
ಲಕ್ನೋ(ಫೆ.27): ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಮತ್ತೆ ಬುಲ್ಡೋಜರ್ಗಳು ಸದ್ದುಮಾಡಿವೆ. ಏನಿದು ಚುನಾವಣೆಯಲ್ಲಿ ಬುಲ್ಡೋಜರ್ಗಳ ಆರ್ಭಟ ಎಂದು ಭಾವಿಸಿದ್ರಾ? ಯಾವ ಪಕ್ಷದ ಚಿಹ್ನೆ ಬುಲ್ಡೋಜರ್ ಅಂತಾ ಯೋಚ್ನೆ ಮಾಡ್ತಿದ್ದೀರಾ? ಡೋಂಟ್ ವರಿ ಹಾಗೇನಿಲ್ಲ. 'ನನ್ನ ಪ್ರಚಾರ ಸಭೆಗೆ ಬುಲ್ಡೋಜರ್ಗಳು ಕೂಡಾ ಬಂದಿವೆ,' ಎಂದು ಯೋಗಿ ಆದಿತ್ಯನಾಥ್ ಕ್ಯಾಮೆರಾಮ್ಯಾನ್ಗೆ ತೋರಿಸುವ ಸುಲ್ತಾನ್ಪುರ ಪ್ರಚಾರ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಈ ಬಾರಿ 'ಅಭಿವೃದ್ಧಿ' ಹಾಗೂ 'ಶೋಷಣೆ'ಯ ರೂಪಕವಾಗಿ ಬಳಕೆಯಾಗುತ್ತಿದೆ. ಏನಿದು ಬುಲ್ಡೋಜರ್ ರಹಸ್ಯ ನೋಡೋಣ ಬನ್ನಿ. ಉತ್ತರ ಪ್ರದೇಶದಲ್ಲಿ ಅಧಿಕಾರ ಗಿಟ್ಟಿಸಿದ ಬಳಿಕಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ 'ಬುಲ್ಡೋಜರ್ ಬಾಬಾ' ಎಂದು ವ್ಯಂಗ್ಯವಾಡಿದ್ದರು.
ಆ ಬಳಿಕ ತೆಲಂಗಾಣದ ಬಿಜೆಪಿ ಶಾಸಕ ಉತ್ತರ ಪ್ರದೇಶದ ಪ್ರಚಾರಸಭೆಯೊಂದರಲ್ಲಿ, ಯೋಗಿ ಆದಿತ್ಯನಾಥ್ಗೆ ಮತ ನೀಡದಿದ್ದರೆ ಬುಲ್ಡೋಜರ್ ಹರಿಸುವ ಬೆದರಿಕೆ ಹಾಕಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಅದು ಕೂಡಾ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.
ಆದರೆ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ಪಾಲಿಗೆ ಬುಲ್ಡೋಜರ್ ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತವಾಗಿದೆ. ಅನಧಿಕೃತ, ಅಕ್ರಮ ಕಟ್ಟಡಗಳನ್ನು ಕೆಡವುವ ಮೂಲಕ ಭೂಮಾಫಿಯಾಗೆ ಬಿಸಿ ಮುಟ್ಟಿಸುವ ಹಾಗೂ ಎಕ್ಸ್ಪ್ರೆಸ್ ಹೈವೇಗಳನ್ನು ಕಟ್ಟುವ ಸಾಧನವಾಗಿ ಅದನ್ನು ಬಿಂಬಿಸಲಾಗುತ್ತಿದೆ.
ಅದಕ್ಕಾಗಿಯೇ, ಶುಕ್ರವಾರ ಸುಲ್ತಾನ್ಪುರ ಚುನಾವಣಾ ಪ್ರಚಾರಸಭೆಯಲ್ಲಿ ಯೋಗಿ ಆದಿತ್ಯನಾಥ್ ಬುಲ್ಡೋಜರ್ಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ಯೋಗಿ ಆದಿತ್ಯನಾಥ್ ಬುಲ್ಡೋಜರ್ಗಳನ್ನು ನೋಡಿ ಖುಷಿಪಡುವ ವಿಡಿಯೋ ವೈರಲ್ ಆಗಿದೆ.
692 ಅಭ್ಯರ್ಥಿಗಳ ರಾಜಕೀಯ ಭವಿಷ್ಯ 2.24 ಕೋಟಿ ಮತದಾರ ಕೈಯಲ್ಲಿ
ಉತ್ತರ ಪ್ರದೇಶದಲ್ಲಿ 5ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಕೋಟಿ 24 ಲಕ್ಷ ಮತದಾರರು 692 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಸುಲ್ತಾನ್ಪುರ, ಚಿತ್ರಕೂಟ, ಪ್ರತಾಪ್ಗಢ, ಕೌಶಂಬಿ, ಪ್ರಯಾಗ್ರಾಜ್, ಬಾರಬಕಿ, ಬಹರೈಚ್, ಶ್ರಾವಸ್ತಿ ಹಾಗೂ ಗೋಂಡಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್ನ ಭದ್ರಕೋಟೆ ಎಂದೇ ಪ್ರಸಿದ್ಧಿ ಪಡೆದಿರುವ ಅಮೇಥಿ ಹಾಗೂ ರಾಯ್ಬರೇಲಿ, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಅಯೋಧ್ಯಾ ಕ್ಷೇತ್ರಗಳಲ್ಲಿ ಭಾನುವಾರ ಚುನಾವಣೆ ನಡೆಯಲಿದೆ.
ವಿಐಪಿ ಅಭ್ಯರ್ಥಿಗಳ ಬಗ್ಗೆ ನೋಡುವುದಾಧರೆ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರುಗಳಾದ ಸಿದ್ಧಾರ್ಥ್ ನಾಗ್ ಸಿಂಗ್, ರಾಜೇಂದ್ರ ಸಿಂಗ್, ನಂದ ಗೋಪಾಲ್ ಗುಪ್ತಾ ಹಾಗೂ ರಾಮಪತಿ ಶಾಸ್ತ್ರಿ ಕಣದಲ್ಲಿದ್ದಾರೆ.
ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ ಭಾನುವಾರದ ಚುನಾವಣೆ ಮಗಳು ಹಾಗೂ ಅಮ್ಮನ ನಡುವಿನ ರಾಜಕೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕೇಂದ್ರ ಸಚಿವೆ, ಅಪ್ನಾದಳ (ಸೋನೆಲಾಲ್) ಪಕ್ಷದ ಮುಖ್ಯಸ್ಥೆ ಅನುಪ್ರಿಯ ಪಟೇಲ್ ತಾಯಿ ಕೃಷ್ನಾ ಪಟೇಲ್ ಅಪ್ನಾದಳ್ (ಕಮೆರಾವಾದಿ) ಪಕ್ಷದಿಂದ ಪ್ರತಾಪ್ಗಢದಿಂದ ಕಣದಲ್ಲಿದ್ದಾರೆ. ಅಪ್ನಾದಳ್ (ಕೆ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ, ಅನುಪ್ರಿಯಾ ಪಟೇಲ್ ತನ್ನ ಅಮ್ಮನನ್ನು ಸೋಲಿಸಲು ಮಿತ್ರ ಪಕ್ಷ ಬಿಜೆಪಿಗೆ ಸೀಟು ಬಿಟ್ಟುಕೊಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ