ಪ್ರಧಾನಿ ಮೋದಿ ಅವರು ರಾಮನವಮಿಯಂದು ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ನೂತನ ಪಾಂಬನ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಶಿಥಿಲಗೊಂಡ ಹಳೆಯ ಸೇತುವೆಯ ಬದಲಿಗೆ ನಿರ್ಮಾಣಗೊಂಡ ಈ ಸೇತುವೆಯು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಿದೆ.
ರಾಮೇಶ್ವರಂ: ಏ.6ರಂದು ರಾಮನವಮಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಗಳ ಪವಿತ್ರ ಕ್ಷೇತ್ರ ರಾಮೇಶ್ವರಂ ಅನ್ನು ಸಂಪರ್ಕಿಸುವ ನೂತನ ಪಾಂಬನ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಈ ಹಿಂದೆ 1914ರಲ್ಲಿ ನಿರ್ಮಿತ ರೈಲ್ವೆ ಸೇತುವೆಯ ಮೂಲಕ ರಾಮೇಶ್ವರಂಗೆ ರೈಲು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಆ ಸೇತುವೆ ಶಿಥಿಲಗೊಂಡ ಕಾರಣ 2022ರಲ್ಲಿ ರೈಲು ಸಂಪರ್ಕ ಕಡಿತಗೊಳಿಸಲಾಗಿತ್ತು. ಅದರ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದು ಇದೀಗ ಪೂರ್ಣಗೊಂಡಿದೆ. ಈಗಾಗಲೇ ಈ 2 ಕಿ.ಮೀ. ಉದ್ದದ ಸೇತುವೆಯಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಅಂದು ರೈಲು ಸಂಚಾರಕ್ಕೂ ಮೋದಿ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಸೇತವೆ ವೈಶಿಷ್ಟ್ಯ:
ಇದು ಭಾರತದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಆಗಲಿದೆ. ಸಮುದ್ರಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಸೇತುವೆಯು ಮೇಲಕ್ಕೆತ್ತಲ್ಪಟ್ಟು, ಬಳಿಕ ಅದು ಸ್ವಸ್ಥಾನಕ್ಕೆ ಮರಳಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ಇದಾಗಿದೆ.