
ನವದೆಹಲಿ: ವರದಕ್ಷಿಣೆ ಸಾವು ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿ ಸುಪ್ರೀಂ ಕೆಂಗಣ್ಣಿಗೆ ಗುರಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಪಂಕಜ್ ಭಾಟಿಯಾ, ಕಳೆದ 3 ತಿಂಗಳಲ್ಲಿ ಇಂತಹದ್ದೇ 508 ಪ್ರಕರಣಗಳಲ್ಲೂ ಆರೋಪಿಗಳಿಗೆ ಜಾಮೀನು ನೀಡಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಭಾಟಿಯಾ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಆಂಗ್ಲ ಮಾಧ್ಯವೊಂದು ಭಾಟಿಯಾ ಇತ್ತೀಚೆಗೆ ನೀಡಿದ್ದ ತೀರ್ಪುಗಳ ಬಗ್ಗೆ ಪರಿಶೀಲನೆ ನಡೆಸಿತ್ತು. ಈ ವೇಳೆ ಕಳೆದ ಅಕ್ಟೋಬರ್ನಿಂದ ಡಿಸೆಂಬರ್ ತನಕ ಒಟ್ಟು 510 ವರದಕ್ಷಿಣೆ ಸಾವು ಪ್ರಕರಣದ ಅರ್ಜಿಗಳನ್ನು ಭಾಟಿಯಾ ವಿಚಾರಣೆ ನಡೆಸಿದ್ದರು. ಈ ಪೈಕಿ 2 ಪ್ರಕರಣ ಹೊರತು ಪಡಿಸಿ ಉಳಿದ ಎಲ್ಲ ಕೇಸುಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಾರೆ. ಅಲ್ಲದೇ ಜಾಮೀನು ನೀಡುವ ವೇಳೆಯಲ್ಲಿನ ಅವರ ಆದೇಶ, ಭಾಷೆ ಹಾಗೂ ಅವರು ಆದೇಶಿಸಿದ ಬಾಂಡ್ ಮೊತ್ತ 20,000 ರು. ಎಲ್ಲವೂ ಒಂದೇ ಆಗಿತ್ತು ಎನ್ನುವುದು ಗಮನಾರ್ಹ. ಅಲ್ಲದೇ ಆರು ಪ್ರಕರಣಗಳಲ್ಲಿ ಮೃತ ಮಹಿಳೆ ಗರ್ಭಿಣಿಯಾಗಿದ್ದರೂ ಜಾಮೀನು ನೀಡಿದ್ದರು.
ಕಳೆದ ಫೆ.9ರಂದು ನ್ಯಾ। ಪಂಕಜ್ ಭಾಟಿಯಾ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ ‘ ಅತ್ಯಂತ ಆಘಾತಕಾರಿ ಮತ್ತು ನಿರಾಶದಾಯಕ’ ಎಂದಿತ್ತು. ಅಲ್ಲದೇ ಆರೋಪಿಯ ಜಾಮೀನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ನ್ಯಾ। ಪಂಕಜ್ ಅವರು ತಮ್ಮನ್ನು ಜಾಮೀನು ಅರ್ಜಿಗಳ ವಿಚಾರಣೆಗೆ ನಿಯೋಜಿಸದಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ