
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಆರಂಭಿಸಿರುವ ಪಿಎಂ ಆವಾಸ್ ಯೋಜನೆ (PM Awas Yojana) ಎಲ್ಲರಿಗೂ ಸೂರು ಎನ್ನುವ ಕಲ್ಪನೆಯನ್ನು ಹೊಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಎರಡು ವಿಭಾಗಗಳಿದ್ದು, ಒಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMY-U) ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMY-G) ಯೋಜನೆ ಎನ್ನುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆ- ನಗರ ಅಡಿಯಲ್ಲಿ ನಿರ್ಮಿಸಲಾಗುವ ಎಲ್ಲಾ ಮನೆಗಳು ನೀರು ಸರಬರಾಜು, ಅಡುಗೆಮನೆ, ವಿದ್ಯುತ್ ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತವೆ.
ಈ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಯಲು ಪ್ರದೇಶಗಳಲ್ಲಿ 60:40 ಅನುಪಾತದಲ್ಲಿ ಮತ್ತು ಈಶಾನ್ಯ ರಾಜ್ಯಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ 90:10 ಅನುಪಾತದಲ್ಲಿ ಪ್ರತಿ ಮನೆಗೆ ಸಹಾಯಧನವನ್ನು ಹಂಚಿಕೆ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ, ಹಿರಿಯ ನಾಗರಿಕರು, ವಿಭಿನ್ನ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು (OBCಗಳು), ಒಂಟಿ ಮಹಿಳೆಯರು, ಅಲ್ಪಸಂಖ್ಯಾತರು, ಸಮಾಜದ ಇತರ ದುರ್ಬಲ ಮತ್ತು ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಕಳೆದ ಜುಲೈ ತಿಂಗಳವರೆಗೆ 118.64 ಲಕ್ಷ ಮನೆಗಳು ಮಂಜೂರಾಗಿದ್ದು, 84.7 ಲಕ್ಷ ಮನೆಗಳು ಪೂರ್ಣಗೊಂಡಿವೆ.
ಇದಾಗಲೇ ಹೇಳಿದಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ- ನಗರ ಅಡಿಯಲ್ಲಿ ನಿರ್ಮಿಸಲಾಗುವ ಎಲ್ಲಾ ಮನೆಗಳು ನೀರು ಸರಬರಾಜು, ಅಡುಗೆಮನೆ, ವಿದ್ಯುತ್ ಮತ್ತು ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತವೆ. ಅದರ ಜೊತೆಗೆ, ಗ್ರಾಮೀಣ ಕೋಟಾದ ಅಡಿಯಲ್ಲಿ ಫಲಾನುಭವಿಗಳಿಗೆ ಕನಿಷ್ಠ 25 ಚದರ ಮೀಟರ್ ಗಾತ್ರದ ಸ್ವಂತ ಮನೆ ಸಿಗುತ್ತದೆ. ನಗರದ ಕೋಟಾದ ಅಡಿಯಲ್ಲಿ ಫಲಾನುಭವಿಗಳು ಅವರ ವರ್ಗವನ್ನು ಅವಲಂಬಿಸಿ 30 ಚದರ ಮೀಟರ್ ನಿಂದ 200 ಚದರ ಮೀಟರ್ ಕಾರ್ಪೆಟ್ ಪ್ರದೇಶದ ಸ್ವಂತ ಮನೆಯನ್ನು ಪಡೆಯುತ್ತಾರೆ.
ಗ್ರಾಮೀಣ ವಿಭಾಗದ ಫಲಾನುಭವಿಯು ಪಕ್ಕಾ ಮನೆ ನಿರ್ಮಿಸಲು ಆರ್ಥಿಕ ವರ್ಗ ಹಾಗೂ ಪ್ರದೇಶವನ್ನು ಆಧರಿಸಿ 1.3 ಲಕ್ಷ ರೂ. ವರೆಗಿನ ಹಣಕಾಸು ನೆರವು ಪಡೆಯಬಹುದು. ಫಲಾನುಭವಿಗಳು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ನಿಂದ ಶೌಚಾಲಯ ನಿರ್ಮಾಣಕ್ಕಾಗಿ ರೂ. 12,000 ಸಹಾಯವನ್ನು ಪಡೆಯುತ್ತಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ- ನಗರ ವಿಭಾಗದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಫಲಾನುಭವಿಗಳ ಮನೆಗೆ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ. ನೆರವು ನೀಡಲಾಗುತ್ತದೆ. ಗೃಹ ಸಾಲದ ಬಡ್ಡಿಯ ಮೇಲೆ ಕೇಂದ್ರ ಸರ್ಕಾರವು ₹2.67 ಲಕ್ಷದವರೆಗೆ ಸಹಾಯಧನವನ್ನು ಒದಗಿಸುತ್ತದೆ.
ಇದೀಗ 2025ರ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇ ಆಗಿದ್ದಲ್ಲಿ, ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಇದೀಗ ಪರಿಶೀಲನೆ ಮಾಡಬಹುದಾಗಿದೆ. ಅದಕ್ಕಾಗಿ ನೀವು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಿಮ್ಮ ಹೆಸರು ಇದೆಯೇ ಇಲ್ಲವೇ ಚೆಕ್ ಮಾಡಿಕೊಳ್ಳಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿಕೊಳ್ಳಿ.
‘ಪಿಎಂ ಆವಾಸ್ ಯೋಜನೆಗೆ ಸೇರಲು, ನಿಮ್ಮ ಹೆಸರು ಇದೆಯೇ ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ