ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಕೋರಿದ ಪಾತಕಿ ಅಬು ಸಲೇಂ, ಹಾಗೆಲ್ಲ ಆಗಲ್ಲ 2030ರ ವರೆಗೆ ಜೈಲಲ್ಲೇ ಇರಪ್ಪ ಎಂದ ಸುಪ್ರೀಂ

Published : Sep 11, 2026, 12:52 PM IST
abu salem

ಸಾರಾಂಶ

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪೋರ್ಚುಗಲ್ ಜೊತೆಗಿನ ಹಸ್ತಾಂತರ ಒಪ್ಪಂದದ ಪ್ರಕಾರ, 25 ವರ್ಷಗಳ ಶಿಕ್ಷೆಯು ನವೆಂಬರ್ 2030ಕ್ಕೆ ಪೂರ್ಣಗೊಳ್ಳಲಿದ್ದು, ಅದಕ್ಕೂ ಮುನ್ನ ಬಿಡುಗಡೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ, ಭೂಗತ ಪಾತಕಿ ಅಬು ಸಲೇಂ ತನಗೆ ವಿಧಿಸಲಾದ ಶಿಕ್ಷೆಯ ಅವಧಿ ಪೂರ್ಣಗೊಂಡಿದೆ ಎಂದು ಪ್ರತಿಪಾದಿಸಿ ಸಲ್ಲಿಸಿದ್ದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಪೀಠವು ಈ ವಿಚಾರಣೆ ನಡೆಸಿದ್ದು, ಬಾಂಬೆ ಹೈಕೋರ್ಟ್ ಏಪ್ರಿಲ್ 15, 2026ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಸಲೇಂ ಸಲ್ಲಿಸಿರುವ ಈ ಅರ್ಜಿಯು ಅಕಾಲಿಕ ಹಾಗೂ ಅತಾರ್ಕಿಕ (ತಪ್ಪು ಕಲ್ಪನೆಯಿಂದ ಕೂಡಿದ್ದು) ಎಂದು ಅಭಿಪ್ರಾಯಪಟ್ಟಿರುವ ಪೀಠವು, ಹೈಕೋರ್ಟ್ ಆದೇಶದಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ಹಸ್ತಾಂತರ ಒಪ್ಪಂದ

ದೀರ್ಘಕಾಲದ ಕಾನೂನು ಹೋರಾಟದ ನಂತರ ನವೆಂಬರ್ 11, 2005ರಂದು ಅಬು ಸಲೇಂನನ್ನು ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಭಾರತ ಮತ್ತು ಪೋರ್ಚುಗಲ್ ಸರ್ಕಾರಗಳ ನಡುವೆ ನಡೆದ ಹಸ್ತಾಂತರ ಒಪ್ಪಂದದ ನಿಯಮಗಳ ಪ್ರಕಾರ, ಸಲೇಂಗೆ ಮರಣದಂಡನೆ ವಿಧಿಸುವಂತಿಲ್ಲ ಮತ್ತು ಆತನ ಒಟ್ಟು ಜೈಲು ಶಿಕ್ಷೆಯ ಅವಧಿಯು 25 ವರ್ಷಗಳನ್ನು ಮೀರುವಂತಿಲ್ಲ ಎಂಬ ಕಟ್ಟುನಿಟ್ಟಿನ ಷರತ್ತಿತ್ತು.

ಇದರ ಆಧಾರದ ಮೇಲೆ, ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ತಡೆ (ಟಾಡಾ) ವಿಶೇಷ ನ್ಯಾಯಾಲಯವು ಡಿಸೆಂಬರ್ 2024ರಲ್ಲಿ ಬಿಡುಗಡೆ ಮನವಿಯನ್ನು ತಿರಸ್ಕರಿಸಿದಾಗ ಸಲೇಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.

ಸಲೇಂ ವಾದ ಮತ್ತು ಸುಪ್ರೀಂ ಕೋರ್ಟ್ ನಿಲುವು:

ಸಲೇಂ ಪರ ವಾದಮಂಡಿಸಿದ ಹಿರಿಯ ವಕೀಲ ರಿಷಿ ಮಲ್ಹೋತ್ರಾ, "ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದ ಸಮಯ ಹಾಗೂ ಜೈಲಿನ ಸನ್ನಡತೆಯ ಆಧಾರದಲ್ಲಿ ದೊರೆತಿರುವ ವಿನಾಯಿತಿ ದಿನಗಳನ್ನು ಒಟ್ಟಾರೆಯಾಗಿ ಸೇರಿಸಿದರೆ 25 ವರ್ಷಗಳ ಶಿಕ್ಷೆಯ ಅವಧಿ ಪೂರ್ಣಗೊಂಡಂತಾಗುತ್ತದೆ" ಎಂದು ವಾದಿಸಿದ್ದರು. ತಮ್ಮ ವಾದಕ್ಕೆ ಬೆಂಬಲವಾಗಿ 'ಸ್ವಾಮಿ ಶ್ರದ್ದಾನಂದ ವಿರುದ್ಧ ಕರ್ನಾಟಕ ಸರ್ಕಾರ' (Swamy Shraddhananda v. State of Karnataka, 2008) ಪ್ರಕರಣದ ತೀರ್ಪನ್ನು ಕೋರ್ಟ್ ಮುನ್ನೆಲೆಗೆ ತಂದಿದ್ದರು.

ಆದರೆ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್, ಹಸ್ತಾಂತರ ಒಪ್ಪಂದದ ಪ್ರಕಾರ 25 ವರ್ಷಗಳ ಶಿಕ್ಷೆಯ ಅವಧಿಯು ಆತನ ಬಂಧನದ ದಿನಾಂಕದಿಂದ ಲೆಕ್ಕಾಚಾರವಾಗಿ ನವೆಂಬರ್ 2030ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿವೆ. ಸನ್ನಡತೆಯ ವಿನಾಯಿತಿಗಳನ್ನು ಬಳಸಿ ಈ ಅವಧಿಯನ್ನು ಮುಂಚಿತವಾಗಿಯೇ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

"ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?" ಭಾರತ ಸರ್ಕಾರದ ವಿರುದ್ಧ ಕಟು ವ್ಯಂಗ್ಯವಾಡಿದ ವಿಜಯ್ ಮಲ್ಯ!
ಮೀನು, ಮಾಂಸ, ಮದ್ಯವೇ ದೇವರ ನೈವೇದ್ಯ; ಭಾರತದ ಈ ದೇವಾಲಯಗಳ ಸಂಪ್ರದಾಯ ಅಚ್ಚರಿ ಮೂಡಿಸುತ್ತದೆ