
ಹೈದರಾಬಾದ್; ವಾಹನಗಳ ಸಂಚಾರ ಹೆಚ್ಚಿಲ್ಲದ ಗಲ್ಲಿಗಳು, ರಸ್ತೆಗಳಲ್ಲಿ ಸಣ್ಣ ಮೈದಾನದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುತ್ತಾರೆ. ವೇಳೆ ಬ್ಯಾಟರ್ ಬಾರಿಸಿದ ಚೆಂಡು ಎಲ್ಲೋ ದೂರ ಹೋಗಿ ಬಿಡುತ್ತದೆ. ಕೆಲವೊಮ್ಮೆ ಬೇರೆಯವರ ಮನೆಯ ಕಿಟಕಿ ಮೂಲಕ ಚೆಂಡು ಒಳ ಸೇರಿ ಬಿಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಕ್ರಿಕೆಟ್ ಆಡುವ ವೇಳೆ ಯುವಕರು ಹೊಡೆದ ಚೆಂಡು ಪಾಳು ಬಿದ್ದ ಮನೆಯೊಂದಕ್ಕೆ ಹೋಗಿ ಬಿದ್ದಿದೆ. ಇದನ್ನು ಅರಸುತ್ತಾ ಯುವಕರು ಮನೆಯೊಳಗೆ ಹೋಗಿದ್ದು, ಅಲ್ಲಿ ಕಂಡ ಸ್ಥಿತಿ ನೋಡಿ ಯುವಕರು ಆಘಾತಗೊಂಡಿದ್ದಾರೆ. ಹಾಗಾದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?
ಚೆಂದನ್ನು ಹುಡುಕುತ್ತಾ ಮನೆಯ ಒಳಗೆ ಹೋದ ಯುವಕರಿಗೆ ಅಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಆತ ತನಗೆ ಅಲ್ಲಿ ಕಂಡ ದೃಶ್ಯವನ್ನು ತನ್ನ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡು ಬಂದಿದ್ದಾನೆ. ಇದಾದ ನಂತರ ವೀಡಿಯೋ ಫೇಸ್ಬುಕ್ನಲ್ಲಿ ವೈರಲ್ ಆಗಿದೆ.
ವೈರಲ್ ಆದ ವೀಡಿಯೋದಲ್ಲಿ ಮಾನವ ಅಸ್ತಿಪಂಜರವು ಮುಖ ಕೆಳಗೆ ಮಾಡಿ ಬಿದ್ದುಕೊಂಡಿರುವುದನ್ನು ಕಾಣಬಹುದಾಗಿದೆ. ಆ ಪಾಳು ಬಿದ್ದ ಮನೆಯ ಅಡುಗ ಮನೆಯಲ್ಲಿ ಈ ಮೃತದೇಹ ಪತ್ತೆಯಾಗಿದೆ. ಈ ಅಸ್ತಿಪಂಜರದ ಸುತ್ತಲೂ ಹಲವಾರು ಪಾತ್ರೆಗಳು ಬಿದ್ದಿರುವುದನ್ನು ಕಾಣಬಹುದಾಗಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಪರಾಧ ಸ್ಥಳದ ತನಿಖೆ ಮತ್ತು ಸಾಕ್ಷ್ಯ ಸಂಗ್ರಹದ ಕೆಲಸ ಮಾಡುವ ವಿಶೇಷ ಘಟಕದ ಸಿಬ್ಬಂದಿ ಆ ಪಾಳು ಬಿದ್ದ ಮನೆಗೆ ಭೇಟಿ ನೀಡಿ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ. ಆದರೆ ಮೃತ ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಲು ಮಾನವ ಅವಶೇಷಗಳನ್ನು ತಜ್ಞರ ಪರೀಕ್ಷೆಗಾಗಿ ಶವಾಗಾರಕ್ಕೆ ಸಾಗಿಸಲಾಗಿದೆ.
ನೈಋತ್ಯ ವಲಯದ ಉಪ ಪೊಲೀಸ್ ಉಪ ಕಮೀಷನರ್ ಹಾಗೂ ಹಬೀಬ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆ ಮನೆಯ ಬಾಗಿಲನ್ನು ಒಡೆದು ಮಾನವ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ಆ ಪ್ರದೇಶದ ಸ್ಥಳೀಯರು ಆ ಪಾಳು ಬಿದ್ದ ಮನೆಯ ನಿವಾಸಿ ವಿದೇಶದಲ್ಲಿ ಇದ್ದು, 7 ವರ್ಷಗಳಿಂದ ಮನೆ ಖಾಲಿ ಇದೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.
ಎಸಿಪಿ ಕಿಶನ್ ಕುಮಾರ್ ಎನ್ಡಿಟಿವಿಗೆ ತಿಳಿಸಿದಂತೆ ಈ ಮನೆ ಮುನೀರ್ ಖಾನ್ ಎಂಬುವವರಿಗೆ ಸೇರಿದ್ದಾಗಿದ್ದು, ಅವರಿಗೆ 10 ಮಕ್ಕಳಿದ್ದರು. ಅವರ ನಾಲ್ಕನೇ ಮಗ ಇಲ್ಲಿ ವಾಸಿಸುತ್ತಿದ್ದರೆ ಉಳಿದವರು ಬೇರೆಡೆಗೆ ಸ್ಥಳಾಂತರಗೊಂಡಿದ್ದರು.
ಆ ಮನೆಯಲ್ಲಿ ಸಿಕ್ಕ ವ್ಯಕ್ತಿಯ ಕಳೆಬರವೂ 50 ವರ್ಷ ವಯಸ್ಸಿನವರಾದಾಗಿರಬಹುದು. ಬಹುಶಃ ಒಂಟಿ ವ್ಯಕ್ತಿಯಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದಿರಬಹುದು ಆತ ಸತ್ತು ಹಲವು ವರ್ಷಗಳೇ ಕಳೆದಿರಬಹುದು. ಏಕೆಂದರೆ ಮೂಳೆಗಳು ಕೂಡ ನಾಶವಾಗುವ ಸ್ಥಿತಿಯಲ್ಲಿದ್ದವು. ಬಹುಶಃ ಅವರದ್ದು ಸಹಜ ಸಾವಾಗಿರಬಹುದು, ನಮಗೆ ಯಾವುದೇ ಹೋರಾಟದ ಲಕ್ಷಣಗಳು ಅಥವಾ ರಕ್ತದ ಗುರುತುಗಳು ಕಂಡುಬಂದಿಲ್ಲ. ಇದು ನೈಸರ್ಗಿಕ ಸಾವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ ನಾವು ಈಗ ಸಂಬಂಧಿಕರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರೊಬ್ಬರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ