
ನವದೆಹಲಿ, (ಮೇ.10): ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀಕ್ಷ್ಣವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ಪಾಕಿಸ್ತಾನವು ತನ್ನ ಭೂಪ್ರದೇಶವನ್ನು ಭಯೋತ್ಪಾದನೆಗೆ ಸುರಕ್ಷಿತ ತಾಣವಾಗಿ ಬಳಸುವವರೆಗೆ ಎರಡೂ ದೇಶಗಳ ನಡುವೆ ಶಾಶ್ವತ ಶಾಂತಿ ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. 'ಕದನ ವಿರಾಮವಿದ್ದರೂ ಇಲ್ಲದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ.
ಬಾಹ್ಯ ಆಕ್ರಮಣ ವಿಚಾರದಲ್ಲಿ ನಾನು ಯಾವತ್ತೂ ನಮ್ಮ ಸೈನ್ಯದ ಪರ:
ಸಶಸ್ತ್ರ ಪಡೆಗಳ ಧೈರ್ಯ ಮತ್ತು ಕೌಶಲ್ಯವನ್ನು ಶ್ಲಾಘಿಸಿರುವ ಓವೈಸಿ, ಬಾಹ್ಯ ಆಕ್ರಮಣದ ವಿರುದ್ಧ ನಾನು ಯಾವಾಗಲೂ ಸರ್ಕಾರ ಮತ್ತು ಸಶಸ್ತ್ರ ಪಡೆಗಳೊಂದಿಗೆ ನಿಂತಿದ್ದೇನೆ. ಪಾಕಿಸ್ತಾನದ ದಾಳಿಗೆ ಹುತಾತ್ಮರಾಗಿರುವ ಸೇನಾ ಸಿಬ್ಬಂದಿ ಎಂ ಮುರಳಿ ನಾಯಕ್ ಮತ್ತು ಎಡಿಸಿಸಿ ರಾಜ್ ಕುಮಾರ್ ಥಾಪಾ ಅವರಿಗೆ ಗೌರವ ಸಲ್ಲಿಸುತ್ತೇನೆ. ಸಂಘರ್ಷದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡ ನಾಗರಿಕರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕದನ ವಿರಾಮವು ಗಡಿಪ್ರದೇಶದ ಜನರಿಗೆ ಪರಿಹಾರ ಎಂದು ಆಶಿಸಿದ್ದಾರೆ.
ಇದನ್ನೂ ಓದಿ: 'ಪ್ರಧಾನಿಗಳೇ ಅಮೆರಿಕವನ್ನು ತಂದೆಯಾಗಲು ಬಿಡಬೇಡಿ' ಕದನ ವಿರಾಮ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಪಪ್ಪು ಯಾದವ್ ಕಿಡಿ!
ಮೋದಿ ಸರ್ಕಾರಕ್ಕೆ ಓವೈಸಿಯ ಪ್ರಶ್ನೆಗಳ ಸುರಿಮಳೆ
ಓವೈಸಿ ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನೆತ್ತಿದ್ದಾರೆ. 'ವಿದೇಶಿ ರಾಷ್ಟ್ರದ ಅಧ್ಯಕ್ಷರ ಬದಲು ನಮ್ಮ ಪ್ರಧಾನಮಂತ್ರಿಯೇ ಕದನ ವಿರಾಮ ಘೋಷಿಸಿದ್ದರೆ ಒಳ್ಳೆಯದಿತ್ತು. ಶಿಮ್ಲಾ ಒಪ್ಪಂದದ ನಂತರ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ನಾವು ವಿರೋಧಿಸುತ್ತಿದ್ದೇವೆ. ಈಗ ಏಕೆ ಒಪ್ಪಿಕೊಂಡಿದ್ದೇವೆ? ಎಂದು ಪ್ರಶ್ನಿಸಿದ್ದಾರೆ. ಕಾಶ್ಮೀರದ ಸಮಸ್ಯೆ ಅಂತಾರಾಷ್ಟ್ರೀಯಗೊಳಿಸಬಾರದು. ಅದು ನಮ್ಮ ದೇಶದ ಸಮಸ್ಯೆ ನಾವೇ ಬಗೆಹರಿಸಿಕೊಳ್ಳಬೇಕು. ತಟಸ್ಥ ವಲಯದ ಮಾತುಕತೆಗೆ ಏಕೆ ಒಪ್ಪುತ್ತಿದ್ದೇವೆ? ಈ ಮಾತುಕತೆಗಳ ಕಾರ್ಯಸೂಚಿ ಏನು? ಪಾಕಿಸ್ತಾನ ಭಯೋತ್ಪಾದನೆಗೆ ತನ್ನ ಭೂಪ್ರದೇಶವನ್ನು ಬಳಸುವುದಿಲ್ಲ ಎಂದು ಅಮೆರಿಕ ಖಾತರಿ ನೀಡುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನವನ್ನು ಭಯೋತ್ಪಾದಕ ದಾಳಿಗಳಿಂದ ತಡೆಯುವ ಗುರಿಯನ್ನು ಸಾಧಿಸಿದ್ದೇವೆಯೇ ಎಂದು ಪ್ರಶ್ನಿಸಿದ ಓವೈಸಿ, 'ಟ್ರಂಪ್ ಮಧ್ಯಸ್ಥಿಕೆಯಿಂದ ಕದನ ವಿರಾಮ ಸಾಧಿಸುವುದು ನಮ್ಮ ಗುರಿಯಾಗಿತ್ತೋ ಅಥವಾ ಪಾಕಿಸ್ತಾನವನ್ನು ಮತ್ತೊಂದು ದಾಳಿಯ ಬಗ್ಗೆ ಯೋಚಿಸದಂತೆ ಬಗ್ಗುಬಡಿಯುವುದಾಗಿತ್ತೋ?' ಎಂದು ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಪಾಕಿಸ್ತಾನವನ್ನು FATF ಬೂದು ಪಟ್ಟಿಗೆ ಸೇರಿಸುವ ಅಂತರರಾಷ್ಟ್ರೀಯ ಅಭಿಯಾನವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಇದನ್ನೂ ಓದಿ: ಕದನ ವಿರಾಮದಿಂದ ಭಯೋತ್ಪಾದನೆ ನಿಲ್ಲುತ್ತಾ? ನಿರ್ಣಾಯಕ ಹೊತ್ತಲ್ಲಿ ಅಮೆರಿಕ ಮೂಗು ತೂರಿಸಿದ್ದೇಕೆ? ಭಾರತೀಯರ ಅಸಮಾಧಾನ?
ಒಗ್ಗಟ್ಟಿನಿಂದ ಬಲಿಷ್ಠ ಭಾರತ
ಕಳೆದ ಎರಡು ವಾರಗಳಿಂದ ಭಾರತೀಯ ರಾಜಕೀಯ ಪಕ್ಷಗಳು ಒಂದಾಗಿ ನಿಲ್ಲುತ್ತವೆ ಎಂದು ಆಶಿಸಿದ ಓವೈಸಿ, ಭಾರತ ಒಗ್ಗಟ್ಟಿನಿಂದ ಇದ್ದಾಗ ಬಲಿಷ್ಠವಾಗಿರುತ್ತದೆ. ಭಾರತೀಯರೇ ಭಾರತೀಯರ ವಿರುದ್ಧ ಹೋರಾಡಿದರೆ ಶತ್ರುಗಳಿಗೆ ಲಾಭವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ