
ನವದೆಹಲಿ (ಮಾ.2): ಉತ್ತರ ಪ್ರದೇಶದ ಗೋರಖ್ಪುರ ಮೂಲದ ಹಿಂದೂ ಧಾರ್ಮಿಕ ಗ್ರಂಥಗಳ ಅತಿದೊಡ್ಡ ಪ್ರಕಾಶಕರಾದ ಗೀತಾ ಪ್ರೆಸ್ ಸಂಭ್ರಮದಲ್ಲಿದೆ. ಅದಕ್ಕೆ ಕಾರಣ, ಪ್ರೆಸ್ನಲ್ಲಿ ಬಿಡುವಿಲ್ಲದಂತೆ ಪ್ರಕಾಶನ ಕೆಲಸಗಳು ನಡೆಯುತ್ತಿದೆ. ರಾಮ ಮಂದಿರ ಉದ್ಘಾಟನೆ ಆದ ಬಳಿಕ ಮಧ್ಯಕಾಲೀನ ಕವಿ ಗೋಸ್ವಾಮಿ ತುಳಸಿದಾಸ್ ರಚಿಸಿದ ಭಗವಾನ್ ರಾಮನಿಗೆ ಅರ್ಪಿತವಾದ ರಾಮಚರಿತಮಾನಸ್ಗೆ ಅಪಾರ ಬೇಡಿಕೆ ಬಂದಿದ್ದು, 100 ವರ್ಷಗಳ ಇತಿಹಾಸ ಹೊಂದಿರುವ ಗೀತಾ ಪ್ರೆಸ್ ದಿನದ ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಿದರೂ ಪೂರೈಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. 2020ರಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದ ದಿನದಿಂದಲೂ ಪವಿತ್ರ ಗ್ರಂಥಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಅದರೆ, ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ದಿನಾಂಕ ಘೋಷಣೆ ಆದ ದಿನದಿಂದ ಈ ಗ್ರಂಥದ ಬೇಡಿಕೆ ಮುಗಿಲುಮುಟ್ಟಿತ್ತು. ಜನವರಿ 22 ರಂದು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿದ ಬಳಿಕವಂತೂ ಗೀತಾ ಪ್ರೆಸ್ಗೆ ರಾಮಚರಿತಮಾನಸ್ ಪುಸ್ತಕದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದಿದೆ.
ಇಂಗ್ಲೀಷ್ ಅಲ್ಲದೆ, 15 ಭಾರತೀಯ ಭಾಷೆಗಳಲ್ಲಿ 1800 ಪುಸ್ತಕಗಳನ್ನಿ ಗೀತಾ ಪ್ರೆಸ್ ಪ್ರಿಂಟ್ ಮಾಡುತ್ತದೆ. ವಾರ್ಷಿಕವಾಗಿ ಪೀತಾ ಪ್ರೆಸ್ 22.50 ಲಕ್ಷ ಧಾರ್ಮಿಕ ಹಾಗೂ ಆಧ್ಮಾತ್ಮಿಕ ಪುಸ್ತಕಗಳನ್ನು ಪ್ರಿಂಟ್ ಮಾಡುತ್ತದೆ. 'ಪ್ರಸ್ತುತ ನಾವು ಒಂದು ತಿಂಗಳಲ್ಲಿ 1 ಲಕ್ಷ ರಾಮಚರಿತಮಾನಸ್ ಪುಸ್ತಕವನ್ನು ಪ್ರಿಂಟ್ ಮಾಡುತ್ತಿದ್ದೇವೆ. ಹಾಗಿದ್ದರೂ ಕೂಡ ಮಾರುಕಟ್ಟೆಯಲ್ಲಿ ಈ ಪವಿತ್ರ ಪುಸ್ತಕಕ್ಕೆ ಇರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ' ಎಂದು ಗೀತಾ ಪ್ರೆಸ್ನ ವ್ಯವಸ್ಥಾಪಕರಾದ ಲಾಲ್ಮಣಿ ತೇವಾರಿ ಹೇಳಿದ್ದಾರೆ.
'ಜನರಲ್ಲಿ ಅದರಲ್ಲೂ ಯುವಕರಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗ್ರಂಥದ ಬಗ್ಗೆ ಆಸಕ್ತಿ ವಿಪರೀತವಾಗಿ ಏರುತ್ತಿದೆ ಎನ್ನುವುದಕ್ಕೆ ಸಾಕ್ಷಿ ಇದು. ಈಗಾಗಲೇ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿರುವ ಕಂಟೆಂಟ್ಅನ್ನು 17 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ. 2.25 ಲಕ್ಷ ಮಂದಿ ಇದನ್ನು ಓದಿದ್ದಾರೆ. 68 ಸಾವಿರ ಬಾರಿ ಡೌನ್ಲೋಡ್ ಆಗಿದೆ. ಇಷ್ಟೆಲ್ಲಾ ಇದ್ದರೂ ಮಾರಾಟಗಾರರಿಂದ ಹೊಸ ಹೊ ಆರ್ಡರ್ಗೆ ಬೇಡಿಕೆ ಬರುತ್ತಿದ್ದು, ಇದು ಪೂರೈಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ. ಅಚ್ಚರಿಯ ಅಂಶವೇನೆಂದರೆ, ಪ್ರಕಾಶನ ಸಂಸ್ಥೆಯು ಡೌನ್ಲೋಡ್ ಮತ್ತು ಉಚಿತ ಓದುವಿಕೆಗಾಗಿ ರಾಮಚರಿತಮಾನಸ್ ಸೇರಿದಂತೆ ಸುಮಾರು 500 ಪುಸ್ತಕಗಳನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ, ಆದರೂ ಹೆಚ್ಚಿನ ಬೇಡಿಕೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಗೀತಾ ಪ್ರೆಸ್ ದೇಗುಲಕ್ಕೆ ಸಮ: ಗಾಂಧಿ ಪ್ರಶಸ್ತಿ ವಿರೋಧಿಸಿದ್ದ ಕಾಂಗ್ರೆಸ್ಗೆ ಮೋದಿ ಟಾಂಗ್
ಇನ್ನು ಧಾರ್ಮಿಕ ಗ್ರಂಥಗಳಿಗೆ ಬರುತ್ತಿರುವ ಬೇಡಿಕೆಯಿಂದ ಗೀತಾ ಪ್ರೆಸ್ ಕೂಡ ದೊಡ್ಡ ಮಟ್ಟದ ಆದಾಯದಲ್ಲಿದೆ. 2015ರಲ್ಲಿ ಇಲ್ಲಿನ ಕಾರ್ಮಿಕರಿಂದ ಮುಷ್ಕರ ಎದುರಿಸಿ, ಮುಚ್ಚಿಹೋಗುವ ಆತಂಕದಲ್ಲಿದ್ದ ಗೀತಾ ಪ್ರೆಸ್, ಈ ಹಣಕಾಸು ವರ್ಷದಲ್ಲಿ 130 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಇದು ಕಳೆದ ವರ್ಷ ಬಂದ ಆದಾಯಕ್ಕಿಂತ ಶೇ. 25ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಗೀತಾ ಪ್ರೆಸ್108 ಕೋಟಿ ಆದಾಯ ಗಳಿಸಿತ್ತು.
2015ರ ಬಳಿಕ ನಾವು ಹೊಸ ಪ್ರಿಂಟಿಂಗ್ ಯಂತ್ರಗಳನ್ನು ನಮ್ಮ ಗೋರಖ್ಪುರ ಪ್ಲ್ಯಾಂಟ್ಗಳಲ್ಲಿ 30 ಕೋಟಿ ವೆಚ್ಚದಲ್ಲಿ ಸ್ಥಾಪಿಸಿದ್ದೇವೆ ಎಂದು ಲಾಲ್ಮಣಿ ತೇವಾರಿ ಹೇಳಿದ್ದು, 2015ರಲ್ಲಿ ಹಣಕಾಸು ಸಮಸ್ಯೆಯಿಂದ ಗೀತಾ ಪ್ರೆಸ್ ಮುಚ್ಚಿವ ಸನಿಹ ಹೋಗಿತ್ತು ಎನ್ನುವ ವಿಚಾರವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. "ಒಂದು ವರ್ಗದ ಕಾರ್ಮಿಕರಲ್ಲಿ ಅವರ ತುಟ್ಟಿಭತ್ಯೆಗಳು ಕಡ್ಡಾಯ ಕಾರ್ಮಿಕ ಇಲಾಖೆಯ ಮಾನದಂಡಗಳಿಗಿಂತ ಕೆಳಗಿವೆ ಎನ್ನುವ ಗೊಂದಲವಿತ್ತು. ಕಾರ್ಮಿಕರ ತೃಪ್ತಿಗಾಗಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿತ್ತು ”ಎಂದು ತಿಳಿಸಿದ್ದಾರೆ. ಆಗ ಗೋರಖ್ಪುರ ಸಂಸದರಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಮಧ್ಯಪ್ರವೇಶಿಸಿದ್ದರು.
ಗೀತಾ ಪ್ರೆಸ್ ತನ್ನ ವಿಸ್ತರಣೆಗಾಗಿ ಗೋರಖ್ಪುರದಲ್ಲಿ 20 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ ಮತ್ತು ಇನ್ನೂ 100 ವರ್ಷಗಳವರೆಗೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 9 ಕೋಟಿ ವೆಚ್ಚದ ಹೊಸ ಯಂತ್ರಗಳನ್ನು ಅಳವಡಿಸುತ್ತಿದೆ. ಈಗಾಗಲೇ ಎರಡು ಯಂತ್ರಗಳು ಬಂದಿದ್ದರೆ, ಇನ್ನೊಂದು ಯಂತ್ರವನ್ನು ಗೋರಖ್ಪುರದಲ್ಲಿ ಅಳವಡಿಸಲಿದ್ದು, ಈ ಯಂತ್ರ ಜಪಾನ್ನಿಂದ ಬರಬೇಕಿದೆ ಎಂದು ತೇವಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ