
BRICS ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವ ನಾಯಕರು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ, ರಷ್ಯಾ ಸೇರಿದಂತೆ ಬಲಾಡ್ಯ ರಾಷ್ಟ್ರಗಳ ನಾಯಕರು ಆಗಮಿಸಿದ್ದಾರೆ. ಪ್ರಧಾನಿ ಮೋದಿ ಭಾರತ ಇತಿಹಾಸ ಪರಂಪರೆ ಜೊತೆಗೆ ಇಲ್ಲಿನ ಆಹಾರ ಪದ್ಧತಿಯಂತೆ ಗಣ್ಯರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಅದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬ್ರಿಕ್ಸ್ ಶೃಂಗಸಭೆಗೆ ಆಗಮಿಸಿದ್ದ ಗಣ್ಯರಿಗೆ ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ಕೇವಲ ಸಸ್ಯಾಹಾರ ಬಡಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರೋಕ್ಷವಾಗಿ ಟೀಕಿಸಿದ್ದಾರೆ.
ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ನನ್ನ ಸಹೋದರಿ ಮಾಡುವ ಛೋಲೆ ಬಟೂರೆಯಷ್ಟೇ ಭಾರತೀಯ ನಾನ್-ವೆಜ್ ಊಟ ಕೂಡಾ ತುಂಬಾ ರುಚಿಕರವಾಗಿರುತ್ತದೆ. ಆದರೆ ಔತಣಕೂಟದಲ್ಲಿ ವಿದೇಶಿ ಗಣ್ಯರಿಗೆ ಕೇವಲ ಸಸ್ಯಾಹಾರ ಬಡಿಸಲಾಗಿದೆ ಎಂದು ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಇದರಲ್ಲಿ ಭಾರತದ ಸಾಂಪ್ರದಾಯಿಕ ರುಚಿ ಮತ್ತು ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳ ಖಾದ್ಯಗಳನ್ನು ಮಾತ್ರ ಬಡಿಸಲಾಗಿತತು. ಆದರೆ ಔತಣಕೂಟದ ಮೇನುವಿನಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. ಗುಜರಾತಿ ಖಾದ್ಯವಾದ ಖಾಂಡ್ವಿ, ಪನೀರ್ ಲಬಾಬ್ದಾರ್, ಮಿಲೆಟ್ ಪುಲಾವ್ ಮತ್ತು ಜಿಲೇಬಿಯಂತಹ ಭಾರತೀಯ ಖಾದ್ಯಗಳು ಅತಿಥಿಗಳ ಮನಗೆದ್ದವು. ಈ ಔತಣಕೂಟಕ್ಕೆ ವಿದೇಶಿ ಗಣ್ಯರಲ್ಲದೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಿಗೂ ಆಹ್ವಾನ ನೀಡಲಾಗಿತ್ತು.
ಆದರೆ, ಈ ಔತಣಕೂಟದಿಂದ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದೂರ ಉಳಿದಿದ್ದರು. ಶನಿವಾರ ಭಾರತ್ ಮಂಟಪದಲ್ಲಿ ಮೋದಿ ಆಯೋಜಿಸಿದ್ದ ಈ ಡಿನ್ನರ್ನಲ್ಲಿ ಕ್ಸಿ ಜಿನ್ಪಿಂಗ್ ಭಾಗವಹಿಸಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಅವರ ಗೈರುಹಾಜರಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಔತಣಕೂಟದಲ್ಲಿ ಭಾರತೀಯ ಸಂಪ್ರಾದಾಯಿಕ ತಿಂಡಿಗಳಿಗೆ ಗಣ್ಯರು ಮನಸೋತಿದ್ದಾರೆ. ಆದರೆ ಮಾಂಸಾಹಾರ ವಿಚಾರವಾಗಿ ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆ ಇದೀಗ ರಾಜಕೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ