ಇಂದು ಸಂಸತ್‌ ಅಧಿವೇಶನಶುರು: ನಾಳೆ ಕೇಂದ್ರ ಬಜೆಟ್‌!

Published : Jul 22, 2024, 05:24 AM ISTUpdated : Jul 23, 2024, 08:39 AM IST
ಇಂದು ಸಂಸತ್‌ ಅಧಿವೇಶನಶುರು: ನಾಳೆ ಕೇಂದ್ರ ಬಜೆಟ್‌!

ಸಾರಾಂಶ

ಇಂದು ಸಂಸತ್‌ ಅಧಿವೇಶನಶುರು: ನಾಳೆ ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಜು.22ರಿಂದ ಆ.12ರ ವರೆಗೆ 19 ದಿನಗಳ ಕಲಾಪದಲ್ಲಿ ನೀಟ್, ನೆಟ್ ಅಗ್ನಿವೀರರ ಬಗ್ಗೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆಯಿದೆ.  

ನವದೆಹಲಿ (ಜು.22): ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ಹೊಸ ಶಕ್ತಿಯೊಂದಿಗೆ ಸನ್ನದ್ಧವಾಗಿರುವ ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ನಿರೀಕ್ಷೆ ಇರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಜು.22ರಿಂದ ಆ.12ರವರೆಗೆ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ.

ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆರ್ಥಿಕ ಸಮೀಕ್ಷಾ ವರದಿ ಮಂಡಿಸಲಿದ್ದಾರೆ. ಜು.23ರ ಮಂಗಳವಾರ ನಿರ್ಮಲಾ ತಮ್ಮ ದಾಖಲೆಯ ಸತತ 7ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ರಾಹುಲ್ ಗಾಂಧಿಯದ್ದು ಹಿಂದೂ ವಿರೋಧಿ ನೀತಿ, ಆತ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ: ಶಾಸಕ ಭರತ್ ಶೆಟ್ಟಿ ವಾಗ್ದಾಳಿ

 

ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಕನಸುಗಳೊಂದಿಗೆ ಜನರ ಮುಂದೆ ಬರುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರದ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದರು. ಬಳಿಕ ಲೋಕಸಭೆಗೆ ಚುನಾವಣೆ ನಡೆದಿತ್ತು. ಈಗ ಹೊಸ ಸರ್ಕಾರ ಬಂದಿರುವುದರಿಂದ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದ್ದಾರೆ.

ಭಾರೀ ವಾಕ್ಸಮರ:

19 ದಿನಗಳ ಅಧಿವೇಶನದ ವೇಳೆ ನೀಟ್‌, ನೆಟ್‌ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮ, ಐಎಎಸ್‌ ಅಧಿಕಾರಿಗಳ ನೇಮಕದ ಗೊಂದಲ, ಅಗ್ನಿವೀರ ಯೋಜನೆಯ ನ್ಯೂನತೆ, ಮಣಿಪುರ ಹಿಂಸಾಚಾರ, ಬೆಲೆ ಏರಿಕೆ, ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರ ದಾಳಿ, ಉತ್ತರಪ್ರದೇಶದ ನಾಮಫಲಕ ವಿವಾದ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಹಣಿಯಲು ವಿಪಕ್ಷಗಳು ಸಜ್ಜಾಗಿವೆ.

6 ಮಸೂದೆ:

ಈ ಅಧಿವೇಶನದಲ್ಲಿ ಒಟ್ಟು ಆರು ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 1934ರ ಏರ್‌ಕ್ರಾಫ್ಟ್‌ ಕಾಯ್ದೆಯನ್ನು ರದ್ದುಪಡಿಸಿ ಹೊಸ ಕಾಯ್ದೆ ತರಲು ಭಾರತೀಯ ವಾಯುಯಾನ ವಿಧೇಯಕ ಮಂಡಿಸಲಾಗುತ್ತದೆ. ಹಾಗೆಯೇ, 2024ನೇ ಸಾಲಿನ ಹಣಕಾಸು ಮಸೂದೆ, ಸ್ವಾತಂತ್ರ್ಯಪೂರ್ವಕ್ಕಿಂತ ಹಳೆಯ ಕಾಯ್ದೆಯನ್ನು ಬದಲಿಸಲು ಬಾಯ್ಲರ್ಸ್‌ ಮಸೂದೆ, ಕಾಫಿ ಮಸೂದೆ, ರಬ್ಬರ್‌ ಮಸೂದೆ ಮತ್ತು ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ. 

ನಿರ್ಮಲಾ 7ನೇ ಬಜೆಟ್‌: ದಾಖಲೆ

ಜು.23ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ 7ನೇ ಬಜೆಟ್‌ ಮಂಡಿಸಲಿದ್ದಾರೆ. ಇದು ಕೇಂದ್ರದಲ್ಲಿ ಯಾವುದೇ ಒಬ್ಬ ವಿತ್ತ ಸಚಿವರು ಸತತವಾಗಿ ಮಂಡಿಸಿದ ಗರಿಷ್ಠ ಬಜೆಟ್‌ ಆಗಲಿದೆ. ಲೋಕಸಭೆ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲಿ ಅವರು ಮಧ್ಯಂತರ ಬಜೆಟ್‌ ಮಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ