
ಭುಬನೇಶ್ವರ್(ಜ.29) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿ ಕೂಟ ಒಡೆದು ಹೋಳಾಗಿದೆ. ಆದರೆ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇದೀಗ ಎರಡು ದಶಕಗಳ ಹಿಂದಿನ ಸುಪ್ರಸಿದ್ಧ ರಾಜಕೀಯ ಡೈಲಾಗನ್ನು ಮತ್ತೆ ಪ್ರಯೋಗಿಸಿದೆ. ಒಡಿಶಾದ ಭುಬನೇಶ್ವರದಲ್ಲಿನ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಇದುವೇ ನನ್ನ ಕೊನೆಯ ಚುನಾವಣೆ. ಮೋದಿ ಅಧಿಕಾರ ಮುಂದುವರಿದರೆ, ಚುನಾವಣಾ ರಾಜಕೀಯಿಂದ ದೂರ ಉಳಿಯುವುದಾಗಿ ಖರ್ಗೆ ಘೋಷಿಸಿದ್ದಾರೆ.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಚುನಾವಣೆ ಇಲ್ಲವೇ ಇಲ್ಲ. ಮೋದಿ ಸರ್ವಾಧಿಕಾರ ಪ್ರಾಬಲ್ಯ ಹೆಚ್ಚಾಗಲಿದೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕಾರಣದಿಂದ ನಿವೃತ್ತಿಪಡೆಯುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಭಾವನಾತ್ಮಕವಾಗಿ ಹಾಗೂ ಮೋದಿಯಿಂದ ದೇಶವೇ ಸರ್ವನಾಶವಾಗಲಿದೆ ಅನ್ನೋ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ಇಡಿ ಬಳಸಿ ಎಲ್ಲರಿಗೂ ನೋಟಿಸ್ ನೀಡುತ್ತಿದೆ. ಇಡಿಗೆ ಹೆದರಿ ಹಲವು ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಪಕ್ಷಗಳನ್ನೇ ಬೆದರಿಸುತ್ತಿದ್ದಾರೆ. ಇದರಿಂದ ಇಂಡಿಯಾ ಒಕ್ಕೂಟದಿಂದ ಕೆಲ ಪಕ್ಷಗಳು ಬಿಜೆಪಿ ಜೊತೆ ಸೇರಿಕೊಳ್ಳುತ್ತಿದೆ. ಕೆಲ ಪಕ್ಷಗಳು ಮೈತ್ರಿಯಿಂದ ದೂರ ಉಳಿಯುತ್ತಿದೆ. ದೇಶದ ನಾಗರೀಕರಿಗೆ ಇದು ಕೊನೆಯ ಅವಕಾಶ. ಈ ಚುನಾವಣೆಯಲ್ಲಿ ನೀವು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ ದೇಶ ಉಳಿಯಲಿದೆ. ಇಲ್ಲದಿದ್ದರೆ ಮುಂದೆ ನಿಮಗೆ ಮತ ಚಲಾಯಿಸುವ ಅವಕಾಶವೂ ಇರವುದಿಲ್ಲ. ಬಿಜೆಪಿ ತನ್ನ ಸರ್ವಾಧಿಕಾರದಿಂದ ಎಲ್ಲಾ ಅವಕಾಶಗಳನ್ನು ಕಸಿದುಕೊಳ್ಳಲಿದೆ ಎಂದು ಖರ್ಗೆ ಎಚ್ಚರಿಸಿದ್ದಾರೆ.
2024ರ ಲೋಕಸಭಾ ಚುನಾವಣೆ ದೇಶದ ಮತದಾರರಿಗೆ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಮತ್ತೆ ಮೋದಿಯನ್ನು ಗೆಲ್ಲಿಸಿದರೆ, ಭಾರತದ ಕತೆ ಮುಗೀತು ಎಂದು ಪರೋಕ್ಷವಾಗಿ ಖರ್ಗೆ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮೊಹಬ್ಬತ್ ಕಿ ದುಕಾನ್ ಮೂಲಕ ರಾಹುಲ್ ಗಾಂಧಿ ದೇಶವನ್ನೂ ಒಗ್ಗೂಡಿಸುತ್ತಿದ್ದಾರೆ. ಆದರೆ ಬಿಜೆಪಿ ಹಾಗೂ ಆರ್ಎಸ್ಎಸ್ ಭಾರತವನ್ನು ಒಡೆದು ಆಳುತ್ತಿದೆ ಎಂದಿದ್ದಾರೆ.
ಇದೇ ವೇಳೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ದವೂ ಹರಿಹಾಯ್ದಿದ್ದಾರೆ. ಮೋದಿ ಸ್ನೇಹ ಬೆಳೆಸಿರುವ ನವೀನ್ ಪಟ್ನಾಯಕ್ ಹಾಗೂ ಒಡಿಶಾಗೆ ಏನು ಸಿಕ್ಕಿದೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಒಂದು ಎಂಜಿನ್ ವಿಫಲವಾದರೆ, ಮತ್ತೊಂದು ಎಂಜಿನ್ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ