ಪಹಲ್ಗಾಂ ಉಗ್ರರ ಬಳಿ ಅಮೆರಿಕ ನಿರ್ಮಿತ ಕ್ಯಾಮೆರಾ ಬಂದಿದ್ದು ಹೇಗೆ? ದೆಹಲಿ ಸ್ಪೋಟಕ್ಕೆ AI ಬಳಕೆ

Published : May 25, 2026, 06:39 AM IST
Foreign Terrorist Organizations

ಸಾರಾಂಶ

ಪಹಲ್ಗಾಂ ದಾಳಿಯಲ್ಲಿ ಉಗ್ರರು ಬಳಸಿದ ಅಮೆರಿಕ ನಿರ್ಮಿತ ಗೋಪ್ರೋ ಕ್ಯಾಮೆರಾಗಳು ಚೀನಾ ಮೂಲಕ ಪೂರೈಕೆಯಾಗಿರುವುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಇದಲ್ಲದೆ, ದೆಹಲಿ ಸ್ಫೋಟ ಪ್ರಕರಣದಲ್ಲಿ ಅಲ್‌-ಕೈದಾ ಉಗ್ರರು ಸ್ಫೋಟಕ ತಯಾರಿಸಲು ಚಾಟ್‌ಜಿಪಿಟಿಯಂತಹ ಎಐ ತಂತ್ರಜ್ಞಾನ ಬಳಸಿಕೊಂಡಿರುವುದು ಆರೋಪಪಟ್ಟಿಯಿಂದ ತಿಳಿದುಬಂದಿದೆ.

ಪಹಲ್ಗಾಂ: ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಚೀನಾ ನೇರವಾಗಿ ಪಾಕಿಸ್ತಾನಕ್ಕೆ ನೆರವು ನೀಡಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಪಹಲ್ಗಾಂ ದಾಳಿ ವೇಳೆ ಉಗ್ರರು ಬಳಸಿದ ಅಮೆರಿಕ ನಿರ್ಮಿತ ಗೋಪ್ರೋ ಕ್ಯಾಮೆರಾ ಚೀನಾದಿಂದ ಲಷ್ಕರ್‌-ಎ-ತೊಯ್ಬಾ ಉಗ್ರರಿಗೆ ಪೂರೈಕೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ. ಇದೀಗ ಈ ಕ್ಯಾಮೆರಾಗಳು ಹೇಗೆ ಚೀನಾದಿಂದ ಉಗ್ರರ ಕೈಸೇರಿತು ಎಂಬ ಕುರಿತು ಎನ್‌ಐಎ ತನಿಖೆ ಚುರುಕುಗೊಳಿಸಿದೆ.

ಏ.22ರಂದು ನಡೆದಿದ್ದ ಪಹಲ್ಗಾಂ ದಾಳಿ ಬಳಿಕ ನಡೆದ ಭಾರತೀಯ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಉಗ್ರರಿಂದ ಹೈಟೆಕ್‌ ಕ್ಯಾಮೆರಾಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಕ್ಯಾಮೆರಾ ಅಮೆರಿಕದಲ್ಲಿ ಉತ್ಪಾದನೆಯಾಗಿ ಚೀನಾಗೆ ಪೂರೈಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಗೋಪ್ರೋ ಇಂಕ್‌ ಕಂಪನಿಯಿಂದ ಎನ್‌ಐಎ ನೆರವು ಯಾಚಿಸಿತ್ತು. ಆಗ ಕಂಪನಿಯು ಈ ಕ್ಯಾಮೆರಾಗಳನ್ನು ಚೀನಾದ ಪೂರೈಕೆದಾರನಿಗೆ ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿತ್ತು.

ಅಮೆರಿಕ ಕ್ಯಾಮೆರಾ ಉಗ್ರರ ಕೈ ಸೇರಿದ್ದು ಹೇಗೆ?

ಅದರಂತೆ ಇದೀಗ ಚೀನಾದ ಆ ಪೂರೈಕೆದಾರನಿಂದ ಲಷ್ಕರ್‌-ಎ-ತೊಯ್ಬಾಗೆ ಈ ಕ್ಯಾಮೆರಾಗಳು ಹೇಗೆ ಪೂರೈಕೆಯಾಯಿತು ಎಂಬ ಕುರಿತು ತನಿಖೆ ನಡೆಯುತ್ತಿದೆ. ಈ ಕ್ಯಾಮೆರಾಗಳನ್ನು ಪಾಕಿಸ್ತಾನ ಸೇನೆ ಖರೀದಿಸಿ ಬಳಿಕ ಅದನ್ನು ಉಗ್ರ ಗುಂಪುಗಳಿಗೆ ಪೂರೈಸಿರುವ ಶಂಕೆ ಇದೆ.

ಈ ಅತ್ಯಾಧುನಿಕ ಸಲಕರಣೆಗಳ ಪೂರೈಕೆ ಸರಪಳಿಯನ್ನು ಭೇದಿಸಿದರೆ ಭಾರತ ವಿರೋಧಿ ಗುಂಪುಗಳಿಗೆ ಹಣಕಾಸು ಮತ್ತು ಹಾರ್ಡ್‌ವೇರ್‌ ಬೆಂಬಲ ಒದಗಿಸುವ ಭೂಗತ ಜಾಲವನ್ನು ಬಯಲಿಗೆಳೆಯಲು ತನಿಖಾ ಸಂಸ್ಥೆಗಳಿಗೆ ಸುಲಭವಾಗಲಿದೆ ಎಂದು ಹೇಳಲಾಗಿದೆ.

ದಿಲ್ಲಿ ಬ್ಲಾಸ್ಟ್‌ಗೆ ಬಳಸಿದ ಸ್ಫೋಟಕ ತಯಾರಿಗೆ ಎಐ ಬಳಸಿದ್ದ ಉಗ್ರರು

ಕಳೆದ ವರ್ಷ ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಭೀಕರ ಕಾರ್‌ ಸ್ಫೋಟ ಪ್ರಕರಣದ ಬಗ್ಗೆ ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಿಂದ ಇನ್ನಷ್ಟು ಸ್ಫೋಟಕ ಮಾಹಿತಿ ಲಭಿಸಿವೆ. ದುಷ್ಕೃತ್ಯದ ಹಿಂದಿದ್ದ ಅಲ್‌-ಕೈದಾ ಉಗ್ರರು ಸ್ಫೋಟಕ ತಯಾರಿಕೆಗೆ ಚಾಟ್‌ಜಿಪಿಟಿಯ ನೆರವು ಪಡೆದಿದ್ದರು ಎಂದು ತಿಳಿದುಬಂದಿದೆ.

ಸಂಚಿನಲ್ಲಿ ಭಾಗಿಯಾಗಿದ್ದ ಬಹುತೇಕರು ಹರ್ಯಾಣದ ಫರೀದಾಬಾದ್‌ನ ಅಲ್‌-ಫಲಾ ವಿಶ್ವವಿದ್ಯಾಲಯದ ಸುಶಿಕ್ಷಿತ ವೈದ್ಯ ಸಿಬ್ಬಂದಿಯಾಗಿದ್ದರು. ಇವರಲ್ಲೊಬ್ಬರಾದ ಜಾಸಿನ್‌ ಬಿಲಾಲ್‌ ವಾನಿ, ಚಾಟ್‌ಜಿಪಿಟಿ ಮತ್ತು ಯೂಟ್ಯೂಬ್‌ನಲ್ಲಿ ರಾಕೆಟ್‌ ಮಾಡುವ ವಿಧಾನ ಮತ್ತು ಸ್ಫೋಟಕದಲ್ಲಿ ಎಷ್ಟು ಪ್ರಮಾಣದಲ್ಲಿ ಯಾವ ವಸ್ತುಗಳನ್ನು ಬಳಸಬೇಕು ಎಂದೆಲ್ಲಾ ಹುಡುಕಿ ತಿಳಿದುಕೊಂಡಿದ್ದ. ಈತನಿಗೆ ಅದೀಲ್‌ ಅಹ್ಮದ್‌ ರಾಥರ್‌ ಎಂಬಾತ ಸಕ್ಕರೆಪುಡಿ, ಪೊಟ್ಯಾಸಿಯಂ ನೈಟ್ರೇಟ್‌ ಇತ್ಯಾದಿಗಳನ್ನು ಪೂರೈಸುತ್ತಿದ್ದ ಎಂದು 7,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ನ.10ರ ಸಂಜೆ ಕೆಂಪುಕೋಟೆಯ ಬಳಿ ಟ್ರಾಫಿಕ್‌ನಲ್ಲಿ ನಿಂತಿದ್ದ ಕಾರು ಇದ್ದಕ್ಕಿದ್ದಂತೆ ಸ್ಫೋಟಿಸಿ 20ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶೀಘ್ರ ಭಾರತ-ಅಮೆರಿಕ ಟ್ರೇಡ್‌ ಡೀಲ್‌: ಟ್ರಂಪ್‌ರ ತೆರಿಗೆ ಹೇರಿಕೆ ನಡೆಯ ಸಮರ್ಥಿಸಿಕೊಂಡ ಮಾರ್ಕೊ
India Latest News Live: ಪಹಲ್ಗಾಂ ಉಗ್ರರ ಬಳಿ ಅಮೆರಿಕ ನಿರ್ಮಿತ ಕ್ಯಾಮೆರಾ ಬಂದಿದ್ದು ಹೇಗೆ? ದೆಹಲಿ ಸ್ಪೋಟಕ್ಕೆ AI ಬಳಕೆ