
ನವದೆಹಲಿ (ಜ.9): ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಿಡುಗಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಕೂಡ ನ್ಯಾಯಾಲಯವು ಹೇಳಿದೆ. ಜನವರಿ 15 ರಂದು ದಂಪತಿಯ ಮಗನ ಮದುವೆ ನಡೆಯಲಿದ್ದು, ಅದಕ್ಕೂ ಮುನ್ನವೇ ಬಹುದೊಡ್ಡ ವಿಶ್ರಾಂತಿ ಸಿಕ್ಕಿದೆ.
ಚಂದಾ ಕೊಚ್ಚರ್ ಖಾಸಗಿ ವಲಯದ ಬ್ಯಾಂಕ್ನ ಮುಖ್ಯಸ್ಥರಾಗಿದ್ದಾಗ 2012 ರಲ್ಲಿ ವಿಡಿಯೋಕಾನ್ ಗ್ರೂಪ್ಗೆ ನೀಡಲಾದ 3,250 ರೂ ಕೋಟಿ ಸಾಲದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ 2022ರ ಡಿಸೆಂಬರ್ 23 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮನ್ನು ಬಂಧಿಸಿರುವುದನ್ನು ಇಬ್ಬರೂ ಪ್ರಶ್ನಿಸಿ ಕೋರ್ಟ್ ಮೆಟ್ಟಲೇರಿದ್ದರು. ತಮ್ಮ ಮಗನ ಮದುವೆಯನ್ನು ಉಲ್ಲೇಖಿಸಿ ಬಂಧನದ ಸಮಯವನ್ನು ಸಹ ಅವರು ಪ್ರಶ್ನಿಸಿದ್ದರು.
ಐಸಿಐಸಿಯಿಂದ ಚಂದಾ ಕೊಚ್ಚರ್ ಔಟ್: ತನಿಖೆಯಲ್ಲಿ ಉಳಿದಿಲ್ಲ ಡೌಟ್!
ಚಂದಾ ಅವರು ಬ್ಯಾಂಕಿನ ಮುಖ್ಯಸ್ಥೆಯಾಗಿದ್ದಾಗ 2012ರಲ್ಲಿ ವಿಡಿಯೋಕಾನ್ ಗ್ರೂಪ್ಗೆ ಬ್ಯಾಂಕ್ ವತಿಯಿಂದ 3,250 ಕೋಟಿ ರು. ಸಾಲ ನೀಡಲಾಗಿತ್ತು. ಇದನ್ನು ಮುಂದೆ ವಸೂಲಿಯಾಗದ ಸಾಲ ಎಂದು ಐಸಿಐಸಿಐ ಬ್ಯಾಂಕ್ ಘೋಷಿಸಿತ್ತು. ಇದಕ್ಕೆ ‘ಪ್ರತಿಫಲ’ವಾಗಿ ವಿಡಿಯೋಕಾನ್ ಗ್ರೂಪ್ನ ವೇಣುಗೋಪಾಲ್ ಧೂತ್ ಅವರು ಚಂದಾ ಅವರ ಪತಿ ದೀಪಕ್ ಕೋಚರ್ ಅವರಿಗೆ ಸಂಬಂಧಿಸಿದ ‘ನೂಪುರ್ ರಿನ್ಯೂಯೆಬಲ್ಸ್’ ಎಂಬ ಕಂಪನಿಯಲ್ಲಿ ಪರೋಕ್ಷವಾಗಿ ಬಂಡವಾಳ ಹೂಡಿಕೆ ಮಾಡಿದ್ದರು. ಇದರಿಂದಾಗಿ ದೀಪಕ್ ಕೋಚರ್ ಅವರಿಗೆ ಭಾರಿ ಲಾಭವಾಗಿತ್ತು ಎಂದು ಹೇಳಲಾಗಿದೆ.
ಐಸಿಐಸಿಐ ಸಾಲ ವಂಚನೆ ಪ್ರಕರಣದಲ್ಲಿ ವಿಡಿಯೋಕಾನ್ ಸಮೂಹದ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರನ್ನೂ ಸಿಬಿಐ ಬಂಧಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚರ್ ಅವರನ್ನು ಈ ಹಿಂದೆ 2021ರಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. 2018ರಲ್ಲಿ ತನಿಖೆ ಆರಂಭವಾಗಿದ್ದು, ಅದೇ ವರ್ಷ ಅಕ್ಟೋಬರ್ನಲ್ಲಿ ಚಂದಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಚಂದಾ ಕೊಚ್ಚರ್ ಅವರ ವಕೀಲರು, 'ಪರಿಪೂರ್ಣ ವಿಚಾರಣೆ' ನಂತರ ಅವರನ್ನು ಬಂಧಿಸಲಾಗಿದೆ ಮತ್ತು ಕಾನೂನಿನ ಪ್ರಕಾರ ಕಡ್ಡಾಯವಾಗಿ ಬಂಧಿಸುವ ಸಮಯದಲ್ಲಿ ಮಹಿಳಾ ಅಧಿಕಾರಿ ಇರಲಿಲ್ಲ ಎಂದು ವಾದಿಸಿದ್ದರು.
ಇಡಿಯಿಂದ ಚಂದಾ ಕೊಚ್ಚಾರ್ ಅವರ ಪತಿ ಉದ್ಯಮಿ ದೀಪಕ್ ಕೊಚ್ಚಾರ್ ಬಂಧನ
ದೀಪಕ್ ಕೊಚ್ಚರ್ ಅವರ ವಕೀಲರು ದಂಪತಿಗಳು ಸಿಬಿಐ ವಿಚಾರಣೆಗೆ ಹಾಜರಾಗುವಾಗ ನೀಡಲಾದ ನೋಟಿಸ್ಗಳನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ ಮತ್ತು ಆದ್ದರಿಂದ ಅವರನ್ನು ಬಂಧಿಸಬಾರದು ಎಂದು ವಾದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ