ಪಾಕಿಸ್ತಾನಕ್ಕೆ ಹೋದ 52ರ ಮಹಿಳೆ ಭಾರತಕ್ಕೆ ವಾಪಸ್ ಆಗಿಲ್ಲ, ಇಸ್ಲಾಂಗೆ ಮತಾಂತರವಾಗಿ ಮದುವೆ!

Published : Nov 15, 2025, 04:17 PM IST
Indian Sikh Woman Missing in Pakistan Reportedly Converts and Marries

ಸಾರಾಂಶ

ಗುರುನಾನಕ್ ಪ್ರಕಾಶ್ ಪರ್ವ್ ಆಚರಿಸಲು ಪಾಕಿಸ್ತಾನಕ್ಕೆ ಹೋದ ಯಾತ್ರಾರ್ಥಿಗಳ ಗುಂಪಿನಿಂದ ನಾಪತ್ತೆಯಾದ ಭಾರತೀಯ ಸಿಖ್ ಮಹಿಳೆ ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಅವರ ನಾಪತ್ತೆ ಬಗ್ಗೆ ಭಾರತೀಯ ಏಜೆನ್ಸಿಗಳು ತನಿಖೆ ಶುರು ಮಾಡಿವೆ.

ಚಂಡೀಗಢ: ಗುರುನಾನಕ್ ದೇವ್ ಅವರ ಪ್ರಕಾಶ್ ಪರ್ವ್ ಆಚರಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಯಾತ್ರಾರ್ಥಿಗಳ ಗುಂಪಿನಿಂದ ನಾಪತ್ತೆಯಾಗಿದ್ದ ಭಾರತೀಯ ಸಿಖ್ ಮಹಿಳೆಯೊಬ್ಬರು ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾರೆ ಎಂದು ದಾಖಲೆಗಳು ತಿಳಿಸಿವೆ.

ಸಿಖ್ ಮಹಿಳೆ ಸರಬ್ಬಿತ್ ಕೌರ್ ಇಸ್ಲಾಂಗೆ ಮತಾಂತರ:

ಪಂಜಾಬ್‌ನ ಕಪುರ್ತಲಾ ನಿವಾಸಿ 52 ವರ್ಷದ ಸರಬ್ಜಿತ್ ಕೌರ್ ಬಗ್ಗೆ ಈ ಮಹತ್ವದ ಮಾಹಿತಿ ಹೊರಬಿದ್ದಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ನವೆಂಬರ್ 4 ರಂದು ಯಾತ್ರಾರ್ಥಿಗಳ ತಂಡ ವಾಘಾ-ಅಟ್ಟಾರಿ ಗಡಿ ದಾಟಿ ಪಾಕಿಸ್ತಾನವನ್ನು ಪ್ರವೇಶಿಸಿತ್ತು. ಈ ವರ್ಷದ ಪ್ರಕಾಶ್ ಪರ್ವ್ ಗುರುನಾನಕ್ ದೇವ್ ಅವರ 555ನೇ ಜನ್ಮದಿನವಾಗಿತ್ತು. ಸುಮಾರು 10 ದಿನಗಳ ಕಾಲ ಪಾಕಿಸ್ತಾನದಲ್ಲಿ ಕಳೆದ ನಂತರ, 1,992 ಸಿಖ್ ಯಾತ್ರಾರ್ಥಿಗಳ ತಂಡವು ನವೆಂಬರ್ 13 ರಂದು ಭಾರತಕ್ಕೆ ಮರಳಿತು. ಆದರೆ, ಈ ಗುಂಪಿನಲ್ಲಿ ಸರಬ್ಜಿತ್ ಕೌರ್ ಇರಲಿಲ್ಲ.

ಈಗ ಹೊರಬಿದ್ದಿರುವ 'ನಿಕ್ಕಾನಾಮ' (ಇಸ್ಲಾಮಿಕ್ ವಿವಾಹ ಒಪ್ಪಂದ) ಎಂಬ ಉರ್ದು ದಾಖಲೆಯಲ್ಲಿ, ಲಾಹೋರ್‌ನಿಂದ ಸುಮಾರು 56 ಕಿ.ಮೀ ದೂರದಲ್ಲಿರುವ ಶೇಖುಪುರದ ನಿವಾಸಿ ನಾಸಿರ್ ಹುಸೇನ್ ಅವರನ್ನು ಕೌರ್ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ. ಮದುವೆಗೂ ಮುನ್ನ ಅವರು ಇಸ್ಲಾಂಗೆ ಮತಾಂತರಗೊಂಡು ತಮ್ಮ ಹೆಸರನ್ನು ನೂರ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಈ ದೃಢೀಕರಿಸದ ದಾಖಲೆಯಲ್ಲಿ ಹೇಳಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸರಬ್ಜಿತ್ ಮೊದಲ ಮದುವೆಯಿಂದ ವಿಚ್ಛೇದನ ಪಡೆದಿದ್ದರು. ಸುಮಾರು 30 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವ ಕರ್ನೈಲ್ ಸಿಂಗ್ ಅವರ ಪತಿಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ತನಿಖೆಯ ವಿವರಗಳು

ಸರಬ್ಜಿತ್ ಕೌರ್ ಅವರ ಪಾಸ್‌ಪೋರ್ಟ್ ಪಂಜಾಬ್‌ನ ಮುಕ್ತ್ಸರ್ ಜಿಲ್ಲೆಯಿಂದ ನೀಡಲಾಗಿದೆ. ಅವರು ಪಾಕಿಸ್ತಾನದಿಂದ ನಿರ್ಗಮಿಸಿದ ಅಥವಾ ಭಾರತವನ್ನು ಪ್ರವೇಶಿಸಿದ ವಲಸೆ ದಾಖಲೆಗಳಲ್ಲಿ ಅವರ ಹೆಸರು ಕಾಣಿಸದ ಕಾರಣ, ಅವರು ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದಾರೆ ಎಂದು ದಾಖಲೆಗಳು ಸೂಚಿಸುತ್ತವೆ. ಸರಬ್ಜಿತ್ ಕೌರ್ ಭಾರತಕ್ಕೆ ಹಿಂತಿರುಗದಿದ್ದಾಗ, ಇಲ್ಲಿನ ವಲಸೆ ಇಲಾಖೆ ತಕ್ಷಣ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸರು ಪ್ರಾಥಮಿಕ ವರದಿಯನ್ನು ಇತರ ಭಾರತೀಯ ಏಜೆನ್ಸಿಗಳಿಗೂ ಕಳುಹಿಸಿದ್ದಾರೆ. ಅವರ ನಾಪತ್ತೆಗೆ ಸಂಬಂಧಿಸಿದಂತೆ ಭಾರತೀಯ ಮಿಷನ್ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

ಸಿಖ್ಖರ ಸರ್ವೋಚ್ಚ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು, ಪ್ರತಿ ವರ್ಷ ಐತಿಹಾಸಿಕ ಗುರುದ್ವಾರಗಳಿಗೆ, ವಿಶೇಷವಾಗಿ ಗುರುನಾನಕ್ ಅವರ ಪ್ರಕಾಶ್ ಪರ್ವ್ ದಿನದಂದು ಗೌರವ ಸಲ್ಲಿಸಲು ಯಾತ್ರಾರ್ಥಿಗಳ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆ. ಭದ್ರತಾ ಕಾರಣಗಳನ್ನು ನೀಡಿ ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ಸುಮಾರು ಎರಡು ವಾರಗಳ ನಂತರ, ಗಡಿಯಾಚೆಗಿನ ನಂಕಾನಾ ಸಾಹಿಬ್ ದೇಗುಲಕ್ಕೆ 10 ದಿನಗಳ ತೀರ್ಥಯಾತ್ರೆ ಕೈಗೊಳ್ಳಲು ಸರ್ಕಾರ ಕಳೆದ ತಿಂಗಳು ಸಿಖ್ ಭಕ್ತರಿಗೆ ಅವಕಾಶ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ