ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?

By Suvarna NewsFirst Published Sep 18, 2021, 11:51 AM IST
Highlights

ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಅನ್ನೋದು ಅಷ್ಟೇ ಸತ್ಯ. ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳಿವೆ.

ನವದೆಹಲಿ (ಸೆ. 18): 2013 ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಇದ್ದಾಗ ನರೇಂದ್ರ ಮೋದಿ ಬಂದು ಬೆಲೆ ಏರಿಕೆ, ಭ್ರಷ್ಟಾಚಾರದ ಬಗ್ಗೆ ಮಾತಾಡಿ ಗುಜರಾತ್‌ ಮಾಡೆಲ್‌ ಅಂದಾಗ ಜನ ರಾತ್ರೋರಾತ್ರಿ ಮೋದಿ ಮಾತಿಗೆ ಮರುಳಾದರು.

ಮೋದಿ ಪ್ರಾಮಾಣಿಕರು, ಅವರ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ ಎನ್ನುವುದು ಸರಿ ಆದರೂ ತಳಮಟ್ಟದ ಭ್ರಷ್ಟಾಚಾರ ಕಡಿಮೆ ಮಾಡಲು ಬಿಜೆಪಿ ಸರ್ಕಾರಗಳು ಕೆಲಸ ಮಾಡುತ್ತಿವೆಯೇ? ಇದು ಪ್ರಶ್ನಾರ್ಹ. ಆದರೆ ಬೆಲೆ ಏರಿಕೆ ಆವತ್ತಿಗಿಂತಲು ಮೂರು ಪಟ್ಟು ಹೆಚ್ಚಾಗಿದೆ. ಆದರೆ ಈ ಬಗ್ಗೆ ರಾಹುಲ್‌ ಗಾಂ​ಧಿ ಮತ್ತು ಕಾಂಗ್ರೆಸ್‌ ಮಾತಾಡಿದರೆ ತುಂಬಾ ಜನರಿಂದ ಸ್ಪಂದನೆ ಏನೂ ಸಿಗುತ್ತಿಲ್ಲ. ಮಾಧ್ಯಮಗಳು ಆಗ ಮೋದಿಯನ್ನು ಬೆಂಬಲಿಸಿದಷ್ಟು ಈಗ ರಾಹುಲ್‌ರನ್ನು ಬೆಂಬಲಿಸುತ್ತಿಲ್ಲ ಎನ್ನುವ ಟೀಕೆಗಳು ಇವೆಯಾದರೂ, ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಅನ್ನೋದು ಅಷ್ಟೇ ಸತ್ಯ.

ಗುಜರಾತ್ ಸಿಎಂ ದಿಢೀರ್ ಬದಲಾವಣೆ, ಮೋದಿ ಚಾಣಾಕ್ಷ ಆಟ, ಬದಲಾಯ್ತು ಕಾರ್ಯತಂತ್ರ!

ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳಿವೆ. ಆದರೆ ವಿರುದ್ಧ ಮಾತನಾಡುವವರ ನಿಯತ್ತಿನ ಬಗ್ಗೆ ಎಲ್ಲೋ ವಿಶ್ವಾಸದ ಕೊರತೆಯಿಂದ ವಿಪಕ್ಷಗಳಿಗೆ ಅಂದುಕೊಂಡಷ್ಟುಯಶ ಮತ್ತು ಬಿಜೆಪಿಗೆ ಆಗಬಹುದಾದಷ್ಟುನಷ್ಟಆಗುತ್ತಿಲ್ಲ ಎಂಬುದು ವಾಸ್ತವ. ಮೋದಿ ತವರು ರಾಜ್ಯ ಗುಜರಾತಿನ ಸೂರತ್‌ನಲ್ಲಿ ಕಾಂಗ್ರೆಸ್‌ಗೆ ಪರಾರ‍ಯಯವಾಗಿ ಆಮ್‌ ಆದ್ಮಿ ಪಕ್ಷ ಶೇ.28ರಷ್ಟುಮತ ಪಡೆದಿದೆ. ಅಂದರೆ ತಟಸ್ಥ ಯುವ ಮತದಾರರು ಬಿಜೆಪಿ ಮೇಲೆ ಸಿಟ್ಟೆದ್ದರೆ ಆಪ್‌ಗೆ ಓಟು ಹಾಕುತ್ತಾರೆಯೇ ಹೊರತು ಕಾಂಗ್ರೆಸ್‌ಗೆ ಓಟು ಹಾಕುವುದಿಲ್ಲ. ಇದು ಬಹಳಷ್ಟುಗಮನ ಕೊಡಬೇಕಾದ ಸಂಗತಿ.

ಕಾಂಗ್ರೆಸ್ಸಿಂದ ಆಪ್‌ಗೆ ಲಾಭ

ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ವಿರುದ್ಧ ಸಿಧು, ಛತ್ತೀಸ್‌ಗಢದಲ್ಲಿ ಭೂಪೇಶ್‌ ಬಾದಲ್‌ ವಿರುದ್ಧ ಸಿಂಗ್‌ ದೇವ್‌, ರಾಜಸ್ಥಾನದಲ್ಲಿ ಗೆಹಲೋತ್‌ ವಿರುದ್ಧ ಪೈಲಟ್‌ ಜೊತೆಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಜೊತೆ ಡಿ.ಕೆ.ಶಿವಕುಮಾರ್‌ ನಡುವಿನ ಜಗಳಗಳು ತಾರಕಕ್ಕೆ ಏರಿವೆ. ಆದರೆ ದಿಲ್ಲಿಯಲ್ಲಿರುವ ನಾಯಕತ್ವಕ್ಕೆ ಏನೂ ಮಾಡಲು ಆಗುತ್ತಿಲ್ಲ. ಪಂಜಾಬ್‌ನಲ್ಲಂತೂ ಅಮರಿಂದರ್‌ ಸಿಂಗ್‌ ವಿರುದ್ಧ ಸಿಧುಗೆ ಪ್ರಿಯಾಂಕಾ ಗಾಂಧಿಯದೇ ಬೆಂಬಲ ಇರುವುದರಿಂದ ಜಗಳ ಚುನಾವಣೆಯ ಹತ್ತಿರ ಬಂದಂತೆ ವಿಕೋಪಕ್ಕೆ ಹೋಗಿದ್ದು, ಒಳಜಗಳದಿಂದ ಕಾಂಗ್ರೆಸ್‌ 10 ಪ್ರತಿಶತ ಮತ ಕಳೆದುಕೊಂಡು ಆಮ್‌ ಆದ್ಮಿ ಪಾರ್ಟಿಯ ಸರ್ಕಾರ ಬರಬಹುದು ಎಂದು ಸರ್ವೇಗಳು ಹೇಳುತ್ತಿವೆ.

ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ, ಬಿಜೆಪಿಗೆ ತಲೆಬಿಸಿಯೇ ಇಲ್ಲ; ಏನಿವರ ಲೆಕ್ಕಾಚಾರ?

ಸಿಧು ಮತ್ತು ಅಮರಿಂದರ್‌ ನಡುವೆ ಜಗಳ ಬಗೆಹರಿಸುವುದು ಬಿಟ್ಟು ದಿಲ್ಲಿಯಿಂದ ಜಗಳಕ್ಕೆ ತುಪ್ಪ ಹಾಕುತ್ತಿರುವುದರಿಂದ ಅಮರಿಂದರ್‌ ಸಿಂಗ್‌ ಕೋಪದಲ್ಲಿದ್ದಾರೆ. ಜನನಾಯಕರಾದ ಅಮರಿಂದರ್‌ ಸಿಂಗ್‌ರನ್ನು ದೂರ ಇಟ್ಟು ನೋಯಿಸಿ ನವಜೋತ್‌ ಸಿಂಗ್‌ ಸಿಧು ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ರಾಜಕೀಯ ಆತ್ಮಹತ್ಯೆ ಅಷ್ಟೆ. ಇದರ ನೇರ ಲಾಭ ಆಮ್‌ ಆದ್ಮಿ ಪಾರ್ಟಿಗೆ ಆಗುವಂತೆ ಕಾಣುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!