
ಪಣಜಿ (ಏ.7): ಮಾಲೀಕನ ನಿರ್ಲಕ್ಷ್ಯಕ್ಕೆ ಪ್ರಾಣಿಯೊಂದು ಬಲಿಯಾಗಿರುವ ಆಘಾತಕಾರಿ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ. ತನ್ನ ಸಾಕು ನಾಯಿಯನ್ನು ಕಾರಿನಲ್ಲೇ ಲಾಕ್ ಮಾಡಿ ನಾಲ್ಕು ಗಂಟೆಗಳ ಕಾಲ ಕ್ಯಾಸಿನೊದಲ್ಲಿ ಮಜಾ ಮಾಡುತ್ತಿದ್ದ ಮಾಲೀಕನ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ಮೂಲದ ಭರತ್ ಕೆ.ಸಿ ಎಂಬಾತ ತನ್ನ 'ಗೋಲ್ಡನ್ ರಿಟ್ರೈವರ್' ತಳಿಯ ನಾಯಿಯನ್ನು ಕಾರಿನಲ್ಲಿ ಬಿಟ್ಟು, ಪಣಜಿಯ ಕ್ಯಾಸಿನೊಗೆ ಮಜಾ ಮಾಡಲು ತೆರಳಿದ್ದ.ಸುಮಾರು ನಾಲ್ಕು ಗಂಟೆಗಳ ಕಾಲ ಆತ ಕ್ಯಾಸಿನೋದಲ್ಲಿದ್ದ. ಈ ಅವಧಿಯಲ್ಲಿ ಕಾರಿನ ಕಿಟಕಿಗಳನ್ನು ಸ್ವಲ್ಪವೂ ತೆರೆಯದೆ, ಗಾಳಿಯಾಟಕ್ಕೂ ಅವಕಾಶವಿಲ್ಲದಂತೆ ಲಾಕ್ ಮಾಡಲಾಗಿತ್ತು. ಗೋವಾದಲ್ಲಿ ಬಿಸಿಲು 31-33 ಡಿಗ್ರಿ ಸೆಲ್ಸಿಯಸ್ನಷ್ಟು ಇರುವುದರಿಂದ, ಕಾರಿನ ಒಳಗಿನ ತಾಪಮಾನ ಗಗನಕ್ಕೇರಿತ್ತು.
ಬಿಸಿಲಿನ ತಾಪ ಮತ್ತು ಉಸಿರುಗಟ್ಟುವಿಕೆಯಿಂದ ನಾಯಿ ತೀವ್ರವಾಗಿ ನರಳಾಡಿದೆ. ಕಾರಿನ ಒಳಗಿದ್ದ ಮ್ಯಾಟ್ ಅನ್ನು ಹಲ್ಲುಗಳಿಂದ ಕಚ್ಚಿ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಆಮ್ಲಜನಕದ ಕೊರತೆಯಿಂದ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಜಿಲ್ಲಾ ಪ್ರಾಣಿ ದೌರ್ಜನ್ಯ ತಡೆ ಸಮಿತಿಯ ಕ್ಷೇತ್ರಾಧಿಕಾರಿ ಸ್ಟೀಫನ್ ಸ್ಯಾಮ್ಯುಯೆಲ್ ತಿಳಿಸಿದ್ದಾರೆ. ಪಣಜಿ ಪ್ರಾಣಿ ಕಲ್ಯಾಣ ಸಂಘಕ್ಕೆ ವಿಷಯ ತಿಳಿದು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಅಷ್ಟೊತ್ತಿಗಾಗಲೇ ನಾಯಿ ಉಸಿರುಗಟ್ಟಿ ಪ್ರಾಣ ಬಿಟ್ಟಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಭರತ್ ಕೆ.ಸಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಣಿ ಕಲ್ಯಾಣ ಸಂಘವು ಪಣಜಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಾಹನವನ್ನು ಸೀಜ್ ಮಾಡಲು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಒತ್ತಾಯಿಸಿದೆ. ಮಂಗಳವಾರ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಪ್ರದೇಶದಲ್ಲಿ ಇದೇ ರೀತಿ ಸಾಕುಪ್ರಾಣಿಗಳು ಮೃತಪಟ್ಟ ಐದನೇ ಪ್ರಕರಣ ಇದಾಗಿದೆ. ಹಿಂದಿನ ನಾಲ್ಕು ಪ್ರಕರಣಗಳಲ್ಲಿ ನಮಗೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಾವು ಪಟ್ಟು ಹಿಡಿದಿದ್ದೇವೆ" ಎಂದು ಸ್ಯಾಮ್ಯುಯೆಲ್ ತಿಳಿಸಿದ್ದಾರೆ.
ಸಾರ್ವಜನಿಕರು ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಪ್ರಾಣಿ ಹಕ್ಕು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಸಾಕುಪ್ರಾಣಿಗಳನ್ನು ವಾಹನದಲ್ಲಿ 30 ನಿಮಿಷಕ್ಕಿಂತ ಹೆಚ್ಚು ಕಾಲ ಒಬ್ಬಂಟಿಯಾಗಿ ಬಿಡಬೇಡಿ. ಕಿಟಕಿಗಳನ್ನು ಸ್ವಲ್ಪ ತೆರೆದಿಟ್ಟು ಗಾಳಿಯಾಡುವಂತೆ ನೋಡಿಕೊಳ್ಳಿ. ವಾಹನವನ್ನು ಯಾವಾಗಲೂ ನೆರಳಿನಲ್ಲಿ ನಿಲ್ಲಿಸಿ ಎಂದಿದ್ದಾರೆ. "ಪ್ರಾಣಿಗಳನ್ನು ಸಾಕುವ ಪ್ರತಿಯೊಬ್ಬರಿಗೂ ಅವುಗಳ ಯೋಗಕ್ಷೇಮದ ಹೊಣೆಗಾರಿಕೆ ಇರುತ್ತದೆ. ಕಾರಿನಲ್ಲಿ ಬಿಟ್ಟು ಹೋಗಿದ್ದು ಮಾಲೀಕನ ಸಂಪೂರ್ಣ ನಿರ್ಲಕ್ಷ್ಯ ಮತ್ತು ಕ್ರೂರ ಕೃತ್ಯ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ