Insurance Claim: 18 ಲಕ್ಷದ ಚಿನ್ನ ಕಳ್ಳತನ ಕೇಸ್‌ನಲ್ಲಿ 16 ವರ್ಷದ ಬಳಿಕ ಇನ್ಶೂರೆನ್ಸ್ ಕಂಪನಿಗೆ 43 ಲಕ್ಷ ರೂ. ದಂಡ ಹಾಕಿದ ಕೋರ್ಟ್!

Published : Feb 10, 2026, 10:28 PM IST
consumer court verdict

ಸಾರಾಂಶ

ವಿಮೆ ಮಾಡಿಸಿದ್ದ ಚಿನ್ನ ಕಳುವಾದಾಗ ಕ್ಲೇಮ್ ಕೊಡಲು ನಿರಾಕರಿಸಿದ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಶೇ. 9ರ ಬಡ್ಡಿ ಸೇರಿಸಿ 42 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ವಿಮೆ ಮಾಡಿಸಿದ್ದ ಚಿನ್ನ ಕಳ್ಳತನವಾದಾಗ, ಇನ್ಶೂರೆನ್ಸ್ ಕಂಪನಿ ಹಣ ಕೊಡಲು ನಿರಾಕರಿಸಿತು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮಾಲೀಕನಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಗ್ರಾಹಕ ನ್ಯಾಯಾಲಯವು ಸಂತ್ರಸ್ತನಿಗೆ ದೊಡ್ಡ ಮೊತ್ತದ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಇಡೀ ಪ್ರಕರಣ ಶುರುವಾಗಿದ್ದು 2010ರಲ್ಲಿ. ದೆಹಲಿ ನಿವಾಸಿ ಶರ್ಮಾ ಎಂಬುವವರು ತಮ್ಮ ಪತ್ನಿಯ 18.37 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿಗೆ ವಿಮೆ ಮಾಡಿಸಿದ್ದರು. ಈ ಆಭರಣಗಳಿದ್ದ ಬ್ಯಾಗನ್ನು ಸ್ಕೂಟರ್‌ನಲ್ಲಿ ಇಟ್ಟಿದ್ದಾಗ, ಸ್ಕೂಟರ್ ಸಮೇತ ಕಳ್ಳತನವಾಗಿತ್ತು. ಅಲ್ಲಿಂದ ಈ ಕಾನೂನು ಹೋರಾಟ ಶುರುವಾಗಿತ್ತು.

ಕಳ್ಳತನದ ಬಗ್ಗೆ ಕಂಪನಿಯ ಅನುಮಾನ

2010ರ ಜನವರಿಯಲ್ಲಿ, ಶರ್ಮಾ ತಮ್ಮ ಪತ್ನಿಯ ಚಿನ್ನಾಭರಣಗಳನ್ನು ಒಂದು ಬ್ಯಾಗ್‌ನಲ್ಲಿ ಹಾಕಿ ಸ್ಕೂಟರ್‌ನಲ್ಲಿಟ್ಟುಕೊಂಡು ನರೇಲಾ ಕಡೆಗೆ ಹೋಗಿದ್ದರು. ಅಂದು ಸಂಜೆ, ಅವರು ಚಾಂದಿನಿ ಚೌಕ್‌ನ ದರಿಬಾ ಕಲಾನ್‌ನಲ್ಲಿರುವ ಒಂದು ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದರು. ಕೆಲವು ಗಂಟೆಗಳ ನಂತರ ಅಂಗಡಿಯಿಂದ ಹೊರಗೆ ಬಂದು ನೋಡಿದಾಗ, ಚಿನ್ನಾಭರಣಗಳಿದ್ದ ತಮ್ಮ ಸ್ಕೂಟರ್ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣವೇ ಅವರು ಬವಾನಾ ಪೊಲೀಸ್ ಠಾಣೆಯಲ್ಲಿ ನಾನ್-ಕಾಗ್ನಿಸಬಲ್ ರಿಪೋರ್ಟ್ (NCR) ದಾಖಲಿಸಿದರು. 

18.37 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿಗೆ ವಿಮೆ ಮಾಡಿಸಿದ್ದರೂ, ಇನ್ಶೂರೆನ್ಸ್ ಕಂಪನಿ ಕ್ಲೇಮ್ ನೀಡಲು ನಿರಾಕರಿಸಿತು. ಶರ್ಮಾ ಅವರು 2009ರಲ್ಲಿ, ಅಂದರೆ ಘಟನೆಗೂ ಕೆಲವೇ ವಾರಗಳ ಮೊದಲು ಪಾಲಿಸಿ ಖರೀದಿಸಿದ್ದರು ಎಂಬುದನ್ನು ಮುಂದಿಟ್ಟುಕೊಂಡು ಕಂಪನಿ ಅನುಮಾನ ವ್ಯಕ್ತಪಡಿಸಿತು. ಅಷ್ಟೇ ಅಲ್ಲ, ಶರ್ಮಾ ಅವರ ಪ್ರಯಾಣದ ಬಗ್ಗೆಯೂ ಕಂಪನಿ ಪ್ರಶ್ನೆ ಎತ್ತಿತು. ನರೇಲಾ ಮತ್ತು ದರಿಬಾ ಕಲಾನ್‌ ನಡುವೆ 30-35 ಕಿ.ಮೀ ದೂರವಿದೆ, ಶರ್ಮಾ ಯಾಕೆ ಒಬ್ಬರೇ ಮೊದಲು ನರೇಲಾಗೆ ಹೋಗಿ ನಂತರ ದರಿಬಾ ಕಲಾನ್‌ಗೆ ಬಂದರು ಎಂದು ಕಂಪನಿ ಪ್ರಶ್ನೆ ಮಾಡಿತ್ತು.

ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು

ಇನ್ಶೂರೆನ್ಸ್ ಕಂಪನಿ ಹಣ ಕೊಡಲು ನಿರಾಕರಿಸಿದಾಗ, ಶರ್ಮಾ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಇನ್ಶೂರೆನ್ಸ್ ಕಂಪನಿ ಕ್ಲೇಮ್ ನಿರಾಕರಿಸಿದ್ದು ತಪ್ಪು ಎಂದು ತೀರ್ಪು ನೀಡಿತು. ಕ್ಲೇಮ್ ನಿರಾಕರಿಸಿದ ದಿನಾಂಕದಿಂದ ಶೇ. 9ರ ಬಡ್ಡಿಯೊಂದಿಗೆ 17 ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕೆಂದು ಆದೇಶಿಸಿತು. 

ಅದರೊಂದಿಗೆ, ಇನ್ಶೂರೆನ್ಸ್ ಕಂಪನಿಯ ತಪ್ಪಿಗಾಗಿ 50,000 ರೂಪಾಯಿ ಪರಿಹಾರ ಮತ್ತು ಕಾನೂನು ವೆಚ್ಚಗಳನ್ನು ನೀಡುವಂತೆಯೂ ಕೋರ್ಟ್ ಆದೇಶ ನೀಡಿತು. ಈ ತೀರ್ಪಿನ ವಿರುದ್ಧ ಇನ್ಶೂರೆನ್ಸ್ ಕಂಪನಿ ದೆಹಲಿ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತಾದರೂ, ಅದು ವಜಾಗೊಂಡಿತು.

ಆಯೋಗವು, ಈ ಪಾಲಿಸಿಯು ಆಭರಣಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಪಾಯಗಳನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿ, ದೀರ್ಘಕಾಲದ ವಿವಾದಕ್ಕೆ ತೆರೆ ಎಳೆಯಿತು. ಶರ್ಮಾ ಅವರು ಜನವರಿ 8, 2010ರಂದು ಕಳ್ಳತನದ ಬಗ್ಗೆ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿದ್ದರು. ಆದರೆ ಕಂಪನಿ ಒಂದು ವಾರ ತಡವಾಗಿ, ಜನವರಿ 16ರಂದು ಸರ್ವೇಯರ್‌ನನ್ನು ಕಳುಹಿಸಿತ್ತು. ಈ ವಿಳಂಬವನ್ನು ಕೂಡಾ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಅಂತಿಮವಾಗಿ, ಕ್ಲೇಮ್ ನಿರಾಕರಿಸಿದ ದಿನದಿಂದ 16 ವರ್ಷಗಳ ಕಾಲದ ಶೇ. 9ರ ಬಡ್ಡಿ ಸೇರಿಸಿ ಒಟ್ಟು 42,92,719 ರೂಪಾಯಿಗಳನ್ನು ನೀಡಬೇಕೆಂದು ಕೋರ್ಟ್ ಆದೇಶಿಸಿತು. ಇದರ ಜೊತೆಗೆ, ಕಂಪನಿಯ ತಪ್ಪಿಗಾಗಿ ಹೆಚ್ಚುವರಿ 50,000 ರೂಪಾಯಿ ಪರಿಹಾರ ನೀಡುವಂತೆಯೂ ಸೂಚಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ
ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ