
ಅರಶಿಣ ಶಾಸ್ತ್ರದ ವೇಳೆ ಹೈಡ್ರೋಜನ್ ಬಲೂನ್ ಸ್ಫೋಟಿಸಿದ ಪರಿಣಾಮ ವಧು ಹಾಗೂ ವರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಮದುವೆಯ ಖುಷಿಯಲ್ಲಿದ್ದ ಕುಟುಂಬದಲ್ಲಿ ಆತಂಕ ನಿರ್ಮಾಣವಾಗಿದೆ. ವಧು ಹಾಗೂ ವರ ಹಿಡಿದಿದ್ದ ಹೈಡ್ರೋಜನ್ ಬಲೂನ್ ಒಮ್ಮಿಂದೊಮ್ಮೆಲೆ ಸ್ಫೋಟಗೊಂಡ ಜ್ವಾಲೆಯಾಗಿ ಹೊತ್ತಿದ್ದ ಪರಿಣಾಮ ವಧು ಹಾಗು ವರ ಇಬ್ಬರಿಗೂ ಗಾಗಳಾಗಿವೆ. ವಧು ಹಾಗೂ ವರನ ಅದ್ಧೂರಿ ಪ್ರವೇಶ ಸಮಾರಂಭಕ್ಕಾಗಿ ಇದನ್ನೂ ಆಯೋಜಿಸಲಾಗಿತ್ತು. ಆದರೆ ಸಂಭ್ರಮಕ್ಕೆ ತಂದ ಬಲೂನ್ ಈಗ ಅನಾಹುತ ಸೃಷ್ಟಿಸಿದೆ.
ಗ್ರ್ಯಾಂಡ್ ಎಂಟ್ರಿಗೆ ಸಿದ್ಧಗೊಳ್ಳುತ್ತಿದ್ದಾಗಲೇ ಸ್ಫೋಟ:
ವೈರಲ್ ಆದ ವೀಡಿಯೋದಲ್ಲಿ ವಧು ವರರು ಈ ಹೈಡ್ರೋಜನ್ ಬಲೂನ್ ಹಿಡಿದುಕೊಂಡು ಮದುವೆ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಡುವುದಕ್ಕೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಈ ಬಲೂನ್ ಸ್ಫೋಟಿಸಿದೆ. ಮದುವೆ ಸಮಾರಂಭದ ಭಾಗವಾಗಿ ಒಂದು ಕಲರ್ ಗನ್ ಅನ್ನು ಅವುಗಳ ಮೇಲೆ ಫೈರ್ ಮಾಡಲಾಯ್ತು. ಈ ವೇಳೆ ಒಂದು ಕಲರ್ ಗನ್ ಆಕಸ್ಮಿಕವಾಗಿ ಈ ಬಲೂನ್ ಮೇಲೆ ಗುರಿಇಟ್ಟು ಹೊಡೆದಿದ್ದರಿಂದ ಶಾಖ ಹೆಚ್ಚಾಗಿ ಈ ಸ್ಫೋಟ ಸಂಭವಿಸಿತ್ತು ಎಂದು ವರದಿಯಾಗಿದೆ. ಒಂದು ಬಲೂನ್ ಸ್ಫೋಟಿಸುತ್ತಿದ್ದಂತೆ ಸೆಕೆಂಡ್ಗಳಲ್ಲಿ ಅಲ್ಲಿದ್ದ ಎಲ್ಲಾ ಬಲೂನ್ಗಳು ಸ್ಫೋಟಗೊಂಡಿವೆ.
ಇದನ್ನೂ ಓದಿ: ಬೈಕ್ಗೆ ಡಿಕ್ಕಿ ಸ್ಕಾರ್ಫಿಯೋ ಮೇಲೆ ಬಿದ್ದ ಮಗು: ರೂಫ್ ಮೇಲೆ ಮಗು ಇದ್ರೂ 10 ಕಿಲೋ ಮೀಟರ್ ನಿಲ್ಲಿಸದೇ ಗಾಡಿ ಓಡಿಸಿದ ಚಾಲಕ
ಘಟನೆಯಲ್ಲಿ ವಧು ತಾನ್ಯಾ ಅವರ ಮುಖಕ್ಕೆ ಸುಟ್ಟ ಗಾಯಗಳಾಗಿವೆ ಹಾಗೂ ವರ ಕುಶಾಗ್ರಾ ಅವರ ಕೈ ಬೆರಳುಗಳಿಗೂ ಸುಟ್ಟ ಗಾಯಗಳಾಗಿವೆ. ಹಾಗೆಯೇ ಇಬ್ಬರಿಗೂ ತಲೆಕೂದಲಿನ ಸ್ವಲ್ಪ ಭಾಗ ಸುಟ್ಟು ಹೋಗಿದೆ ಎಂದು ವರದಿಯಾಗಿದೆ. ಘಟನೆಯ ವೀಡಿಯೋವನ್ನು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸ್ವತಃ ವಧುವರರೇ ಪೋಸ್ಟ್ ಮಾಡಿದ್ದು, ನಮ್ಮ ಜೀವನದ ಅತ್ಯಂತ ವಿಶೇಷ ದಿನವು ಇಷ್ಟೊಂದು ತೀವ್ರವಾದ ತಿರುವು ಪಡೆಯುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ, ನಾವು ಉತ್ತಮವಾಗಿ ಕಾಣಬೇಕಾದ ದಿನದಂದು, ಗಾಯಗಳನ್ನು ಮರೆಮಾಡಲು ಕನ್ಸೀಲರ್ ಅನ್ನು ಪದರಗಳಲ್ಲಿ ಹಚ್ಚುತ್ತಿದ್ದೆವು, ನಮ್ಮ ಸುಟ್ಟ ಕೂದಲನ್ನು ಕತ್ತರಿಸಿ, ಹಾನಿಯನ್ನು ಮರೆಮಾಚಲು ಅದಕ್ಕೆ ಬಣ್ಣ ಹಚ್ಚುತ್ತಿದ್ದೆವು ಎಂದು ದಂಪತಿಗಳು ಘಟನೆಯಿಂದ ಆದ ಆಘಾತಕಾರಿ ಪರಿಣಾಮದ ಬಗ್ಗೆ ವಿವರಿಸಿದ್ದಾರೆ.
ಹೈಡ್ರೋಜನ್ ಬಲೂನ್ಗಳನ್ನು ಮೊದಲು ಬಿಡುಗಡೆ ಮಾಡಿ, ನಂತರ ಬಣ್ಣದ ಬಂದೂಕುಗಳನ್ನು ಬಿಡಬೇಕಿತ್ತು. ಆದರೆ ಆ ಕ್ಷಣದ ಗೊಂದಲದಲ್ಲಿ, ಯಾರೋ ಆಕಸ್ಮಿಕವಾಗಿ ಬಲೂನ್ಗಳತ್ತ ಬಣ್ಣದ ಬಂದೂಕನ್ನು ತೋರಿಸಿದರು. ಹೆಚ್ಚು ಗಂಭೀರವಾದ ಗಾಯಗಳನ್ನು ತಡೆಗಟ್ಟಿದ್ದಕ್ಕಾಗಿ ಕುಟುಂಬದ ವೈದ್ಯರು ಮತ್ತು ಹತ್ತಿರದ ಆಸ್ಪತ್ರೆಗೆ ಧನ್ಯವಾದಗಳು ಎಂದು ನವಜೋಡಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೈಗೆ ನೈಲ್ ಪಾಲಿಶು ಹೆಣ್ಣಿನ ವಾಯ್ಸೂ: ಅಮ್ಮನ ಪಿಂಚಣಿ ಹಣ ಪಡೆಯಲು ಮಗ ಮಾಡಿದ್ದೇನು?
ಈ ವೀಡಿಯೊ ಈಗ ಹೈಡ್ರೋಜನ್ ಬಲೂನ್ಗಳ ಅಸುರಕ್ಷಿತ ಬಳಕೆ ಮತ್ತು ಮದುವೆಯಲ್ಲಿ ಅದನ್ನು ಅಪಾಯಕಾರಿಯಾಗಿ ಬಳಸುತ್ತಿರುವ ರೀತಿಯ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದೆ. ವೀಡಿಯೋ ನೋಡಿದ ಅನೇಕರು ಆಡಂಬರದ ಶೋಕಿ ಮಾಡಿ ಅಪಾಯಕ್ಕೀಡಾಗುವ ಬದಲು ಸರಳವಾಗಿ ನೈಸರ್ಗಿಕವಾಗಿ ಸಿಗುವ ಹೂವುಗಳನ್ನು ಅಲಂಕಾರಕ್ಕೆ ಬಳಸಿ ಮದುವೆಯಾಗುವಂತೆ ಸಲಹೆ ನೀಡಿದ್ದಾರೆ. ಹೀಲಿಯಂ ಬದಲು ಇವರಿಗೆ ಹೈಡ್ರೋಜನ್ ಬಲೂನ್ ನೀಡಿದ್ದು ಯಾರು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇವರು ಸ್ಪೋಟಕ ಎಂಟ್ರಿ ಕೊಟ್ಟಿದ್ದಾರೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ