
ಹೈದರಾಬಾದ್ನ ಹಿಂದೂ ಪ್ರಾಬಲ್ಯದ ಶಾಲೆಯೊಂದರಲ್ಲಿ 4ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಎದುರಿಸಿದ ಬಹಿಷ್ಕಾರದ ಕುರಿತು ಮುಸ್ಲಿಂ ತಂದೆಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.
ಅಜ್ಮಲ್ ಮೊಹಿಯುದ್ದೀನ್ ಎಂಬವರು ತಮ್ಮ ಕಿರಿಮಗನಿಂದ ದ್ವೇಷ ಘಟನೆಯ ಬಗ್ಗೆ ತಿಳಿದುದಾಗಿ ಲಿಂಕ್ಡ್ಇನ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಕಿರಿಯ ಮಗ ಹೈದರಾಬಾದ್ನ ಬಂಜಾರಾ ಹಿಲ್ಸ್ ಶಾಲೆಯಲ್ಲಿ ಓದುತ್ತಾನೆ. ಇದು ಹಿಂದೂ ಪ್ರಾಬಲ್ಯದ ಶಾಲೆಯಾಗಿದ್ದು, ಮಗನ ಗೆಳೆಯನು ಬರ್ತ್ಡೇಗೆ ಕೊಟ್ಟ ಚಾಕೋಲೇಟ್ಗಳನ್ನು ಕೆಲ ಶಾಲಾ ಮಕ್ಕಳು ಅದು 'ಹಲಾಲ್' ಎಂದು ಶಂಕಿಸಿ ನಿರಾಕರಿಸಿದ್ದಾರೆ ಎಂದವರು ಹೇಳಿದ್ದಾರೆ.
ಅ ಹೈದರಾಬಾದ್ ತಂದೆಯ ವಿವರಣೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪೋಷಕರು, ಐಸಿಎಸ್ಇ-ಸಂಯೋಜಿತ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.
'ತನ್ನ ಮಗ ಓದುವ ಶಾಲೆಯಲ್ಲಿ ಹೆಟ್ಟಿನ ಸಹಪಾಠಿಗಳು ಮಾರ್ವಾಡಿಗಳು ಮತ್ತು ಸಿಂಧಿಗಳು ಮತ್ತು ಕೆಲವು ಮುಸ್ಲಿಮರಿದ್ದಾರೆ. ಇಂದು ಮಗ ಮನೆಗೆ ಬಂದು ತಾನು ಐದಾರು ಚಾಕಲೇಟ್ ತಿಂದೆ ಅಂತ ಹೇಳಿದ. ಇಷ್ಟೊಂದು ಚಾಕೋಲೇಟ್ ಕೊಟ್ಟವರು ಯಾರು ಎಂದು ಕೇಳಿದಾಗ ಇಂದು ತನ್ನ ಸಹಪಾಠಿಯ ಹುಟ್ಟುಹಬ್ಬ ಎಂದವನು ಹೇಳಿದ ಮತ್ತು ವರ ಇತರ ಮೂರ್ನಾಲ್ಕು ಸ್ನೇಹಿತರು ಆ ಚಾಕೊಲೇಟ್ಗಳನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ತನಗೆ ಹೆಚ್ಚು ಚಾಕೋಲೇಟ್ಸ್ ಸಿಕ್ಕಿದ್ದಾಗಿ ಹೇಳಿದ' ಎಂದಿದ್ದಾರೆ.
ಕುತೂಹಲದಿಂದ ಈ ಬಗ್ಗೆ ಹೆಚ್ಚು ವಿಚಾರಿಸಿದಾಗ ಹುಟ್ಟುಹಬ್ಬವಿದ್ದುದು ಮುಸ್ಲಿಂ ವಿದ್ಯಾರ್ಥಿಯದ್ದು ಎಂಬುದು ತಿಳಿದು ಬಂತು. ಮತ್ತು ಚಾಕೋಲೇಟ್ ನಿರಾಕರಿಸಿದವರು ಮಾರ್ವಾಡಿ ಮಕ್ಕಳಾಗಿದ್ದರು. ಅವರೆಲ್ಲ ತಮ್ಮತಮ್ಮಲ್ಲೇ ಇದು ಹಲಾಲ್ ಚಾಕೋಲೇಟ್, ತಾವು ತಿನ್ನಲು ಸಾಧ್ಯವಿಲ್ಲ ಎಂದು ಮಾತಾಡಿಕೊಂಡು ಅದನ್ನು ನಿರಾಕರಿಸಿದರು ಎಂದು ಮಗ ಹೇಳಿದ್ದಾಗಿ ಮೊಹಿಯುದ್ದೀನ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ತಮ್ಮ ಮಗನ ಬಳಿ ಚಾಕೋಲೇಟ್ ಯಾವ ಕಂಪನಿಯದು ಎಂದು ಕೇಳಿದಾಗ ಅವೆಲ್ಲವೂ ಕ್ಯಾಡ್ಬರಿ ಚಾಕೋಲೇಟ್ ಆಗಿದ್ದವು. ಅಂದರೆ, ಆ ಹುಡುಗ ಮತ್ತು ಹುಡುಗಿಯರು ಬರ್ತ್ಡೇ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ಚಾಕಲೇಟ್ಗಳನ್ನು ಸ್ವೀಕರಿಸಲು ನಿರಾಕರಿಸಿದರು ಮತ್ತು ಮುಸ್ಲಿಂ ನೀಡಿದ ಏನನ್ನೂ ತಿನ್ನಬೇಡಿ ಎಂದು ಮನೆಯಲ್ಲಿ ಹೇಳಲಾಗಿದೆ ಎಂದು ನನಗೆ ಆಗ ಅರಿವಾಯಿತು ಎಂದು ಮೊಹಿಯುದ್ದೀನ್ ಹೇಳಿದ್ದಾರೆ.
ಈ ಬಗ್ಗೆ ಕ್ರಿಶ್ಚಿಯನ್ ಕ್ಲಾಸ್ ಟೀಚರ್ಗೆ ಕರೆ ಮಾಡಿ ವಿಚಾರಿಸಿದಾಗ ನಡೆದಿದ್ದು ನಿಜವೆಂದೂ, ತಾವು ಈ ವಿಚಾರವಾಗಿ ಫೋರ್ಸ್ ಮಾಡಲು ಸಾಧ್ಯವಿಲ್ಲವೆಂದೂ ಹೇಳಿದರು ಎಂದವರು ಬರೆದಿದ್ದಾರೆ.
ಹಲಾಲ್ ಎಂಬುದು ಇಸ್ಲಾಂನ ಆಹಾರದ ನಿಯಮಗಳೊಂದಿಗೆ ಉತ್ಪಾದಿಸಲಾದ ಅಥವಾ ಸಂಸ್ಕರಿಸಿದ ಆಹಾರವನ್ನು ವಿವರಿಸಲು ಬಳಸಲಾಗುವ ಪದವಾಗಿದೆ. ಪ್ಯಾಕೇಜಿಂಗ್ನಲ್ಲಿ ಹಲಾಲ್ ಪ್ರಮಾಣೀಕರಣವು ಇಸ್ಲಾಮಿಕ್ ವಧೆ ವಿಧಾನವಾದ ಧಬಿಹಾವನ್ನು ಅನುಸರಿಸಲಾಗಿದೆ ಎಂದು ಸೂಚಿಸುತ್ತದೆ. ಕಳೆದ ವರ್ಷ ದೇಶಾದ್ಯಂತ ಹಲಾಲ್ ಉತ್ಪನ್ನಗಳ ವಿರುದ್ಧ ಸಾಕಷ್ಟು ಚರ್ಚೆಯಾಗಿ, ವಿವಾದಗಳೆದ್ದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ