ಪ್ರತಿ ಧರ್ಮಕ್ಕೂ ಪಾವಿತ್ರ್ಯತೆ ಇದೆ, ಪ್ರಾಮುಖ್ಯತೆ ಇದೆ. ವಿಭಿನ್ನ ಧರ್ಮಗಳ ನಡುವೆ ಸಹಿಷ್ಣುತೆ, ಸಾಮರಸ್ಯ ಭಾರತದಲ್ಲಿ ಕಾಣಲು ಸಾಧ್ಯ. ಬಿಹಾರದ ಪುಟ್ಟ ಹಳ್ಳಿಯೊಂದರಲ್ಲಿ ಇದಕ್ಕೊಂಡು ಚಂದದ ಉದಾಹರಣೆ ಇದೆ. ಇಲ್ಲಿನ ಮಸೀದಿಯಲ್ಲಿ ಆ ಊರಿನ ಹಿಂದೂ ಜನ ತಪ್ಪದೆ ಅಝಾನ್ ಮಾಡುತ್ತಾರೆ
ಬಿಹಾರ್ಶರೀಫ್(ಸೆ.25): ಇದು ಕೇಳೋದಕ್ಕೆ ಸ್ವಲ್ಪ ಅಚ್ಚರಿ ಎನಿಸಬಹುದು. ಆದರೆ ಇದು ವಾಸ್ತವ. ಬಿಹಾರದ ಪುಟ್ಟ ಹಳ್ಳಿಯೊಂದರ ಸತ್ಯ. ಬಿಹಾರ ನಲಂದಾ ಜಿಲ್ಲೆಯ ಬೆನ್ ಬ್ಲಾಕ್ನಲ್ಲಿರುವ ಮಡಿ ಗ್ರಾಮದಲ್ಲಿ ಹಿಂದೂ ಜನರೆಲ್ಲ ಅಲ್ಲಿನ ಸ್ಥಳೀಯ ಮಸೀದಿಯನ್ನು ಜೀವವಿರುವ ದೇವರಾಗಿ ಪರಿಗಣಿಸುತ್ತಾರೆ.
ಆ ಗ್ರಾಮದ ಕೊನೆಯ ಮುಸ್ಲಿಂ ಕುಟುಂಬ 1981ರ ಕೋಮು ಗಲಭೆಯ ಸಂದರ್ಭ ಗ್ರಾಮ ಬಿಟ್ಟು ಹೋಗಿತ್ತು. ಆ ನಂತರ ಹಿಂದೂ ಜನರೇ ಮಸೀದಿಯ ಮೇಲುಸ್ತುವಾರಿ ನೋಡಿಕೊಂಡಿದ್ದಾರೆ. ಮಸೀದಿಯನ್ನು ಸ್ವಚ್ಛ ಮಾಡಿ ಸುಂದರವಾಗಿಟ್ಟುಕೊಳ್ಳುವುದಲ್ಲದೆ ಸರಿಯಾದ ಸಮಯದಲ್ಲಿ ಮೈಕ್ ಮೂಲಕ 5 ಬಾರಿ ಅಝಾನ್ ಕೂಡಾ ನಡೆಯುತ್ತದೆ.
ಮಹಾಭಾರತ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿ!
ಮಸೀದಿ ಎಂದರೆ ನಮಗೆ ಜೀವವಿರುವ ದೇವರಂತೆ. ಆ ಮಸೀದಿ ನೈಸರ್ಗಿಕ ವಿಕೋಪಗಳಾದ ನೆರೆ ಹಾಗೂ ಪ್ರವಾಹದಿಂದ ರಕ್ಷಿಸಿದೆ. ಕೊನೆಯ ಮುಸ್ಲಿಂ ಕುಟುಂಬ ಊರು ಬಿಟ್ಟು ಹೋದಾಗ ಹಿಂದೂಗಳು ಅದನ್ನು ನೋಡಿಕೊಂಡರು. ಅದು ಹಾಗೆಯೇ ಮುಂದುವರಿದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಉದಯ ಕುಮಾರ್.
ಮಸೀದಿಯ ಖರ್ಚು ವೆಚ್ಚಗಳಿಗಾಗಿ ಸ್ಥಳೀಯ ಜನರಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಗ್ರಾಮದಲ್ಲಿ ಪ್ರತಿ ಶುಭ ಕಾರ್ಯವೂ ಮಸೀದಿಯಲ್ಲಿ ಪ್ರಾರ್ಥನೆಯ ನಂತರವೇ ಆರಂಭವಾಗುತ್ತದೆ. ನವ ವಧೂ-ವರರೂ ಮೊದಲು ಆಶಿರ್ವಾದ ಪಡೆಯಲು ಮಸೀದಿಗೆ ಹೋಗುತ್ತಾರೆ. ನಂತರ ದೇವಾಲಕ್ಕೆ ಹೋಗುತ್ತಾರೆ. ಗ್ರಾಮಕ್ಕೆ ಭೇಟಿ ಕೊಡುವವರೂ ಗ್ರಾಮದಿಂದ ಹೋಗುವವರೂ ಮಸೀದಿಯಲ್ಲಿ ಪ್ರಾರ್ಥಿಸಿ ಹೋಗುತ್ತಾರೆ ಎನ್ನುತ್ತಾರೆ ಅವರು.
ಮಡಿ ಗ್ರಾಮದ ಮೂಲ ಹೆಸರು ಮಂಡಿ. ನಂತರ ಅದು ಮಡಿ ಆಯಿತು. ಸುಮಾರು 3 ದಶಕಗಳ ಹಿಂದೆ ಅಲ್ಲಿ ಮುಸ್ಲಿಮರೂ ವಾಸಿಸುತ್ತಿದ್ದರು. 1946ರಲ್ಲಿ ಕೋಮುಗಲಭೆಯ ನಂತರ ಅವರಲ್ಲಿ ಹೆಚ್ಚಿನವರು ಬೇರೆ ಪ್ರದೇಶಗಳಿಗೆ ಹೋದರು. ನನ್ನ ತಾತನೂ ಗ್ರಾಮ ಬಿಟ್ಟು ಬಿಹಾರ್ ಶರೀಫ್ಗೆ ಬಂದರು ಎನ್ನುತ್ತಾರೆ ಬಿಹಾರ್ ಶರೀಫ್ನ ಖಲೀದ್ ಅಲಂ ಭುಟ್ಟೋ.
ಭುಟ್ಟೋ ಕುಟುಂಬಕ್ಕೆ ಮಾತ್ರ ಗ್ರಾಮದಲ್ಲಿ ಇನ್ನೂ ಉಳುಮೆ ಮಾಡಬಹುದಾದ 15 ಎಕರೆ ಜಮೀನು ಇದೆ. ಒಟ್ಟು 45 ಮುಸ್ಲಿಂ ಕುಟುಂಬ, 45 ಕರಿಮರು ಮತ್ತು ಉಳಿದ 10 ಜನ 1945ರ ತನಕ ಗ್ರಾಮದಲ್ಲಿದ್ದರು. 1946ರ ಗಲಭೆ ನಂತರ 12 ಕುಟುಂಬ ತಮ್ಮ ಜಮೀನು ಮಾರಿ ಹೋದರು ಎನ್ನುತ್ತಾರೆ ಅವರು.