
ಮುಜಾಫರ್ನಗರ: ಆತ ಮಲಗುವ ವೇಳೆ ಗಂಡಾಗಿದ್ದ ಆದರೆ ಏಳುವಷ್ಟರಲ್ಲಿ ಹೆಣ್ಣಾಗಿದ್ದಾನೆ. ಇದೇನು ವಿಚಿತ್ರ ಅಂತೀರಾ ಈ ಸ್ಟೋರಿ ಓದಿ.
ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಮಲಗಿದ್ದವನೊಬ್ಬನಿಗೆ ಆತ ನಿದ್ದೆಯಲ್ಲಿರುವಾಗಲೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಮರ್ಮಾಂಗವನ್ನು ಕಿತ್ತು ಆತನನ್ನು ಹೆಣ್ಣಾಗಿ ಬದಲಿಸಿದ್ದಾರೆ. ಈತ ಸ್ನೇಹಿತ ಎಂದು ಕೊಂಡಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದು, ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಿತ್ರ ಎಂದರೆ ಸ್ಥಳೀಯ ಮೆಡಿಕಲ್ ಕಾಲೇಜಿನ ಆಸ್ಪತ್ರೆಯೊಂದರಲ್ಲೇ ಈ ಘಟನೆ ನಡೆದಿದೆ. ಘಟನೆ ಖಂಡಿಸಿ ಭಾರತೀಯ ಕಿಸಾನ್ ಯೂನಿಯನ್ ಪ್ರತಿಭಟನೆ ನಡೆಸಿದೆ.
20 ವರ್ಷದ ಮುಜಾಹಿದ್ ಎಂಬುವವರೇ ಸ್ನೇಹಿತನ ಕಿತಾಪತಿಯಿಂದಾಗಿ ಹೆಣ್ಣಾಗಿ ಬದಲಾದವರು. ಮನ್ಸೂರ್ಪುರದಲ್ಲಿರುವ ಬೆಗ್ರಾಜ್ಪುರ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸಂಜಕ್ ಗ್ರಾಮದ ನಿವಾಸಿಯಾದ 20 ವರ್ಷದ ಮುಜಾಹಿದ್ಗೆ ಗೆಳೆಯ ಓಂಪ್ರಕಾಶ್ ಎಂಬಾತ ವೈದ್ಯರ ನರೆವಿನಿಂದ ಈ ರೀತಿ ಲಿಂಗ ಬದಲಿಸಿದ್ದು, ಈಗ ಆತನನ್ನೇ ಮದುವೆಯಾಗಲು ಮುಂದಾಗಿದ್ದಾನೆ ಓಂಪ್ರಕಾಶ್.
ಗಂಡಾಗಿ ಹುಟ್ಟಿ, ಹೆಣ್ಣಾದ ಈ ನಟಿ ಮೊದಲ ಚಿತ್ರದಲ್ಲೇ ಸೂಪರ್ಸ್ಟಾರ್ ಪತ್ನಿಯ ಪಾತ್ರ ನಿರ್ವಹಿಸಿದ್ದಾರೆ!
ಜೂನ್ 3 ರಂದು ಈ ಘಟನೆ ನಡೆದಿದ್ದು, ಮುಜಾಹಿದ್ಗೆ ವೈದ್ಯಕೀಯ ಸಮಸ್ಯೆಯಿದೆ ಎಂದು ಹೇಳಿ ಓಂಪ್ರಕಾಶ್ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರ ಬಳಿ ಈತ ಮೊದಲೇ ಮಾತನಾಡಿದ್ದು, ವೈದ್ಯರ ಬಳಿ ಮುಜಾಹಿದ್ ಲಿಂಗ ಬದಲಿಸಿ ಹೆಣ್ಣಾಗಿ ಬದಲಿಸುವಂತೆ ಕೇಳಿದ್ದಾನೆ. ಅದರಂತೆ ಹಣದ ಆಮಿಷಕ್ಕೆ ಒಳಗಾದ ವೈದ್ಯರು ಮುಜಾಹಿದ್ಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆಗೆಂದು ಮಲಗಿದ್ದ ಮುಜಾಹಿದ್ ಏಳುವ ವೇಳೆ ಹೆಣ್ಣಾಗಿದ್ದಾನೆ.
ಕಳೆದೆರಡು ವರ್ಷಗಳಿಂದ ಕಿರುಕುಳ
ಓಂಪ್ರಕಾಶ್ ಕಳೆದೆರಡು ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾನೆ. ತನಗೆ ವೈದ್ಯಕೀಯ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ವೈದ್ಯರ ತಪಾಸಣೆಗಾಗಿ ಆತ ನನ್ನನ್ನು ವೈದ್ಯರ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ವೈದ್ಯರು ಅನಸ್ತೇಸಿಯಾ ನೀಡಿ ಲಿಂಗ ಬದಲಿಸುವ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಮುಜಾಹಿದ್ ಆರೋಪಿಸಿದ್ದಾನೆ.
ಓಂಪ್ರಕಾಶ್ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದ ಮಾರನೇ ದಿನ ನನಗೆ ಶಸ್ತ್ರಚಿಕಿತ್ಸೆ ನಡೆಯಿತು. ನನಗೆ ಮರಳಿ ಪ್ರಜ್ಞೆ ಬರುವ ವೇಳೆ ವೈದ್ಯರು ನೀನು ಹೆಣ್ಣಾಗಿ ಬದಲಾಗಿದ್ದೀಯಾ ಎಂದರು ಎಂದು ಮುಜಾಹಿದ್ ಹೇಳಿದ್ದಾನೆ. ಅಲ್ಲದೇ ಓಂಪ್ರಕಾಶ್ ಬಗ್ಗೆ ಗಂಭೀರ ಆರೋಪ ಮಾಡಿರುವ ಮುಜಾಹಿದ್, ಆತ(ಓಂಪ್ರಕಾಶ್) 'ಇನ್ನು ನೀನು ನನ್ನ ಜೊತೆ ವಾಸ ಮಾಡಬಹುದು ಇನ್ನು ನಿನ್ನ ಕುಟುಂಬದವರಾಗಲಿ ಅಥವಾ ನಿನ್ನ ಸಮುದಾಯದವರಾಗಲಿ ನಿನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ ಎಂದು ದೂರಿದ್ದಾರೆ.
ಮದುವೆಯಾಗಲು ಲಿಂಗ ಬದಲಾಯಿಸಿದ ಬೆನ್ನಲ್ಲೇ ಶಾಕ್, ಸತಿ ಪತಿಯಾಗಲು ನಿರಾಕರಿಸಿದ ಗೆಳೆಯ!
ಅಲ್ಲದೇ ನಾನು ನಿನ್ನನ್ನು ಗಂಡಿನಿಂದ ಹೆಣ್ಣಾಗಿ ಬದಲಿಸಿದ್ದೇನೆ. ಇನ್ನು ನೀನು ನನ್ನ ಜೊತೆಯೇ ವಾಸ ಮಾಡಬೇಕು. ನಾನು ಒಬ್ಬರು ವಕೀಲರ ಜೊತೆ ಮಾತನಾಡಿದ್ದು, ನಿನಗಾಗಿ ಕೋರ್ಟ್ ಮ್ಯಾರೇಜ್ಗೆ ವ್ಯವಸ್ಥೆ ಮಾಡಿದ್ದೇನೆ. ಅಲ್ಲದೇ ನಾನು ನಿನ್ನ ತಂದೆಯನ್ನು ಶೂಟ್ ಮಾಡ್ತೇನೆ ನಂತರ ನಿನ್ನ ಹೆಸರಿಗೆ ಬರುವ ಆಸ್ತಿ ನನಗೂ ಬರುತ್ತದೆ ನಂತರ ನಾನು ಆಸ್ತಿ ಮಾರಿ ಲಕ್ನೋಗೆ ಹೋಗುವೆ ಎಂದು ಹೇಳಿದ್ದಾನೆ ಎಂದು ಮುಜಾಹಿದ್ ದೂರಿದ್ದಾನೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರೈತ ಮುಖಂಡ ಶ್ಯಾಮ್ ಪಾಲ್ ನೇತೃತ್ವದ ಬಿಕೆಯು ಸಂಘಟನೆಯ ಸದಸ್ಯರು ಮೆಡಿಕಲ್ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ್ದು, ಓಂ ಪ್ರಕಾಶ್ ಹಾಗೂ ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜೂನ್ 16ರಂದು ಮುಜಾಹಿದ್ನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಓಂಪ್ರಕಾಶ್ನನ್ನು ಬಂಧಿಸಲಾಗಿದೆ. ಘಟನೆಯಿಂದ ಮುಜಾಹಿದ್ ಜೀವನ ಸಂಪೂರ್ಣ ಅನಾಹುತಕಾರಿಯಾಗಿ ಬದಲಾಗಿದ್ದು, ಸಂತ್ರಸ್ತನಾದ ಮುಜಾಹಿದ್ಗೆ 2 ಕೋಟಿ ರೂ ಪರಿಹಾರ ನೀಡುವಂತೆ ರೈತ ಮುಖಂಡ ಶ್ಯಾಮ್ ಪಾಲ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ