
ಹೈದರಾಬಾದ್(ಮಾ.27): ತೆಲಂಗಾಣದಲ್ಲಿ ಹಿಂದಿನ ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ನಡೆಸಲಾದ ಫೋನ್ ಕದ್ದಾಲಿಕೆ ಹಗರಣದ ಮತ್ತಷ್ಟು ಸ್ಫೋಟಕ ವಿಷಯಗಳು ಹೊರಬಿದ್ದಿದೆ. ಆಗ ವಿಪಕ್ಷ ನಾಯಕರಾಗಿದ್ದ, ಹಾಲಿ ಸಿಎಂ ರೇವಂತ್ ರೆಡ್ಡಿ ಅವರ ಫೋನ್ ಕದ್ದಾಲಿಕೆ ಮಾಡಲು, ಅವರ ಮನೆ ಸಮೀಪದಲ್ಲೇ ಕಚೇರಿಯೊಂದನ್ನು ತೆರೆಯಲಾಗಿತ್ತು. ಅಲ್ಲಿ ಇಸ್ರೇಲಿನಿಂದ ತಂದ ಉಪಕರಣ ಇರಿಸಿ ಫೋನ್ ಕದ್ದಾಲಿಸಲಾಗುತ್ತಿತ್ತು. ಈ ಉಪಕರಣ 300 ಮೀಟರ್ ವ್ಯಾಪ್ತಿಯ ಯಾವುದೇ ಕರೆ ಆಲಿಸುವ ಶಕ್ತಿ ಹೊಂದಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಇಂಥ ಗೂಢಚರ್ಯ ಉಪಕರಣದ ತರಿಸಲು ಕೇಂದ್ರದ ಅನುಮತಿ ಕಡ್ಡಾಯ. ಆದರೆ ಸಾಫ್ಟ್ವೇರ್ ಕಂಪನಿಯ ಹೆಸರಲ್ಲಿ ಈ ಉಪಕರಣ ತರಿಸಲಾಗಿತ್ತು. ಇದನ್ನು ಬಳಸಿಕೊಂಡು ಕಾಂಗ್ರೆಸ್, ಬಿಜೆಪಿ ನಾಯಕರು, ಉದ್ಯಮಿಗಳು, ನಟ-ನಟಿಯರ ಫೋನ್ ಕದ್ದಾಲಿಕೆ ನಡೆಸಲಾಗುತ್ತಿತ್ತು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್ ಕದ್ದಾಲಿಕೆ ಕಿಂಗ್ಪಿನ್
ಉದ್ಯಮಿಗಳ ಫೋನ್ ಕದ್ದಾಲಿಕೆ ಮಾಡಿ ಬಳಿಕ ಅದನ್ನು ಆಧರಿಸಿ ಅವರನ್ನು ಬ್ಲಾಕ್ಮೇಲ್ ಮಾಡಲಾಗುತ್ತಿತ್ತು. ಅವರಿಂದ ಬಿಆರ್ಎಸ್ ಪಕ್ಷಕ್ಕೆ ಹೆಚ್ಚಿನ ನಿಧಿ ಸಂಗ್ರಹಿಸಲಾಗುತ್ತಿತ್ತು. ಈ ಫೋನ್ ಕದ್ದಾಲಿಕೆ ಪ್ರಕರಣದಿಂದಾಗಿ ಸೆಲೆಬ್ರಿಟಿ ದಂಪತಿಗಳು ವಿಚ್ಛೇದನ ಕೂಡಾ ಪಡೆಯುವಂತಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಈಗಾಗಲೇ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿದೇಶಕ್ಕೆ ಪರಾರಿಯಾಗಿರುವ ಕೆಲವರ ಪತ್ತೆಗೆ ಲುಕೌಟ್ ನೋಟಿಸ್ ಕೂಡಾ ಜಾರಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ