
ಭಾರತೀಯ ರೈಲ್ವೇ ಅತೀ ದೊಡ್ಡ ರೈಲು ಸಂಪರ್ಕ ಜಾಲದ ರೈಲ್ವೇ. ಪ್ರತಿ ದಿನ ಸಾವಿರಾರು ರೈಲುಗಳು ಸಂಚಾರ ಮಾಡುತ್ತಿದೆ. ನಿಲ್ದಾಣಗಳಿಂದ ರೈಲು ತಕ್ಕ ಸಮಯಕ್ಕೆ ಹೊರಡುತ್ತದೆ. 5 ನಿಮಿಷ, 10 ನಿಮಿಷ ಕಾಲ ನಿಲ್ದಾಣಗಳಲ್ಲಿ ನಿಂತು ಬಳಿಕ ಹೊರಡುತ್ತದೆ. ಈ ವೇಳೆ ಹಲವರು ರೈಲು ಮಿಸ್ಸಾಗಬಾರದು ಎಂದು ಓಡಿ ಹೋಗಿ ಹತ್ತುತ್ತಾರೆ. ಮತ್ತೆ ಕೆಲವರು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ರೈಲು ಹೊರಟಿರುತ್ತದೆ.ರೈಲು ಹತ್ತುವ ಸಾಹಸದಲ್ಲಿ ಅವಘಡಗಳು ಸಂಭವಿಸಿದೆ. ಆದರೆ ಇದೀಗ ಭಾರಿ ಮೆಚ್ಚುಗೆ ಪಡೆದ ಹೃದಯಸ್ವರ್ಶಿ ವಿಡಿಯೋ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. ಹಿರಿಯ ದಂಪತಿ ಬ್ಯಾಗ್ ಹಿಡಿದು ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಯಸ್ಸು, ಆರೋಗ್ಯದ ಕಾರಣದಿಂದ ಬೇಗನೆ ನಡೆಯಲು ಸಾಧ್ಯವಾಗುತ್ತಿಲ್ಲ. ನಿಲ್ದಾಣಕ್ಕೆ ಬಂದಾಗ ತಮ್ಮ ಕಣ್ಣೆದುರಲ್ಲೇ ರೈಲು ಹೊರಟಿದೆ. ಓಡಿ ಹೋಗಿ ಹತ್ತುವ ವಯಸ್ಸಲ್ಲ. ರೈಲು ಹತ್ತಲು ಯಾವುದೇ ದಾರಿಯಿಲ್ಲ. ಈ ವೇಳೆ ರೈಲಿನ ಕೊನೆಯಲ್ಲಿದ್ದ ಗಾರ್ಡ್ ಮುಖವನ್ನು ಬೇಸರದಿಂದ ನೋಡಿದ್ದಾರೆ. ಸಣ್ಣದಾಗಿ ಕೈಸನ್ನೆಯನ್ನೂ ಮಾಡಿದ್ದಾರೆ. ಇಷ್ಟೇ ನೋಡಿ, ಗಾರ್ಡ್ ನಿಲ್ದಾಣದಿಂದ ಹೊರಟಿದ್ದ ರೈಲನ್ನು ನಿಲ್ಲಿಸಿದ ಘಟನೆ ನಡೆದಿದೆ.
ರೈಲು ಹತ್ತಬೇಕು ಅನ್ನುವಷ್ಟರಲ್ಲಿ ಹೊರಟ ರೈಲು
ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಆದರೆ ಹಿರಿಯ ದಂಪತಿ ಬ್ಯಾಗ್ ಕೈಯಲ್ಲಿ ಹಿಡಿದು ರೈಲು ನಿಲ್ದಾಣಕ್ಕೆ ಆಗಮಿಸಿದಾಗ ರೈಲು ಹೊರಟಿದೆ. ಇನ್ನೇನು ರೈಲು ಹತ್ತಲು ಒಂದೆರೆಡು ಹೆಜ್ಜೆ ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ರೈಲು ಹೊರಟಿದೆ. ನಡೆಯುವುದು, ನಿಂತಿರುವ ರೈಲು ಹತ್ತುವುದೇ ಈ ದಂಪತಿಗೆ ಕಷ್ಟ. ಹೀಗಿರುವಾಗ ಹೊರಟ ರೈಲು ಹತ್ತುವುದು ಹೇಗೆ?. ಬೇರೆ ದಾರಿ ಕಾಣದೆ ಇಬ್ಬರು ರೈಲು ಹತ್ತಲು ಸಾಧ್ಯವಾಗಲಿಲ್ಲ. ಒಂದೊಂದೆ ಬೋಗಿಗಳು ಈ ದಂಪತಿ ಮುಂಭಾಗದಿಂದ ಸಾಗಿದೆ.
ಚಲಿಸುತ್ತಿರುವ ರೈಲಿನಲ್ಲಿಯೇ ರೊಮ್ಯಾಂಟಿಕ್ ಮೂಡ್ಗೆ ಜಾರಿದ ಜೋಡಿ: ವಿಡಿಯೋ ವೈರಲ್
ಹಿರಿ ಜೀವ ನೋಡಿ ಕರಗಿತು ಮನಸ್ಸು
ರೈಲಿನ ಎಲ್ಲಾ ಬೋಗಿ ಈ ದಂಪತಿ ಕಣ್ಣ ಮುಂದೆ ಸಾಗಿದೆ. ಆದರೆ ರೈಲಿನ ಕೊನೆಯಯಲ್ಲಿ ರೈಲ್ವೇ ಅಧಿಕಾರಿ ನಿಂತಿದ್ದರು. ರೈಲಿನಿಂದ ಹೊರಗೆ ನೋಡುತ್ತಾ ನಿಂತಿದ್ದ ಗಾರ್ಡ್ ಮುಖವನ್ನು ಈ ದಂಪತಿ ಬೇಸರದಿಂದ ನೋಡಿದ್ದಾರೆ. ಕೊನೆಗೆ ಕೈಸನ್ನೇ ಮೂಲಕ ಸೂಚನೆ ನೀಡಿದ್ದಾರೆ. ಹಿರಿಯ ದಂಪತಿಯನ್ನು ನೋಡಿದ ರೈಲ್ವೇ ಗಾರ್ಡ್ ಮನಸ್ಸು ಕರಗಿದೆ. ನಿಯಮದ ಪ್ರಕಾರ ರೈಲು ತಕ್ಕ ಸಮಯಕ್ಕೆ ಹೊರಡಬೇಕು. ಒಮ್ಮೆ ಹೊರಟ ರೈಲನ್ನು ಪ್ರಯಾಣಿಕರು ಹತ್ತಬೇಕು ಅನ್ನೋ ಕಾರಣಕ್ಕೆ ನಿಲ್ಲಿಸುವಂತಿಲ್ಲ. ಪ್ರಯಾಣಿಕರು ಹತ್ತಿ ಇಳಿಯಲು ಮೊದಲೇ ನಿರ್ಧರಿಸಿದ ಸಮಯ, ಸ್ಥಳ ನೀಡಲಾಗುತ್ತದೆ. ನಿಲ್ದಾಣದಿಂದ ಹೊರಟ ರೈಲು ಯಾವುದೇ ಕಾರಣಕ್ಕೂ ದಿಢಿರ್ ನಿಲ್ಲಿಸುವ ನಿಯಮವಿಲ್ಲ. ಆದರೆ ಹಿರಿಯ ಜೀವಗಳನ್ನು ನೋಡಿದಾಗ ರೈಲ್ವೇ ಅಧಿಕಾರಿ ಮನಸ್ಸು ಕರಗಿದೆ. ತಕ್ಷಣವೇ ರೈಲು ನಿಲ್ಲಿಸಿದ್ದಾರೆ.
ಅಧಿಕಾರಿಯ ಮಾನವೀಯತೆ ಭಾರಿ ಮೆಚ್ಚುಗೆ
ಅಧಿಕಾರಿ ರೈಲಿಗೆ ದಿಢೀರ್ ಬ್ರೇಕ್ ಹಾಕಿದ ಬೆನ್ನಲ್ಲೇ ರೈಲು ಕೆಲವೇ ದೂರದಲ್ಲಿ ನಿಂತಿದೆ. ರೈಲಿನ ವೇಗ ನಿಧಾನವಾಗುತ್ತಿದ್ದಂತೆ ಹಿರಿ ಜೀವಗಳು ವೇಗವಾಗಿ ನಡೆದುಕೊಂಡು ಸಾಗಿ ರೈಲು ಹತ್ತಿದೆ. ಈ ಹೃದಯಸ್ವರ್ಶಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ವಿಡಿಯೋ ಹೃದಯಸ್ವರ್ಶಿಯಾಗಿದೆ. ಆದರೆ ಎಲ್ಲರೂ ಈ ವಿಡಿಯೋ ಹಂಚಿಕೊಂಡು ವೈರಲ್ ಮಾಡಿದರೆ, ನೆರವು ನೀಡಿದ ರೈಲ್ವೇ ಅಧಿಕಾರಿಯ ಕೆಲಸಕ್ಕೆ ಸಮಸ್ಯೆಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಹೃದಯಸ್ವರ್ಶಿ ಘಟನೆಗಳು ಕೇವಲ ದಕ್ಷಿಣ ಭಾರತದಲ್ಲಿ ನಡೆಯುತ್ತದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ಕಮೆಂಟ್ ವ್ಯಕ್ತವಾಗುತ್ತಿದೆ.
ಭಾರತದ ಏಕೈಕ ಖಾಸಗಿ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಯಾವುದೇ ಏರ್ಪೋರ್ಟಿಗೆ ಇದು ಕಡಿಮೆ ಇಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ