
ನವದೆಹಲಿ (ಮೇ 01): ಕೇಂದ್ರ ಸರ್ಕಾರ ಪ್ರಸ್ತುತ 256 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಗೋಧಿ ಸಂಗ್ರಹಿಸಿದ್ದು, ಪ್ರಸಕ್ತ ವರ್ಷ, ಗೋಧಿ ಖರೀದಿಯಲ್ಲಿ ಶೇ.24.78ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಗೋಧಿ ಬೆಳೆಯುವ ದೇಶದ 5 ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಿಂದ ಗೋಧಿ ಹರಿವು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗಿದೆ. ವಿವಿಧ ರಾಜ್ಯಗಳಿಂದ ಈ ಬಾರಿ ಏಪ್ರಿಲ್ 30ರವರೆಗೆ ಒಟ್ಟಾರೆ 256.31 ಲಕ್ಷ ಮೆಟ್ರಿಕ್ ಟನ್ (Lakh Metric Tonnes-LMT) ಗೋಧಿಯನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ಈ ಅವಧಿಗೆ 205.41 LMT ಸಂಗ್ರಹಿಸಿತ್ತು. ಪ್ರಸ್ತುತ ಗೋಧಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.24.78ರಷ್ಟು ಹೆಚ್ಚಳವನ್ನು ಮಾಡಿರುವುದನ್ನು ಇಲ್ಲಿ ತೋರಿಸಲಾಗಿದೆ ಎಂದು ಹೇಳಿದರು.
312 LMT ಗೋಧಿ ಖರೀದಿ ಗುರಿ: ಪ್ರಸಕ್ತ ವರ್ಷ ಸುಮಾರು 312 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿ ಗುರಿ ಹೊಂದಿದ್ದು, ಈವರೆಗೆ 256.31 LMT ಗೋಧಿ ಖರೀದಿಸಲಾಗಿದೆ. ದೇಶದಲ್ಲಿ ಹೆಚ್ಚಿನ ಗೋಧಿ ಹರಿವಿರುವ ರಾಜ್ಯಗಳಲ್ಲಿ ಬೆಂಬಲ ಬೆಲೆಯಲ್ಲಿ ಗೋಧಿ ಖರೀದಿ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಗೋಧಿ ಸಂಗ್ರಹಕ್ಕೆ ಪ್ರಮುಖ ಕೊಡುಗೆ ನೀಡಿವೆ.
ಎಲ್ಲೆಲ್ಲಿ ಎಷ್ಟೆಷ್ಟು ಖರೀದಿ:
ಪಂಜಾಬ್ನಿಂದ ಅತಿ ಹೆಚ್ಚು 103.89 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ್ದರೆ, ಹರಿಯಾಣದಿಂದ 65.67 ಎಲ್ಎಂಟಿ, ಮಧ್ಯಪ್ರದೇಶದಿಂದ 67.57 ಎಲ್ಎಂಟಿ, ರಾಜಸ್ಥಾನದಿಂದ 11.44 ಎಲ್ಎಂಟಿ ಹಾಗೂ ಉತ್ತರ ಪ್ರದೇಶದಿಂದ 7.55 ಎಲ್ಎಂಟಿ ಗೋಧಿಯನ್ನು ಸದ್ಯ ಖರೀದಿಸಲಾಗಿದೆ. 2025-26ನೇ ಸಾಲಿನ ಗೋಧಿ ಖರೀದಿ ಅವಧಿ ಇನ್ನೂ ಸಾಕಷ್ಟಿದ್ದು, ಕೇಂದ್ರೀಯ ಗೋಧಿ ಸಂಗ್ರಹಣಾ ನಿಧಿಯಿಂದ ಗಣನೀಯ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
₹62,155 ಕೋಟಿ ಬೆಂಬಲ ಬೆಲೆ: 2025-26ರ ಆರ್ಎಂಎಸ್ ಅವಧಿಯಲ್ಲಿ ದೇಶದ 21.03 ಲಕ್ಷ ಗೋಧಿ ಬೆಳೆಗಾರರು ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಾರೆ. ಈ ರೈತರಿಗೆ ₹62155.96 ಕೋಟಿ ಕನಿಷ್ಠ ಬೆಂಬಲ ಬೆಲೆಗೆ ನೀಡಲಾಗುತ್ತಿದೆ. ರೈತರಿಂದ ಗೋಧಿ ಖರೀದಿಸಿದ 24ರಿಂದ 48 ಗಂಟೆಗಳಲ್ಲಿ MSP ಪಾವತಿ ಮಾಡಲಾಗುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಈ ವರ್ಷ ದೇಶಾದ್ಯಂತ ಹೆಚ್ಚಿನ ಗೋಧಿ ಸಂಗ್ರಹಣೆಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕ್ರಮ ಕೈಗೊಂಡಿದ್ದು, ಗೋಧಿ ದಾಸ್ತಾನು ಪೋರ್ಟಲ್ ಮೂಲಕ ದಾಸ್ತಾನು ಮಿತಿ ಕಡ್ಡಾಯ, ಸಕಾಲಿಕ ಅನುಮೋದನೆ, FAQ ಮಾನದಂಡಗಳು ಮತ್ತು ಸಕಾಲಿಕವಾಗಿ ಅಧಿಕಾರಿಗಳ ಕ್ಷೇತ್ರ ಭೇಟಿಗೆ ಅವಕಾಶ ಕಲ್ಪಿಸಿದ್ದರಿಂದ ಹೆಚ್ಚಿನ ಪ್ರಮಾಣದ ಗೋಧಿ ಸಂಗ್ರಹ ಸಾಧ್ಯವಾಗಿದೆ ಹಾಗೂ ರೈತರಿಗೂ ಅನುಕೂಲವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮಿತಿ ಮೀರಿದ ಸಿಎಂ ದರ್ಪ, ಡಿಸಿಎಂ ಧಮ್ಕಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ದರ್ಪ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಧಮ್ಕಿ ಎಲ್ಲೆ ಮೀರಿದೆ. ಕರ್ನಾಟಕದಲ್ಲಿ ಕಾಂಗ್ರೆಸಿಂದ ದುರಾಡಳಿತ ಮತ್ತು ದುರಹಂಕಾರದ ಪರಮಾವಧಿ ಮೀರಿದೆ ಎಂದು ಸಚಿವರು, ಬೆಳಗಾವಿಯಲ್ಲಿ ಸಿಎಂ-ಡಿಸಿಎಂ ಈರ್ವರೂ ದುರಹಂಕಾರದ ಪರಮಾವಧಿ ಮೀರಿ ವರ್ತಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಹಾಗಾಗಿಯೇ ಕರ್ತವ್ಯನಿರತ ರಕ್ಷಣಾ ಅಧಿಕಾರಿ ಮೇಲೆಯೇ ಕೈ ಎತ್ತುವ ಹಂತ ತಲುಪಿದ್ದಾರೆ. ಸಾರ್ವಜನಿಕವಾಗಿ ಹೀಗೆ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಪ್ರತಿಭಟನಾಕಾರರನ್ನು ಹತ್ತಿಕ್ಕುವುದು ಅಧಿಕಾರದ ಮದವೇ ಹೊರತು ಮತ್ತೇನೂ ಅಲ್ಲ ಎಂದು ಕೇಂದ್ರ ಸಚಿವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ