ಅಭಿವೃದ್ಧಿ - ಪರಿಸರ ಸಮತೋಲನಕ್ಕೆ ಜಗತ್ತಿಗೇ ಭಾರತ ಮಾದರಿ: ಮೋದಿ; ಗ್ರೀನ್‌ ಕ್ರೆಡಿಟ್‌ ಪ್ರಸ್ತಾಪಿಸಿದ ಪ್ರಧಾನಿ

By Kannadaprabha NewsFirst Published Dec 2, 2023, 8:18 AM IST
Highlights

ದುಬೈನಲ್ಲಿ ನಡೆಯುತ್ತಿರುವ ಸಿಒಪಿ28ಯಲ್ಲಿ ಶುಕ್ರವಾರ ವಿವಿಧ ಸರ್ಕಾರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಿಒಪಿ33 ಅನ್ನು ಭಾರತದಲ್ಲಿ ನಡೆಸುವ ಆಶಯವನ್ನು ವ್ಯಕ್ತಪಡಿಸಿದರು. ಜನರ ಸಹಭಾಗಿತ್ವದೊಂದಿಗೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಗ್ರೀನ್‌ ಕ್ರೆಡಿಟ್‌ ಯೋಜನೆ ಒಳಗೊಂಡಿದ್ದು, ನೀವೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಈ ವೇಳೆ ಅವರು ಕರೆ ನೀಡಿದರು. 

ದುಬೈ (ಡಿಸೆಂಬರ್ 2, 2023): ಜಾಗತಿಕ ತಾಪಮಾನ ಹೆಚ್ಚಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ಪ್ರತಿ ವರ್ಷ ಒಂದೊದು ದೇಶದಲ್ಲಿ ಆಯೋಜನೆಗೊಳ್ಳುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನವನ್ನು 2028ರಲ್ಲಿ ಭಾರತದಲ್ಲಿ ಏರ್ಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಇಂಗಾಲದ ಪ್ರಮಾಣವನ್ನು ತಗ್ಗಿಸಲು ಗ್ರೀನ್‌ ಕ್ರೆಡಿಟ್‌ ತೊಡಗುವಿಕೆಯಲ್ಲಿ ಭಾಗಿಯಾಗಲು ಕರೆ ನೀಡಿದ್ದಾರೆ. 

ದುಬೈನಲ್ಲಿ ನಡೆಯುತ್ತಿರುವ ಸಿಒಪಿ28 (ಪ್ರತಿನಿಧಿಗಳ 28ನೇ ಸಮ್ಮೇಳನ)ಯಲ್ಲಿ ಶುಕ್ರವಾರ ವಿವಿಧ ಸರ್ಕಾರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿಒಪಿ33 ಅನ್ನು ಭಾರತದಲ್ಲಿ ನಡೆಸುವ ಆಶಯವನ್ನು ವ್ಯಕ್ತಪಡಿಸಿದರು. ಜನರ ಸಹಭಾಗಿತ್ವದೊಂದಿಗೆ ಇಂಗಾಲದ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನು ಗ್ರೀನ್‌ ಕ್ರೆಡಿಟ್‌ ಯೋಜನೆ ಒಳಗೊಂಡಿದ್ದು, ನೀವೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂದು ಈ ವೇಳೆ ಅವರು ಕರೆ ನೀಡಿದರು. 

ಇದನ್ನು ಓದಿ: Breaking: 2028 ರಲ್ಲಿ COP33 ಹವಾಮಾನ ಶೃಂಗಸಭೆ ಆಯೋಜನೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ ಪ್ರಸ್ತಾಪ

ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ನಡುವೆ ಹೇಗೆ ಸಮತೋಲನ ಸಾಧಿಸಬೇಕು ಎಂಬುದರ ಬಗ್ಗೆ ಇಡೀ ವಿಶ್ವಕ್ಕೇ ಭಾರತ ಮಹಾನ್‌ ಉದಾಹರಣೆಯಾಗಿದೆ. ಜಾಗತಿಕ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವ ರಾಷ್ಟ್ರೀಯ ಯೋಜನೆಯನ್ನು ಸಾಧಿಸುವ ವಿಷಯದಲ್ಲಿ ನಿಗಾ ಇಟ್ಟಿರುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆಯನ್ನು ಹತ್ತಿಕ್ಕಲು ಅಭಿವೃದ್ಧಿಶೀಲ ದೇಶಗಳಿಗೆ ಶ್ರೀಮಂತ ದೇಶಗಳು ತಂತ್ರಜ್ಞಾನವನ್ನು ಹಸ್ತಾಂತರ ಮಾಡಬೇಕು. ಅಲ್ಲದೆ ತೀವ್ರ ಸ್ವರೂಪದ ಗ್ರಾಹಕ ಮನೋಭಾವವನ್ನು ತೊರೆದು, ಗ್ರಹ ಸ್ನೇಹಿ ಜೀವನ ಅಭ್ಯಾಸಗಳನ್ನು ದೇಶಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಇದನ್ನು ಓದಿ: ಸಿಒಪಿ-28 ಶೃಂಗಸಭೆ, ದುಬೈಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ!

ಹವಾಮಾನ ಬದಲಾವಣೆ ವಿರುದ್ದದ ಹೋರಾಟದಲ್ಲಿ ಪ್ರತಿಯೊಬ್ಬರ ಹಿತವನ್ನು ರಕ್ಷಣೆ ಮಾಡಬೇಕು. ಹಾಗೆಯೇ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ಭಾರತೀಯರಿಂದ ಭರ್ಜರಿ ಸ್ವಾಗತ
ಕೋಪ್‌ ಸಮ್ಮೇಳನದಲ್ಲಿ ಭಾಗಿಯಾಗಲು ದುಬೈಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿನ ಭಾರತೀಯ ಸಮುದಾಯದವರು ಭರ್ಜರಿಯಾಗಿ ಸ್ವಾಗತಿಸಿದರು. ಈ ವೇಳೆ ಭಾರತೀಯರು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದ್ದಲ್ಲದೇ,’ಈ ಬಾರಿ ಮೋದಿ ಸರ್ಕಾರ, ವಂದೇ ಮಾತರಂ’ ಘೋಷಣೆಗಳನ್ನು ಕೂಗಿದರು. ಅಲ್ಲದೇ, ಈ ವೇಳೆ ಸಾಂಸ್ಕೃತಿಕ ನೃತ್ಯ ಮಾಡುವ ಮೂಲಕ ಸ್ವಾಗತ ಕೋರಿದರು. 

ನರೇಂದ್ರ ಮೋದಿ: ಸವಾಲಿನ ನಡುವೆಯೇ ಅಸಾಧಾರಣ ಜಿ20 ಸಾಧನೆ!

click me!