
ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ನಡುವೆ ಇಸ್ರೇಲ್ ಸೇನೆ ಯು ಗಾಜಾದ 2ನೇ ಅತಿದೊಡ್ಡ ನಗರವಾಗಿರುವ ಖಾನ್ ಯೂನಿಸ್ ನಿವಾಸಿಗಳಿಗೆ ಆ ಸ್ಥಳದಿಂದ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ. ಇಸ್ರೇಲ್ ಹೊಸ ಕಾರ್ಯಾಚರಣೆಯೊಂದಿಗೆ ಗಾಜಾದಲ್ಲಿ ತನ್ನ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸುತ್ತಿದ್ದಂತೆ ಗಾಜಾ ನಿವಾಸಿಗಳನ್ನು ಸ್ಥಳಾಂತರಗೊಳಿಸುವ ಆದೇಶ ಬಂದಿದೆ. ಈ ಬಗ್ಗೆ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚಾಯ್ ಅಡ್ರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇಡೀ ಪ್ರದೇಶವನ್ನು ಅಪಾಯಕಾರಿ ಯುದ್ಧ ವಲಯ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
ಬಲೂಚಿಸ್ತಾನದ ಮಾರುಕಟ್ಟೆಯಲ್ಲಿ ಸ್ಫೋಟ: 4 ಜನರ ಬಲಿ
ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಬ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾನುವಾರ ಬಾಂಬ್ ಸ್ಪೋಟಗೊಂಡು ನಾಲ್ವರು ಬಲಿಯಾಗಿದ್ದಾರೆ. ಇಲ್ಲಿನ ಕಿಲ್ಲಾ ಅಬ್ದುಲ್ಲಾ ಜಿಲ್ಲೆಯ ಜಬ್ಬಾರ್ ಮಾರುಕಟ್ಟೆಯಲ್ಲಿ ನಡೆದ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಿಲ್ಲಾ ಅಬ್ದುಲ್ಲಾ ಜಿಲ್ಲೆಯಲ್ಲಿನ ಸಂಭವಿಸಿದ ಸ್ಫೋಟದಲ್ಲಿ ಅಪಾರ ಹಾನಿಯಾಗಿದ್ದು,ಕಟ್ಟಡಗಳು, ಅಂಗಡಿಗಳು ಧ್ವಂಸಗೊಂಡಿದೆ. ಹಲವೆಡೆ ಬೆಂಕಿ ಕಾಣಿಸಿಕೊಂಡು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನು ಘಟನೆಯಲ್ಲಿ 4 ಮಂದಿ ನಾಗರಿಕರು ಸಾವನ್ನಪ್ಪಿದ್ದರೆ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕ್ನಿಂದ ಬಂದು ಸಿಡಿಯದೇ ಬಿದ್ದಿದ್ದ 42 ಶೆಲ್ಗಳು ನಿಷ್ಕ್ರಿಯ
ಪೂಂಛ್: ಭಾರತದ ಗಡಿಯಲ್ಲಿ ಪಾಕಿಸ್ತಾನದಿಂದ ಹಾರಿಬಂದು ಸಿಡಿಯದೇ ಉಳಿದಿದ್ದ 42 ಶೆಲ್ ಗಳನ್ನು (ಬಾಂಬ್) ಭಾರತದ ಸೇನಾ ಪಡೆಗಳು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿವೆ. ಗಡಿ ನಿಯಂತ್ರಣ ರೇಖೆಗೆ ಗಡಿ ಹೊಂದಿರುವ ಪೂಂಛ್ ಜಿಲ್ಲೆಯ ಝುಲ್ಲಾಸ್, ಸಾಲೋತ್ರಿ, ಧರಾತಿ ಮತ್ತು ಸಲಾನಿ ಎಂಬಲ್ಲಿ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಅಧಿಕಾರಿಗಳು ಯಶಸ್ವಿಯಾಗಿ ಶೆಲ್ಗಳನ್ನು ನಿಷ್ಕ್ರಿ ಯಗೊಳಿಸಿದ್ದಾರೆ. ಇವುಗಳ ಇರುವಿಕೆ ಪತ್ತೆಯಾದ ಬೆನ್ನಲ್ಲೇ ಸೇನೆ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಪ್ರಾಣಹಾನಿ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಯಶಸ್ವಿಯಾಗಿ ಶೆಲ್ಗಳನ್ನು ನಿಷ್ಕ್ರಿಯಗೊಳಿಸಿದೆ.
ಸಂಭಲ್ ಮಸೀದಿ ಸರ್ವೇ ಮುಂದುವರಿಕೆ: ಹೈಕೋರ್ಟ್ ಸಮ್ಮತಿ
ಪ್ರಯಾಗ್ರಾಜ್: ಉತ್ತರ ಪ್ರದೇಶದ ಸಂಭಲ್ನಲ್ಲಿರುವ ಶಾಹಿ ಜಾಮಾ ಮಸೀದಿ ಮತ್ತು ಹರಿಹರ ದೇಗುಲದ ಸರ್ವೇ ನಡೆಸುವಂತೆ ಸಂಭಲ್ ಕೋರ್ಟ್ ನೀಡಿದ್ದ ಆದೇಶದ ವಿರುದ್ದ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಮೊಘಲ್ ಚಕ್ರವರ್ತಿ ಬಾಬರ್ ಸಂಭಲ್ನಲ್ಲಿದ್ದ ಹರಿಹರ ಮಂದಿರ ವನ್ನು 1526ರಲ್ಲಿ ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ವಕೀಲ ಹರಿಶಂಕರ್ ಜೈನ್ ಮೊಕದ್ದಮೆ ಹೂಡಿದ್ದರು. ಬಳಿಕ ಸಂಭಲ್ ಸಿವಿಲ್ ಕೋರ್ಟ್, ಸಮೀಕ್ಷೆಯನ್ನು ನಡೆಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿ ಹೈಕೋರ್ಟ್ ಮೊರೆ ಹೋಗಿತ್ತು.
ಮಾಯಾವತಿ ಬಂಧು ಆಕಾಶ್ ಬಿಎಸ್ಪಿ ನಂ.2 ನಾಯಕನಾಗಿ ನೇಮಕ
ನವದೆಹಲಿ: ರಾಜಕೀಯ ಪ್ರಬುದ್ದತೆ ಕೊರತೆಯ ಕಾರಣ ನೀಡಿ ಬಹುಜನ ಸಮಾಜ ಪಕ್ಷದಿಂದ ತಾವೇ ಉಚ್ಚಾಟಿಸಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಪಕ್ಷದ ಮುಖ್ಯ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ. ಮುಖ್ಯ ರಾಷ್ಟ್ರೀಯ ಯೋಜಕ ಹುದ್ದೆ ಪಕ್ಷದ 2ನೇ ಮುಖ್ಯ ಸ್ಥಾನವಾಗಿದ್ದು, ಇದನ್ನು ಆಕಾಶ್ರಿಗಾಗಿಯೇ ಸೃಷ್ಟಿಸಲಾಗಿದೆ. ಅವರು 3 ರಾಷ್ಟ್ರೀಯ ಸಂಯೋಜಕರ ಮುಖ್ಯಸ್ಥರಾಗಿರಲಿದ್ದಾರೆ. ರಾಜಕೀಯ ಪ್ರಬುದ್ಧತೆ ಕೊರತೆ ಕಾರಣ ನೀಡಿ ಮಾರ್ಚ್ನಲ್ಲಿ ಆಕಾಶ್ರನ್ನು ಬಿಎಸ್ಪಿಯಿಂದ ಹೊರಗಟ್ಟಲಾಗಿತ್ತು. ನಂತರ ಕಳೆದ ತಿಂಗಳು ಕ್ಷಮೆ ಕೇಳಿ ಅವರು ಪಕ್ಷಕ್ಕೆ ವಾಪಸಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ