ಸುಳ್ಸುದ್ದಿಗಳ ಹಾವಳಿ ಮಧ್ಯೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸವಾಲು!

By Suvarna NewsFirst Published Jun 25, 2021, 1:52 PM IST
Highlights

* ತಪ್ಪು ಮಾಹಿತಿ ಮಧ್ಯೆ ವಾಸ್ತವ ವಿಚಾರ ಹೇಳೋದೇ ಸವಾಲು

* ಮಾಧ್ಯಮಗಳು ಜನಪ್ರಿಯವಾಗಿದ್ದರೂ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ

* ಜನರ ವಿಶ್ವಾಸ ಗಳಿಸಲು ಮಾಧ್ಯಮಗಳು ಏನು ಮಾಡಬಹುದು? 

* IAMAIನ #PubVision21ನಲ್ಲಿ ಮಹತ್ವದ ಚರ್ಚೆ

ನವದೆಹಲಿ(ಜೂ.25): ಇತ್ತೀಚೆಗೆ ಸುಳ್ಸುದ್ದಿಗಳ ಭರಾಟೆ ಹೆಚ್ಚಾಗಿದೆ. ಆನ್‌ಲೈನ್‌, ಟಿವಿ ಮಾಧ್ಯಮಗಳು ಕಾಲಿಟ್ಟ ಬಳಿಕ ಸುದ್ದಿಗಳ ವಿಶ್ವಾಸಾರ್ಹತೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ವೇಗವಾಗಿ ಸುದ್ದಿ ನೀಡಬೇಕೆಂಬ ಧಾವಂತದಲ್ಲಿ ಬಹುತೇಕ ಬಾರಿ ತಪ್ಪು ಮಾಹಿತಿ ಹರಡುತ್ತದೆ. ಈ ತಪ್ಪು ಅರಿವಾಗಿ ಸರಿಯಾದ ಮಾಹಿತಿ ನೀಡುವಷ್ಟರಲ್ಲಿ ತಪ್ಪು ಮಾಹಿತಿ ಎಲ್ಲರನ್ನೂ ತಲುಪಿ, ವಾಸ್ತವ ವಿಚಾರ ಇದರ ಮಧ್ಯೆ ಮೂಲೆ ಸೇರುತ್ತದೆ. ಹೀಗಿರುವಾಗ ಈ ಸವಾಲು ಎದುರಿಸುವುದು ಹೇಗೆ? ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಹೇಗೆ ಎಂಬ ವಿಚಾರವಾಗಿ IAMAIನ #PubVision21ನಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

 IAMAIನ #PubVision21 ಸಮಾವೇಶದಲ್ಲಿ ಮಾತನಾಡಿದ  ಏಷ್ಯಾನೆಟ್ ನ್ಯೂಸ್ ಎಕ್ಸಿಕ್ಯೂಟಿವ್‌ ಚೇರ್ಮನ್ ರಾಜೇಶ್‌ ಕಾಲ್ರಾ ಈ ಸವಾಲಿನ ಬಗ್ಗೆ ಮಾತನಾಡುತ್ತಾ ತಪ್ಪು ಮಾಹಹಿತಿಯ ಹಾವಳಿ ಎಲ್ಲಾ ಕಡೆ ಇದೆ. ಅದನ್ನು ಎಷ್ಟೇ ತಡೆಯಲು ಯತ್ನಿಸಿದರೂ ಮುಂದುವರೆಯಲಿದೆ. ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಜನರಲ್ಲೂ ತಮಗೆ ವಿಶ್ವಾಸಾರ್ಹ ಮಾಹಿತಿ ಸಿಗುತ್ತದೆ ಎಂಬ ನಂಬಿಕೆ ಉಳಿದುಕೊಂಡಿಲ್ಲ. ತಾವೇ ಮೊದಲು ಸುದ್ದಿ ನೀಡಬೇಕೆಂಬ ಧಾವಂತದಲ್ಲಿ ತಪ್ಪು ಹರಡುತ್ತದೆ. ಆದರೆ ಅದನ್ನು ಸರಿಪಡಿಸುವಷ್ಟರಲ್ಲಿ ಜನರು ಆ ಸುಳ್ಳು ಸುದ್ದಿ ನಂಬಿಯಾಗುತ್ತದೆ ಎಂದಿದ್ದಾರೆ.

is now LIVE!
Hear the leaders having a deep discussion on "Establishing Trust in Times of Misinformation"
Join Now: https://t.co/1s03z3KFy3 pic.twitter.com/HlSgKK7Cur

— IAMAI (@IAMAIForum)

ಅಲ್ಲದೇ ಇಂದು ಅನೇಕ ಪತ್ರಕರ್ತರು ಸುದ್ದಿ ಹಾಗೂ ನಿಖರ ಮಾಹಿತಿ ನೀಡುತ್ತಿಲ್ಲ ಬದಲಾಗಿ ತಮ್ಮ ಅಭಿಪ್ರಾಯ ನೀಡುತ್ತಿದ್ದಾರೆ. ಇದರಿಂದಾಗಿ ಸುದ್ದಿ ಸುದ್ದಿಯಾಗಿರದೆ ಪತ್ರಕರ್ತರ ವೈಯುಕ್ತಿಕ ಅಭಿಪ್ರಾಯವನ್ನೊಳಗೊಂಡಿರುತ್ತದೆ. ಹೀಗಾಗಿ ತಪ್ಪು ಮಾಹಿತಿ ಹರಡುವಲ್ಲಿ ಇದೂ ಒಂದು ಕಾರಣವಾಗುತ್ತದೆ. ಹೀಗಾಗಿ ಮೊದಲು ನಾವೇ ಸುದ್ದಿ ನೀಡಬೇಕೆಂಬ ಧಾವಂತ ಬದಿಗಿಟ್ಟು, ಕೊಂಚ ತಡವಾದರೂ ಸರಿಯಾದ ಮಾಹಿತಿ ನೀಡುವತ್ತ ಪತ್ರಕರ್ತರು ಗಮನ ಹರಿಸಬೇಕು. ಇದೊಂದೇ ಈ ಸುಳ್ಳು ಸುದ್ದಿಯ ಹಾವಳಿ ಕಡಿಮೆ ಮಾಡಬಲ್ಲದು.  ಅನೇಕ ಮಾಧ್ಯಮಗಳು ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಎಲ್ಲಾ ಮಾಧ್ಯಮಗಳು ಇದೇ ಹಾದಿಯಲ್ಲಿ ನಡೆಯಬೇಕಿದೆ ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ಮಾತನಾಡಿದ ಮತ್ತೊಬ್ಬ ಪ್ಯಾನೆಲಿಸ್ಟ್ ಇಂಡಿಯಾಸ್ಪೆಂಡ್‌ನ ಗೋವಿಂದ ರಾಜ್‌ ಎಥಿರಾಜ್ 'ಇಂದು ಜನರು ಸರಿಯಾದ ಮಾಹಿತಿಗಿಂತ ತಪ್ಪು ಮಾಹಿತಿ ಬಗ್ಗೆಯೇ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ಯಾವುದು ನಿಜ ಎಂಬುವುದನ್ನು ಪರಿಶೀಲಿಸುವುದಿಲ್ಲ. ಮಾದ್ಯಮಗಳೂ ಇದೇ ಹಾದಿಯಲ್ಲಿ ಸಾಗಿವೆ. ಇತ್ತೀಚೆಗಷ್ಟೇ ನಡೆದ ಕೋಕಾ ಕೋಲಾ ಘಟನೆಯೇ ಇದಕ್ಕೆ ಉತ್ತಮ ಉದಾಹರಣೆ. ಫುಟ್ಬಾಲ್‌ ಆಟಗಾರ ರೊನಾಲ್ಡೋ ತೆಗೆದುಕೊಂಡ ನಡೆಗಿಂತಲೂ ಮೊದಲೇ ಕೋಕಾ ಕೋಲಾ ನಷ್ಟವನ್ನೆದುರಿಸುತ್ತಿತ್ತು. ಆದರೆ ಆರಂಭದಲ್ಲಿ ಯಾರೂ ಇದನ್ನು ಪರಿಶೀಲಿಸಲಿಲ್ಲ. ವಾಸ್ತವ ವಿಚಾರ ತಿಳಿದು ಮಾದ್ಯಮಗಳು ತಮ್ಮ ತಪ್ಪು ಸರಿಪಡಿಸಿವೆ. ಆದರೆ ಜನರ ಮನದಲ್ಲಿ ಮಾತ್ರ ಈ ವಿಚಾರ ಉಳಿದುಕೊಳ್ಳುವುದಿಲ್ಲ. ಮುಂದೆಯೂ ಕೋಕಾ ಕೋಲಾ ನಷ್ಟಕ್ಕೆ ರೊನಾಲ್ಡೋ ನಡೆಯೇ ಕಾರಣ ಎನ್ನಲಾಗುತ್ತದೆ' ಎಂದಿದ್ದಾರೆ.

ಸತ್ಯದ ಸೋಗಿನಲ್ಲಿ ಸುಳ್ಸುದ್ದಿ: Fact Check ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನೇಕ ವೆಬ್‌ಸೈಟ್‌ಗಳು ತಪ್ಪು ಮಾಹಿತಿ ಹರಡಿದ ಸಂದರ್ಭದಲ್ಲಿ ಫ್ಯಾಕ್ಟ್‌ ಚೆಕ್ ಮಾಡುತ್ತವೆ ಆದರೂ ಜನರು ಈ ಬಗ್ಗೆ ಗಮನಹರಿಸುವುದಿಲ್ಲ. ಯಾಕೆಂದರೆ ಜನರಿಗೂ ಇಂದು ಸುದ್ದಿಗಿಂತ ಮುಖ್ಯವಾಗಿ ಮನರಂಜನೆ ಬೇಕಿದೆ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಂಟರ್‌ನ್ಯಾಷನಲ್ ಫ್ಯಾಕ್ಟ್‌ ಚೆಕಿಂಗ್‌ ನೆಟ್ವರ್ಕ್‌ನ ನಿರ್ದೇಶಕ ಬೇಬರ್ಸ್‌ ತಿಳಿಸಿದ್ದಾರೆ.

ವಿಶ್ವಾಸಾರ್ಹತೆ ಬಗ್ಗೆ ಸವಾಲೆದ್ದಿರುವ ಸಂದರ್ಭದಲ್ಲಿ ಜನರನ್ನು ಶಿಕ್ಷಿತರನ್ನಾಗಿಸಲು, ಸರಿಯಾದ ಮಾಹಿತಿ ನೀಡಲು ಮಾಧ್ಯಮಗಳು ಜವಾಬ್ದಾರಿಯುತವಾಗಿ ಗುಣಮಟ್ಟದ ಮಾಹಿತಿ ಜನರಿಗೆ ತಲುಪಿಸುವುದು ಅಗತ್ಯ. ಇದರೊಂದಿಗೆ ಈ ಸುದ್ದಿಗಳು ನಿಜವೇ? ಸುಳ್ಳೇ ಎಂಬುವುದನ್ನು ಜನರೂ ಖಚಿತಪಡಿಸಿಕೊಳ್ಳುಬೇಕು ಎಂಬ ಅಭಿಪ್ರಾಯ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂರೂ ಪ್ಯಾನಲಿಸ್ಟ್‌ಗಳು ನೀಡಿದ್ದಾರೆ. 

ಅಲ್ಲದೇ ಇಂದು ಜನಪ್ರಿಯ ಮಾಧ್ಯಮಗಳೆನಿಸಿಕೊಂಡ ಮಾಧ್ಯಮಗಳ ವಿಶ್ವಾಸಾರ್ಹತೆ ಬಹಳ ಕಡಿಮೆ ಇದೆ. ಆದರೆ ಬೋರಿಂಗ್ ಎನಿಸುವ ಮಾಧ್ಯಮಗಳು ಕೊಡುವ ಸುದ್ದಿಗಳ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸವಿದೆ. ಇವುಗಳಲ್ಲಿ ಸರ್ಕಾರೀ ಮಾಧ್ಯಮವಾಗಿರುವ ದೂರದರ್ಶನವೂ ಒಂದು ಎಂಬ ವಿಚಾರವೂ ಈ ಕಾರ್ಯಕ್ರಮದಲ್ಲಿ ಸದ್ದು ಮಾಡಿದೆ. 

click me!