂಗಳಲ್ಲಿ ಇಡಿ ಎಂಎನ್‌ಆರ್‌ಇಜಿಎ ಹಗರಣಕ್ಕೆ ಸಂಬಂಧಿಸಿದ 36 ಸ್ಥಳಗಳನ್ನು ಶೋಧಿಸಿ 19.76 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು ಈ ವೇಳೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಅವರ ಸಹಚರರ ಜಾಗವನ್ನು ಶೋಧಿಸಲಾಗಿತ್ತು. "ವಿವಿಧ ವ್ಯಕ್ತಿಗಳ ಹುಡುಕಾಟ ಮತ್ತು ಹೇಳಿಕೆಗಳ ಸಮಯದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಸೇರಿದಂತೆ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು, ವಶಪಡಿಸಿಕೊಂಡ ನಗದು ಪ್ರಮುಖ ಭಾಗವು ಅಕ್ರಮ ಗಣಿಗಾರಿಕೆಯಿಂದ ಪಡೆಯಲಾಗಿದೆ ಮತ್ತು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸೇರಿದೆ ಎಂದು ಬಹಿರಂಗಪಡಿಸಿದೆ" ಎಂದು ಇಡಿ ತನ್ನ ಈ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು. ಪೂಜಾ ಸಿಂಘಾಲ್ ಮತ್ತು ಆಕೆಯ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ಇವರು ಜೈಲಿನಲ್ಲಿದ್ದಾರೆ. ಇದುವರೆಗೆ ಗಣಿಗಾರಿಕೆಯಿಂದ ಅಕ್ರಮವಾಗಿ ಸಂಪಾದನೆಯಾಗಿದೆ ಎನ್ನಲಾದ 36.58 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ ಸಂಸ್ಥೆ ವಶಪಡಿಸಿಕೊಂಡಿದೆ.

click me!