Breaking: ಪಾಕ್‌ ಮೇಲೆ ಮೋದಿ ಜಲಬಾಂಬ್‌, ಭಾರತದಲ್ಲಿನ ಪಾಕ್‌ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!

Published : Apr 23, 2025, 09:12 PM ISTUpdated : Apr 23, 2025, 11:13 PM IST
Breaking: ಪಾಕ್‌ ಮೇಲೆ ಮೋದಿ ಜಲಬಾಂಬ್‌, ಭಾರತದಲ್ಲಿನ ಪಾಕ್‌ ಪ್ರಜೆಗಳಿಗೆ ದೇಶ ಬಿಡಲು 48 ಗಂಟೆ ಗಡುವು!

ಸಾರಾಂಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭದ್ರತಾ ಸಂಪುಟ ಸಮಿತಿ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿ, ಅಟ್ಟಾರಿ ಗಡಿಯನ್ನು ಮುಚ್ಚಿದೆ. ೨೫ ಪಾಕಿಸ್ತಾನಿ ರಾಜತಾಂತ್ರಿಕರನ್ನು ದೇಶ ಬಿಡಲು ಸೂಚಿಸಿ, ಪಾಕಿಸ್ತಾನಿ ಪ್ರಜೆಗಳಿಗೆ ೪೮ ಗಂಟೆಯೊಳಗೆ ತೆರಳಲು ಆದೇಶಿಸಿದೆ. ಹೊಸ ವೀಸಾ ನಿಷೇಧಿಸಿ, ನೀಡಿರುವ ವೀಸಾಗಳನ್ನು ರದ್ದುಗೊಳಿಸಲಾಗುವುದು.

ನವದೆಹಲಿ (ಏ.23): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪೈಶಾಚಿಕ ಭಯೋತ್ಪಾದಕ ದಾಳಿಯ ಬೆನ್ನಲ್ಲಿಯೇ ಭದ್ರತಾ ಸಂಪುಟ ಸಮಿತಿ ಸಭೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಎರಡೂವರೆ ಗಂಟೆಗಳ ಹೈವೋಲ್ಟೇಜ್‌ ಸಭೆಯಲ್ಲಿ ಕೆಲವು ಮಹತ್ವದ ಕಠಿಣ ನಿರ್ಧಾರಗಳನ್ನು ಮಾಡಲಾಗಿದೆ. ಪಹಲ್ಗಾಮ್‌ ದಾಳಿಯ ಬೆನ್ನಲ್ಲಿಯೇ ಮೊಟ್ಟಮೊದಲ ಹಂತವಾಗಿ ರಾಜತಾಂತ್ರಿಕವಾಗಿ ಕೆಲವು ನಿರ್ಧಾರಗಳನ್ನು ಮಾಡಲಾಗಿದೆ.

ಇದರಲ್ಲಿ ಪ್ರಮುಖವಾಗಿ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ರದ್ದು ಮಾಡಲು ಭಾರತ ಸರ್ಕಾರ ತೀರ್ಮಾನ ಮಾಡಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಟ್ಟಾರಿ ಗಡಿಯನ್ನು ಬಂದ್‌ ಮಾಡುವಂತೆ ಸೂಚನೆ ನೀಡಿದೆ. ಅಲ್ಲಿ ನಡೆಯುತ್ತಿದ್ದ ಎಲ್ಲಾ ಸೇನಾ ಕಾರ್ಯಕಮಗಳನ್ನು ರದ್ದು ಮಾಡುವಂತೆ ಭಾರತ ಸರ್ಕಾರ ನಿರ್ಧಾರ ಮಾಡಿದೆ. ಅದರೊಂದಿಗೆ ಭಾರತದಲ್ಲಿರುವ 55 ರಾಜತಾಂತ್ರಿಕರ ಪೈಕಿ 25 ಪಾಕಿಸ್ತಾನದ ರಾಜತಾಂತ್ರಿಕರನ್ನು ಒಂದು ವಾರದ ಒಳಗಾಗಿ  ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ. ಇನ್ನು ಭಾರತದಲ್ಲಿ ಇರುವ ಪಾಕಿಸ್ತಾನದ ಪ್ರಜೆಗಳಿಗೆ 48 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರ ಒಳಗಾಗಿ ದೇಶ ಬಿಡುವಂತೆ ಸರ್ಕಾರ ಆದೇಶ ನೀಡಿದೆ.  ಇದಲ್ಲದೆ, ಭಾರತ ಕೇವಲ ಪಾಕಿಸ್ತಾನಿ ರಕ್ಷಣಾ ಅಟ್ಯಾಚ್‌ಮೆಂಟ್‌ ಮಾತ್ರ ಹೊರಹಾಕಲಾಗಿಲ್ಲ. ಅಲ್ಲಿನ ಹುದ್ದೆಗಳನ್ನು ರದ್ದು ಮಾಡಿದೆ. ಇದರರ್ಥ ಇನ್ನು ಮುಂದೆ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಸುಧಾರಣೆಯಾದರೂ ಸಹ ಯಾವುದೇ ರಕ್ಷಣಾ ಅಟ್ಯಾಚ್‌ಗಳು ಇರುವುದಿಲ್ಲ.

ಇನ್ನು ಪಾಕಿಸ್ತಾನದ ಯಾವುದೇ ಪ್ರಜೆಗಳಿಗೆ ವೀಸಾ ಸಿಗೋದಿಲ್ಲ, ಈಗಾಗಲೇ ನೀಡಲಾಗಿರುವ ವೀಸಾ ಇನ್ನು 48 ಗಂಟೆಗಳಲ್ಲಿ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರದ ಎದುರು ಮಿಲಿಟರಿ ಕ್ರಮದ ಆಯ್ಕೆಯೂ ಇದ್ದು, ಇದರ ಬಗ್ಗೆಯೂ ಸಿಸಿಎಸ್‌ನಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ನಾಳೆ ಸರ್ವಪಕ್ಷ ಸಭೆ: ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪರಿಸ್ಥಿತಿಯ ಕುರಿತು ನಾಳೆ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ಪಕ್ಷಗಳೊಂದಿಗೆ ಈ ಬಗ್ಗೆ ಮಾತನಾಡಲಿದ್ದಾರೆ.

ಈ ಭಯೋತ್ಪಾದಕ ದಾಳಿಯ ಗಂಭೀರತೆಯನ್ನು ಗುರುತಿಸಿ, ಭದ್ರತಾ ಸಂಪುಟ ಸಮಿತಿ (CCS) ಈ ಕೆಳಗಿನ ಕ್ರಮಗಳನ್ನು ನಿರ್ಧರಿಸಿದೆ  ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ತ್ಯಜಿಸುವವರೆಗೆ 1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗುತ್ತದೆ.


2. ಭಾರತದ ಹಾಗೂ ಪಾಕಿಸ್ತಾನದ ನಡುವೆ ಇರುವ ಅಟ್ಟಾರಿ ಸಮಗ್ರ ಚೆಕ್‌ಪೋಸ್ಟ್‌ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲಾಗುತ್ತದೆ. ಮಾನ್ಯ ಒಪ್ಪಿಗೆಯೊಂದಿಗೆ ಇಲ್ಲಿಂದ ಗಡಿಯನ್ನು ದಾಟಿದವರು ಮೇ 1 ರ ಒಳಗಾಗಿ ಈ ಮಾರ್ಗದ ಮೂಲಕವೇ ವಾಪಾಸಗಬೇಕು ಎಂದು ತಿಳಿಸಲಾಗಿದೆ.

3. SAARC ವೀಸಾ ವಿನಾಯಿತಿ ಯೋಜನೆಯಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ಹಿಂದೆ ನೀಡಲಾದ ಯಾವುದೇ SPES ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ. SPES ವೀಸಾದಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆಗೆ ಪ್ರಸ್ತುತ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶವಿದೆ.

4.ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.

ಪಹಲ್ಗಾಮ್ ದಾಳಿಯಲ್ಲಿ ಕೈವಾಡ ಇಲ್ಲದಿದ್ರೆ ಈವರೆಗೆ ಏಕೆ ಖಂಡಿಸಿಲ್ಲ; ದೇಶದ ಪ್ರಧಾನಿಯನ್ನೇ ಪ್ರಶ್ನಿಸಿದ ಪಾಕ್ ಮಾಜಿ ಕ್ರಿಕೆಟಿಗ!

5. ಪಾಕಿಸ್ತಾದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳನ್ನು ಭಾರತ ವಾಪಾಸ್‌ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಪಾಕ್‌ಗೆ ಪಾಠ ಕಲಿಸಲು ಭಾರತದ ಮುಂದಿರುವ ಕ್ರಮಗಳೇನು?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು