
ಕೋಪನ್ಹೇಗನ್(ಮೇ.04): 2030ರ ವೇಳೆಗೆ ದೇಶವನ್ನು ಡಿಜಿಟಲ್ ಪವರ್ ಆಗಿ ರೂಪಿಸುವ ಗುರಿಯನ್ನು ನಾವು 9 ವರ್ಷ ಮೊದಲೇ ಸಾಧಿಸಿದ್ದು, ಭಾರತವೀಗ ಹೊಸ ಡಿಜಿಟಲ್ ಪವರ್ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಾರತದಲ್ಲಿ 75 ವರ್ಷಗಳ ಹಿಂದೆ ಸ್ಟಾರ್ಚ್ಅಪ್ ಉಪಕ್ರಮ ಆರಂಭಿಸಿದ್ದೆವು. ಇಂದು ನಾವು ಜಗತ್ತಿನ ಮೂರನೇ ಅತಿ ಹೆಚ್ಚು ಯುನಿಕಾರ್ನ್ ಹೊಂದಿದ ದೇಶ ಎನಿಸಿಕೊಂಡಿದ್ದೇವೆ. ಸ್ಟಾರ್ಟ್ಅಪ್ನಲ್ಲಿಯೂ ವಿಶ್ವದಲ್ಲೇ 3 ನೇ ಸ್ಥಾನದಲ್ಲಿದ್ದೇವೆ. ಇಂಟರ್ನೆಟ್ ಸಂಪರ್ಕ ಭಾರತದ ಹಳ್ಳಿಗಳಿಗೂ ತಲುಪಿದೆ. ಭಾರತ ಬೃಹತ್ ಡಿಜಿಟಲ್ ಪವರ್ ದೇಶವೆನಿಸಿಕೊಂಡಿದೆ. ನಾವು 2030 ರಲ್ಲಿ ಸಾಧಿಸಬೇಕೆಂದು ಹಾಕಿಕೊಂಡ ಗುರಿಯನ್ನು 9 ವರ್ಷ ಮುಂಚಿತವಾಗಿ ಸಾಧಿಸಿ ತೋರಿಸಿದ್ದೇವೆ’ ಎಂದರು.
ಭಾರತೀಯರ ಭಾಷೆ, ಆಹಾರ ಬದಲಾಗುತ್ತೆ, ಒಂದಂತು ಬದಲಾಗಲ್ಲ, ಡೆನ್ಮಾರ್ಕ್ ಭಾರತೀಯರನ್ನುದ್ದೇಶಿ ಮೋದಿ ಭಾಷಣ!
ಡೆನ್ಮಾರ್ಕ್ನಲ್ಲಿ ಆಪ್ತ ಸ್ವಾಗತ ನೀಡಿದ ಭಾರತೀಯ ಸಮುದಾಯದವರನ್ನು ಶ್ಲಾಘಿಸಿದ ಮೋದಿ, ‘ಸಾಂಸ್ಕೃತಿಕ ವೈವಿಧ್ಯತೆಯಲ್ಲಿಯೂ ಏಕತೆ ಭಾರತದ ಶಕ್ತಿಯಾಗಿದೆ. ನೆರೆದಿರುವವರು ವಿವಿಧ ಭಾಷೆ, ಸಂಸ್ಕೃತಿಗೆ ಸೇರಿದ್ದರೂ ಎಲ್ಲರೂ ಭಾರತೀಯರೇ. ನಾನು ವಿದೇಶಗಳಿಗೆ ಭೇಟಿ ನೀಡಿದಾಗ ಆ ದೇಶಗಳಲ್ಲಿ ನೆಲೆಸಿದ ಭಾರತೀಯ ಸಮುದಾಯವು ರಾಷ್ಟಾ್ರಭಿವೃದ್ಧಿಯಲ್ಲಿ ನೀಡಿದ ಕೊಡುಗೆಯ ಬಗ್ಗೆ ವಿದೇಶಿ ನಾಯಕರು ಶ್ಲಾಘಿಸಿದಾಗ ಬಹಳ ಹೆಮ್ಮೆಯಾಗುತ್ತದೆ’ ಎಂದರು.
‘ಈ ಕಾರ್ಯಕ್ರಮದಲ್ಲಿ ಡ್ಯಾನಿಶ್ ಪ್ರಧಾನಿ ಫೆಡ್ರಿಕ್ಸನ್ ಅವರ ಉಪಸ್ಥಿತಿ ಭಾರತೀಯ ಸಮುದಾಯದವರ ಮೇಲೆ ಅವರಿಗಿದ್ದ ಗೌರವ ಹಾಗೂ ಪ್ರೀತಿಯನ್ನು ಸೂಚಿಸುತ್ತದೆ. ಇಂದಿನ ದ್ವಿಪಕ್ಷೀಯ ಮಾತುಕತೆ ಭಾರತ ಹಾಗೂ ಡೆನ್ಮಾರ್ಕ್ ನಡುವಿನ ಸಂಬಂಧಗಳಿಗೆ ಹೊಸ ಶಕ್ತಿಯನ್ನು ತುಂಬಿದೆ’ ಎಂದರು.
‘ಭಾರತದ ಅಭಿವೃದ್ಧಿಯಿಂದ ಜಗತ್ತಿಗೆ ಲಾಭವಾಗಿದೆ. ಭಾರತವು ಬಡವರಿಗೆ ವಸತಿ, ನೈರ್ಮಲ್ಯೀಕರಣ, ಕುಡಿಯುವ ನೀರು, ಆಹಾರ, ಉಚಿತ ರೋಗ್ಯ ಸೇವೆ ಮೂಲಕ ಆರ್ಥಿಕತೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಇನ್ನಿತರ ದೇಶಗಳಿಗೆ ಮಾದರಿಯಾಗಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಭಾರತವು ವಿಶ್ವದ ಔಷಧಾಲಯವಾಗಿ ಹೊರಹೊಮ್ಮಿದೆ. ವಿವಿಧ ದೇಶಗಳಿಗೆ ಲಸಿಕೆಯನ್ನು ಸರಬರಾಜು ಮಾಡುವ ಮೂಲಕ ಲೆಕ್ಕವಿಲ್ಲದ್ದಷ್ಟುಜೀವ ಉಳಿಸಿದೆ’ ಎಂದರು.
ಮಕ್ಕಳೊಂದಿಗೆ ಮಗುವಾಗಿ ಬಿಡ್ತಾರೆ ಮೋದಿ, ಬರ್ಲಿನ್ ಚಿಣ್ಣರ ಜೊತೆ ಪ್ರಧಾನಿ ಸಂಭ್ರಮ!
‘ಭೂಮಿಗೆ ಮಾರಕವಾಗಿರುವ ಬಳಕೆ ಮಾಡಿ ಬಿಸಾಡುವ ಸಂಸ್ಕೃತಿಯನ್ನು ಬಿಟ್ಟು ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಪಿಸಿಕೊಳ್ಳಿ’ ಎಂದು ಮೋದಿ ಕರೆ ನೀಡಿದರು.
ಕೃಷಿ ಸಹಕಾರಕ್ಕೆ ಭಾರತ- ಜರ್ಮನಿ ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದ ಮೊದಲನೇ ದಿನವಾದ ಸೋಮವಾರ ಜರ್ಮನಿಯ ರಾಜಧಾನಿ ಬರ್ಲಿನ್ಗೆ ಆಗಮಿಸಿದರು. ಈÜ ವೇಳೆ ಅವರಿಗೆ ಭಾರತೀಯ ಸಮುದಾಯ ಮತ್ತು ಜರ್ಮನ್ ಸರ್ಕಾರದ ಪರವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಅಲ್ಲದೇ ಬರ್ಲಿನ್ನ ಫೆಡೆರಲ್ ಚಾನ್ಸಲರಿಯೆದುರು ‘ಗಾರ್ಡ್ ಆಫ್ ಆನರ್’ ನೀಡಿ ಬರ ಮಾಡಿಕೊಳ್ಳಲಾಯಿತು.
ಬಳಿಕ ಪ್ರಧಾನಿ ಮೋದಿ, ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್್ಜರೊಂದಿಗೆ ಮೋದಿ ಪ್ರಾದೇಶಿಕ, ಜಾಗತಿಕ ಬೆಳವಣಿಗೆ, ಕಾರ್ಯತಂತ್ರದ ಪಾಲುಗಾರಿಕೆಯ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಮೋದಿ 6ನೇ ಸುತ್ತಿನ ಭಾರತ ಜರ್ಮನಿ ಅಂತರ್ ರಾಜ್ಯ ಸಮಾಲೋಚನೆಯ ಜಂಟಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ ಮೋದಿ ಕೋವಿಡ್ ನಂತರ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
‘ದ್ವಿಪಕ್ಷೀಯ ಸಹಕಾರ, ಕಾರ್ಯತಂತ್ರದ ಪಾಲುಗಾರಿಕೆ, ಪ್ರಾದೇಶಿಕ ಹಾಗೂ ಜಾಗತಿಕ ಅಭಿವೃದ್ಧಿ ಮೊದಲಾದ ಮಹತ್ವಪೂರ್ಣ ವಿಚಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಸಲಾಯಿತು. ಈ ಭೇಟಿ ಭಾರತ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡಾ ಮಾತುಕತೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ