
ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ತಾಲಿಬಾನಿಗಳ ಸರ್ಕಾರ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹೆಣ್ಮಕ್ಕಳಿಗೆ ಕಟ್ಟುನಿಟ್ಟಿನ ರೂಲ್ಸು. ಬೇಕಾಬಿಟ್ಟಿ ಇರೋ ಹಾಗೆ ಇಲ್ಲ. ತಮ್ಮಿಷ್ಟದಂತೆ ಎಲ್ಲೆಂದರಲ್ಲಿ ಹೋಗುವ ಹಾಗಿಲ್ಲ. ಅಲ್ಲಿನ ಸರ್ಕಾರ ಕಠಿಣ ನಿಯಮಗಳಿಂದಾಗಿ ಭಾರತದ ಟ್ರಾವಲ್ ವ್ಲಾಗರ್ ಒಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೆಸರು ಬ್ಯಾಕ್ಪ್ಯಾಕರ್ ಅರುಣಿಮ ( Backpacker Arunima). ಇವರು ಕೇರಳ ಮೂಲದವರಾಗಿದ್ದು, ಟ್ರಾವೆಲ್ ವ್ಲಾಗರ್ ಆಗಿದ್ದಾರೆ. ಅಫ್ಘಾನಿಸ್ತಾನ ಪ್ರವಾಸದಲ್ಲಿರುವ ಇವರು ಅಲ್ಲಿನ ಸರ್ಕಾರ ನಿಯಮಗಳನ್ನ ಗಾಳಿಗೆ ತೂರಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ ಇಷ್ಟೇ, ಅವರು ಅಫ್ಘಾನ್ನಲ್ಲಿ ಯಾವುದೇ ಪುರುಷ ಮಾರ್ಗದರ್ಶಿ ಇಲ್ಲದೇ ಒಬ್ಬಂಟಿಯಾಗಿ ಪ್ರಯಾಣಿಸುತ್ತಿರೋದು ತಾಲಿಬಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಮ್ಯಾನ್ ಎಂಬ ಪ್ರಾಂತ್ಯದಲ್ಲಿ ತಾಲಿಬಾನ್ ಅಧಿಕಾರಿಗಳು ಅವರನ್ನು ಬಂಧಿಸುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಅರುಣಿಮ ಅವರು ಸಂಜೆ 7 ಗಂಟೆ ಸುಮಾರಿಗೆ ಬಮ್ಯಾನ್ ತಲುಪಿದ್ದರು. ಒಬ್ಬಂಟಿಯಾಗಿ ಬಂದ ಮಹಿಳೆಯನ್ನು ನೋಡಿದ ತಾಲಿಬಾನಿ ಅಧಿಕಾರಿಗಳು ಅವರ ಪಾಸ್ಪೋರ್ಟ್, ವೀಸಾ ಹಾಗೂ ಪ್ರಯಾಣದ ಪರ್ಮಿಟ್ ಪರಿಶೀಲಿಸಿದ್ದಾರೆ.
ತಾಲಿಬಾನಿಗಳ ಕಾನೂನಿನ ಪ್ರಕಾರ ಮಹಿಳೆಯರು 'ಮಹ್ರಮ್' (ಪುರುಷ ರಕ್ಷಕ/ಸಂಗಾತಿ) ಅಥವಾ ಅಧಿಕೃತ ಗೈಡ್ ಇಲ್ಲದೆ ಒಬ್ಬಂಟಿಯಾಗಿ ಪ್ರಯಾಣಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಆ ದೇಶದ ನಿಯಮಗಳ ಪ್ರಕಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅರುಣಿಮ ಅವರನ್ನು ತಡೆದು ವಿಚಾರಿಸಿದ್ದಾರೆ. ನಂತರ ವಶಕ್ಕೂ ಪಡೆದಿದ್ದಾರೆ ಎಂದು ವರದಿಯಾಗಿದೆ.
ಯಾವಾಗ ತಾಲಿಬಾನಿಗಳು ತಮ್ಮನ್ನ ಬಿಡಲ್ಲ ಅಂತಾ ಗೊತ್ತಾಯಿತೋ ಆಗ ಅರುಣಿಮ ಅವರು ಅಲ್ಲಿನ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಅಲ್ಲಿಗೆ ಆಗಮಿಸಿದ ಆ ವ್ಯಕ್ತಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರ ದಂಡದ ಪ್ರಕ್ರಿಯೆಯೊಂದಿಗೆ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ. ನಂತರ ಅರುಣಿಮಗೆ ಉಜ್ಬೇಕಿಸ್ತಾನ್ ಗಡಿಯತ್ತ ತೆರಳಲು ಅನುಮತಿ ನೀಡಲಾಗಿದೆ ಎಂದು ವರದಿಗಳು ಹೇಳಿವೆ.
ಕೆಟ್ಟ ಪರಿಸ್ಥಿತಿಯಲ್ಲಿದ್ದ ಅರುಣಿಮ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ನಾನು ಅಫ್ಘಾನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇನೆ. ತಕ್ಷಣ ಭಾರತೀಯ ರಾಯಭಾರ ಕಚೇರಿಯನ್ನ ಸಂಪರ್ಕಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ನಾನು ಮಹಿಳೆ ಆಗಿದ್ದಕ್ಕೆ ಈ ಎಲ್ಲಾ ತೊಂದರೆ ಎದುರಿಸಬೇಕಾಯಿತು. ಮುಂದೆ ನಾನು 500 ಕಿಲೋ ಮೀಟರ್ ದೂರದಲ್ಲಿರುವ ಉಜ್ಬೇಕಿಸ್ತಾನ್ ಗಡಿಯತ್ತ ಹೋಗಬೇಕಾಗಿದೆ. ದಾರಿಯುದ್ದಕ್ಕೂ ಹಲವು ಪರಿಶೀಲನಾ ಪೋಸ್ಟ್ಗಳನ್ನು (Checkpoints) ಎದುರಿಸಬೇಕು. ಒಂದು ರೀತಿಯ ಭಯ ಆವರಿಸಿದೆ ಎಂದು ವ್ಲಾಗರ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ