ಭಾರಿ ಮಳೆಗೆ ಉತ್ತರ ಭಾರತದ 9 ರಾಜ್ಯ ತತ್ತರ: ಜನಜೀವನ ಅಸ್ತವ್ಯಸ್ತ

Published : Jul 10, 2023, 06:03 AM IST
ಭಾರಿ ಮಳೆಗೆ ಉತ್ತರ ಭಾರತದ 9 ರಾಜ್ಯ ತತ್ತರ: ಜನಜೀವನ ಅಸ್ತವ್ಯಸ್ತ

ಸಾರಾಂಶ

ಜೂನ್‌ನಲ್ಲಿ ವಿಳಂಬವಾಗಿ ದೇಶ ಪ್ರವೇಶಿಸಿ, ಜುಲೈನಲ್ಲಿ ದೇಶಾದ್ಯಂತ ಭರ್ಜರಿ ಪ್ರಮಾಣದಲ್ಲಿ ಮಳೆ ಸುರಿಸುತ್ತಿರುವ ಮುಂಗಾರು ಮಾರುತಗಳು ಭಾನುವಾರ ಉತ್ತರ ಭಾರತದ 9 ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿವೆ. 

ನವದೆಹಲಿ (ಜು.10): ಜೂನ್‌ನಲ್ಲಿ ವಿಳಂಬವಾಗಿ ದೇಶ ಪ್ರವೇಶಿಸಿ, ಜುಲೈನಲ್ಲಿ ದೇಶಾದ್ಯಂತ ಭರ್ಜರಿ ಪ್ರಮಾಣದಲ್ಲಿ ಮಳೆ ಸುರಿಸುತ್ತಿರುವ ಮುಂಗಾರು ಮಾರುತಗಳು ಭಾನುವಾರ ಉತ್ತರ ಭಾರತದ 9 ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿವೆ. ಭೂಕುಸಿತ, ಪ್ರವಾಹ ಮತ್ತು ಮಳೆ ಸಂಬಂಧಿ ಘಟನೆಗಳಿಗೆ ಭಾನುವಾರ ಒಂದೇ ದಿನ 17 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯ ಕಾರಣ ಹಲವು ರಾಜ್ಯಗಳಲ್ಲಿ ನದಿಗಳು ಉಕ್ಕೇರಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಹಿಮಾಚಲಪ್ರದೇಶ, ಕಾಶ್ಮೀರದ ಹಲವೆಡೆ ದಿಢೀರ್‌ ಪ್ರವಾಹ, ಭೂಕುಸಿತದ ಮುನ್ನೆಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿ 41 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮಳೆಯಾಗಿದೆ.

ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಾಹನ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಜೊತೆಗೆ ಕೆಲವು ರಾಜ್ಯಗಳಲ್ಲಿ ಎರಡು ದಿನಗಳ ಕಾಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಘಟನೆ ಕುರಿತು ಕೇಂದ್ರ ಗೃಹ ಸಚಿವಾಲಯ ನಿಗಾ ವಹಿಸಿದ್ದು, ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಹಿಮಾಚಲಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ರಾಜಸ್ಥಾನ, ಪಂಜಾಬ್‌, ಹರ್ಯಾಣ ಭಾರೀ ಮಳೆಗೆ ತತ್ತರಿಸಿರುವ ರಾಜ್ಯಗಳಾಗಿವೆ.

ಡಿಕೆಶಿ ದಿಢೀರ್ ಸಿಟಿ ರೌಂಡ್ಸ್‌: ಇಂದಿರಾ ಕ್ಯಾಂಟೀನ್​ನಲ್ಲಿ ಉಪಹಾರ, ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ

ಭರ್ಜರಿ ಮಳೆ: ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಭಾನುವಾರವೂ ತನ್ನ ಉಗ್ರ ಪ್ರತಾಪ ಮುಂದುವರೆಸಿದ್ದು, 6 ಜನರನ್ನು ಬಲಿ ಪಡೆದಿದೆ. ಶಿಮ್ಲಾ ಜಿಲ್ಲೆಯ ಕೊಟಾಗಢ ಎಂಬಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇನ್ನು ಕುಲು ನಗರದಲ್ಲಿ ಮನೆ ಕುಸಿತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದರೆ, ವ್ಯಕ್ತಿಯೊಬ್ಬರು ಮಣ್ಣು ಕುಸಿತದ ಘಟನೆಯಲ್ಲಿ ಭೂಸಮಾಧಿಯಾಗಿದ್ದಾರೆ. ಶಿಮ್ಲಾ ನಗರದ ಹೊರವಲಯದಲ್ಲಿ ಬಾಲಕಿಯೊಬ್ಬಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾಳೆ.

ಕಳೆದ 36 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 13 ಭೂಕುಸಿತ, 9 ದಿಢೀರ್‌ ಪ್ರವಾಹದ ಘಟನೆಗಳು ವರದಿಯಾಗಿವೆ. 736 ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಲಾಹುಲ್‌ ಮತ್ತು ಸ್ಪಿಟಿಯಲ್ಲಿ ಭಾರೀ ಮಳೆ ಸುರಿಯತ್ತಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ದಿಢೀರ್‌ ಪ್ರವಾಹ ಮತ್ತು ಹಿಮಕುಸಿತದ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಉತ್ತರಾಖಂಡದ ತೆಹ್ರಿ ಗಢವಾಲ್‌ ಜಿಲ್ಲೆಯ ಋುಷಿಕೇಶ -ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಪರಿಣಾಮ 11 ಜನರಿದ್ದ ವಾಹನವೊಂದು ಗಂಗಾ ನದಿಗೆ ಉರುಳಿಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿ, ಇತರೆ ಮೂವರು ನಾಪತ್ತೆಯಾಗಿದ್ದಾರೆ. ಐವರನ್ನು ರಕ್ಷಿಸಲಾಗಿದೆ.

ಕಾಶ್ಮೀರದಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಐವರು ಬಲಿಯಾಗಿದ್ದಾರೆ. ಶನಿವಾರ ಸಂಜೆ ದಿಢೀರ್‌ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯೋಧರ ದೇಹ, ಭಾನುವಾರ ಪೂಂಚ್‌ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ ದೋಡಾ ಜಿಲ್ಲೆಯಲ್ಲಿ ಬಸ್‌ ಮೇಲೆ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಾವನ್ನಪಿದ್ದಾರೆ. ಇನ್ನು ಲಡಾಖ್‌ನಲ್ಲಿ ಶನಿವಾರದಿಂದೀಚೆಗೆ ಅಕಾಲಿಕ ಹಿಮಪಾತವಾಗುತ್ತಿದ್ದು, ಹಲವು ಭಾಗಳಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದ ಕಾರಣ ಲೇಹ್‌-ಕಾರ್ಗಿಲ್‌- ಶ್ರೀನಗರ ಹೆದ್ದಾರಿ ಮುಚ್ಚಲಾಗಿದೆ.

ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್‌ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ

ಉತ್ತರಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ಮನೆಯ ಚಾವಣಿ ಕುಸಿದು ತಾಯಿ, ಮಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತ ಮಹಿಳೆಯ ಪತಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಸಿಕಾರ್‌ ನಗರದಲ್ಲಿ ವಿದ್ಯಾರ್ಥಿಯೊಬ್ಬ ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಪಂಜಾಬ್‌ ಮತ್ತು ಹರ್ಯಾಣದಲ್ಲೂ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಇನ್ನು ದೆಹಲಿಯ ಸಫ್ದರ್‌ಜಂಗ್‌ ಪ್ರದೇಶದಲ್ಲಿ ಭಾನುವಾರ ಮುಂಜಾನೆ 8.30ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 15.3 ಸೆಂ.ಮೀ. ಮಳೆಯಾಗಿದೆ. ಇದು ಕಳೆದ 41 ವರ್ಷಗಳಲ್ಲೇ ದಾಖಲೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ
ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!