
ಪ್ರತಾಪಘಡ (ಫೆ.16) ಮೆಟ್ರೋಲ್ ಪಿಲ್ಲರ್ ಕುಸಿತ, ಅಸಮರ್ಪಕ ಕಾಮಗಾರಿಯ ಗುಂಡಿಗೆ ಸವಾರ ಬಿದ್ದು ಅವಘಡ ಸೇರಿದಂತೆ ಹಲವು ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿದೆ. ಈ ಸಾಲಿಗೆ ಮತ್ತೊಂದು ದುರ್ಘಟನೆ ಸೇರಿಕೊಂಡಿದೆ. ಕೆಲಸದ ನಿಮಿತ್ತ ತನ್ನ ಹ್ಯುಂಡೈ ಕಾರಿನಲ್ಲಿ ಚಲಿಸುತ್ತಿದ್ದ ಸಮಾಜವಾದಿ ಪಾರ್ಟಿ ನಾಯಕ, ಅಖಿಲೇಶ್ ಯಾದವ್ ಆಪ್ತ ಲಾಲ್ ಬಹದ್ದೂರ್ ಯಾದವ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಯಾದವ್ ಚಲಿಸುತ್ತಿದ್ದ ಕಾರಿನ ಮೇಲೆ ಬೀದಿ ದೀಪ ಅಳವಡಿಸುವ ಬೃಹತ್ ಕಬ್ಬಿಣದ ಕಂಬ ಮುರಿದು ಬಿದ್ದಿದೆ. ಪರಿಣಾಮ ಲಾಲ್ ಬಹದ್ದೂರ್ ಯಾದವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಪ್ರತಾಘಡ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಪ್ರತಾಪಘಡದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಲಾಲ್ ಬಹದ್ದೂರ್ ಯಾದವ್ ತಮ್ಮ ಹ್ಯುಂಡೈ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕಂಬ ಕಾರಿನ ಮೇಲೆ ಬಿದ್ದಿದೆ. ಪೆಟ್ರೋಲ್ ಬಂಕ್ ಬಳಿ ಅತೀ ಎತ್ತರದ ಕಂಬ ಹಾಗೂ ಬೀದಿ ದೀಪ ಅಳವಡಿಸುವ ಕಾಮಗಾರಿ ಸಾಗಿತ್ತು. ಕ್ರೇನ್ ಮೂಲಕ ದೊಡ್ಡ ಕಬ್ಬಿಣದ ಕಂಬವನ್ನು ನಿಲ್ಲಿಸುವ ಪ್ರಯತ್ನದ ವೇಳೆ ಕಬ್ಬಿಣ ಕಂಬ ಕ್ರೇನ್ನಿಂದ ಜಾರಿ ಕೆಳಕ್ಕೆ ಉರುಳಿದೆ. ಮೇಲಿನಿಂದ ಒಂದೇ ರಭಸದಲ್ಲಿ ಕೆಳಕ್ಕೆ ಬಿದ್ದ ಕಂಬ ನೇರವಾಗಿ ಲಾಲ್ ಬಹದ್ದೂರ್ ಯಾದವ್ ಕಾರಿನ ಮೇಲೆ ಬಿದ್ದಿದೆ. ಯಾದವ್ ಸ್ವತಃ ಕಾರು ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನ ಡ್ರೈವರ್ ಸೀಟಿನ ಭಾಗದಲ್ಲೇ ಕಂಬ ಬಿದ್ದಿದೆ. ಕಾರಿನಲ್ಲಿ ಇತರರು ಯಾರು ಇರಲಿಲ್ಲ.ಕಬ್ಬಿಣದ ಕಂಬ ಬಿದ್ಧ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದೆ.
ತಕ್ಷಣವೇ ಸ್ಥಳೀಯರು ನಜ್ಜು ಗುಜ್ಜಾದ ಕಾರಿನಿಂದ ನಾಯಕ ಲಾಲ್ ಬಹದ್ದೂರ್ ಅವರನ್ನು ಹೊರತೆಗೆಯುವ ಪ್ರಯತ್ನ ಆರಂಭಿಸಿದ್ದಾರೆ. ಹರಸಾಹಸ ಮಾಡಿ ಲಾಲ್ ಬಹದ್ದೂರ್ ಯಾದವ್ ಅವರನ್ನು ಹೊರಕ್ಕೆ ತೆಗೆದು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಲಾಲ್ ಬಹದ್ದೂರ್ ಯಾದವ್ ಸ್ಥಳಕ್ಕೆ ಮೃತಪಟ್ಟಿದ್ದರು.
ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೇನ್ ಮೂಲಕ ಕಂಬ ಅಳವಡಿಸುವಾಗ ಈ ರೀತಿಯ ನಿರ್ಲಕ್ಷ್ಯ ಸಲ್ಲದು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕನಿಷ್ಠ ಸುರಕ್ಷತೆ ಇಲ್ಲದೆ, ಸೂಚನೆ ನೀಡದೆ ರಸ್ತೆಯಲ್ಲಿ ರಾಜಾರೋಷವಾಗಿ ಕಂಬ ಅಳವಡಿಸುತ್ತಿದ್ದಾರೆ. ಸಾರ್ವಜನಿಕರ ಪ್ರಾಣಕ್ಕೆ ಅಪಾಯಾಗಲಿದೆ ಅನ್ನೋ ಕನಿಷ್ಠ ಜ್ಞಾನ ಇಲ್ಲದಾಯಿತೇ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ