ನೇತಾಜಿ ಭಾವಚಿತ್ರ ವಿವಾದ; ಅಸಲಿಯಲ್ಲ ಎಂದವರು ಟ್ವೀಟ್ ಡಿಲೀಟ್ ಮಾಡಿ ಸುಮ್ಮನಾದರು!

By Suvarna NewsFirst Published Jan 25, 2021, 4:04 PM IST
Highlights

ಸ್ವಾತಂತ್ರ್ಯ ವೀರ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳ ಮೂಲಕ ನೇತಾಜಿ ಜಯಂತಿಯನ್ನು ಸ್ಮರಣೀಯವಾಗಿಸಿದೆ. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ರಾಷ್ಟ್ರಪತಿ ಭವನದಲ್ಲಿ ನೇತಾಜಿ ಭಾವಚಿತ್ರ ಅನಾವರಣ ಮಾಡಿದ್ದಾರೆ. ಆದರೆ ಇದು ಹೊಸ ವಿವಾದ ಹುಟ್ಟುಹಾಕಿದೆ. ಆದರೆ ಇದರ ಅಸಲಿಯತ್ತೇನು? 

ನವದೆಹಲಿ(ಜ.25): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 125ನೇ ಜಯಂತಿಯ ಸವಿನೆನಪಿಗಾಗಿ ರಾಷ್ಟ್ರಪತಿ ಭವನದಲ್ಲಿ ನೇತಾಜಿ ಭಾವಚಿತ್ರ ಅನಾವರಣ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾವಚಿತ್ರ ಅನಾವರಣ ಮಾಡಿದ್ದಾರೆ. ಆದರೆ ಈ ಭಾವಚಿತ್ರ ನೇತಾಜಿಯದ್ದಲ್ಲ ಅನ್ನೋ ವಿವಾದ ಹುಟ್ಟಿಕೊಂಡಿದೆ. 

ನೇತಾಜಿ ಜಯಂತಿಯಲ್ಲಿ ಜೈ ಶ್ರೀರಾಮ್ ಘೋಷಣೆ; ಮೋದಿ ಇದ್ದ ವೇದಿಕೆಯಲ್ಲಿ ಭಾಷಣ ಬಹಿಷ್ಕರಿಸಿದ ದೀದಿ!...

ನೇತಾಜಿ ವಿಚಾರದಲ್ಲಿ ಕೇಂದ್ರ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್‌ನ ನಾಯಕರಿಗೆ ಹಿಡಿಸುತ್ತಿಲ್ಲ. ಇದೀಗ ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಿರುವ ಭಾವಚಿತ್ರ ನೇತಾಜಿಯದಲ್ಲ. ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನಚರಿತ್ರೆ ಸಿನಿಮಾದಲ್ಲಿ ಕಾಣಿಸಿಕೊಂಡ ಪ್ರಸಂಜಿತ್ ಚಟರ್ಜಿ ಭಾವಚಿತ್ರ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸೇರಿದಂತೆ ಕೆಲ ನಾಯಕರು ಹೊಸ ಬಾಂಬ್ ಸಿಡಿಸಿದ್ದಾರೆ.

 

President Kovind unveils the portrait of Netaji Subhas Chandra Bose at Rashtrapati Bhavan to commemorate his 125th birth anniversary celebrations. pic.twitter.com/Y3BnylwA8X

— President of India (@rashtrapatibhvn)

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನಾವರಣ ಮಾಡಿರುವ ಭಾವಚಿತ್ರವನ್ನು ನೇತಾಜಿಯವರ ಮೂಲ ಫೋಟೋ ಆಧಾರಿಸಿ ತಯಾರಿಸಲಾಗಿದೆ. ಇನ್ನು ನೇತಾಜಿ ಬಯೋಪಿಕ್‌ನಲ್ಲಿರುವ ಪ್ರಸಂಜಿತ್ ಚಟರ್ಜಿಗೂ, ನೇತಾಜಿ ಭಾವಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟಾದರೂ ಹೊಸ ವಿವಾದ ಸೃಷ್ಟಿಸಿ, ರಾಮ ಮಂದಿರಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ ಬಳಿಕ ಇದೀಗ ರಾಷ್ಟ್ರಪತಿ ನಟ ಪ್ರಸಂಜಿತ್ ಭಾವಚಿತ್ರ ಅನಾವರಣ ಮಾಡಿದ್ದಾರೆ.  ಭಾರತವನ್ನೇ ದೇವರೇ ಕಾಪಾಡಬೇಕು ಎಂದು ಮಹುವಾ ಟ್ವೀಟ್ ಮಾಡಿದ್ದಾರೆ.

(ಮೇಲಿನ ಚಿತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂಲ ಫೋಟೋ)

ಕೇಂದ್ರ ಸರ್ಕಾರ ಈ ಕುರಿತು ತಿರುಗೇಟು ನೀಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂಲ ಫೋಟೋ ಆಧರಿಸಿ ಭಾವಚಿತ್ರ ತಯಾರಿಸಲಾಗಿದೆ. ಸದ್ಯ ಹುಟ್ಟಿಕೊಂಡಿರುವ ವಿವಾದ ಸತ್ಯಕ್ಕೆ ದೂರವಾಗಿದೆ ಹಾಗೂ ಯಾವುದೇ ಸಂಶೋಧನೆ ಹಾಗೂ ಜ್ಞಾನವಿಲ್ಲದ ಆರೋಪವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

(ಮೇಲಿನ ಚಿತ್ರ ಗುಮ್ನಾಮಿ ಚಿತ್ರದಲ್ಲಿ ಪ್ರಸಂಜಿತ್ ಚಟರ್ಜಿ ಚಿತ್ರ)

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಸುಳ್ಳು ಸುದ್ದಿ ಹರಡಲಾಗುತ್ತಿದೆ. ಸುಳ್ಳು ಸುದ್ದಿ ಹರಡಿದ ಟಿಎಂಸಿ ನಾಯಕಿ ಮಹುವಾ ಸೇರಿದಂತೆ ಹಲವರ ಟ್ವೀಟ್ ಇದೀಗ ಡಿಲೀಟ್ ಆಗಿದೆ.  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂಲ ಫೋಟೋ ಆಧರಿಸಿ ಭಾವಚಿತ್ರ ತಯಾರಿಸಲಾಗಿದೆ. ಈ ಭಾವಚಿತ್ರವನ್ನು ರಾಷ್ಟ್ರಪತಿ ಭವನದಲ್ಲಿ ಅನಾವರಣ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದು ಗುಮ್ನಾಮಿ ಚಿತ್ರದ ಫೋಟೋ ಎಂದು ಸುಳ್ಳು ಹರಡಲಾಗುತ್ತಿದೆ. 

click me!