From the India gate ರಾಹುಲ್ ಯಾತ್ರೆ ಒಳಗೆ ರಾಜಕೀಯ, ರಾಜಸ್ಥಾನ ಬಿಜೆಪಿ ಮದ್ವೆ ಆಮಂತ್ರಣ ತಲೆನೋವು!

By Suvarna NewsFirst Published Jan 29, 2023, 5:30 PM IST
Highlights

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಇದರೊಳಗಿನ ರಾಜಕೀಯ ಸದ್ಯಕ್ಕೆ ಹೊತ್ತಿ ಉರಿಯುವ ಲಕ್ಷಣ ಕಾಣಿಸುತ್ತಿದೆ. ಪಶ್ಚಿಮ ಬಂಗಳಾದಲ್ಲಿ ರಾಜ್ಯಪಾಲರೇ ಬಿಜೆಪಿಗೆ ತಲೆನೋವಾಗಿದ್ದರೆ, ರಾಜಸ್ಥಾನದಲ್ಲಿ ಆಮಂತ್ರಣ ಪತ್ರಿಕೆ ಕಚ್ಚಾಟ ಜೋರಾಗಿದೆ. ಇಂದಿನ ಇಂಡಿಯಾ ಗೇಟ್ ಅಂಕಣದಲ್ಲಿ ಭಾರತದ ರಾಜಕೀಯ ಒಳಸುಳಿ ವಿವರ.

ಮುಸುಕುದಾರಿ ನಾಯಕರು..! 
ಕಳ್ಳರು ಕಳ್ಳತನ ಮಾಡುವಾಗ ಮಾತ್ರ ಮುಸುಕು ಹಾಕಿಕೊಳ್ತಾರೆ ಆದ್ರೆ ರಾಜಕಾರಣಿಗಳು ಸದಾ ಮುಸುಕು ಹಾಕಿಕೊಂಡೇ ಇರ್ತಾರೆ. ಅಧಿಕಾರ ತಮಗೆ, ತಮ್ಮ ಮನೆಯ ಬಾಗಿಲಿಗೆ ಬರುತ್ತೇ ಅಂದಾಗ ಮಾತ್ರ ಮುಸುಕು ತೆರೆದು ಒಮ್ಮಲ್ಲೇ ಪಕ್ಷ.. ನೀತಿ.. ಮೌಲ್ಯ ಗಳ ಜಪ ಅಂತ ಶುರುಮಾಡ್ತಾರೆ. ಸಿದ್ದಾಂತ, ಪಕ್ಷ  ಅಂತೆಲ್ಲಾ ಮಾತಾಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ತಾರೆ. ಆದ್ರೆ ಅಧಿಕಾರ ಬರಲ್ಲ ಅಂದಾಗ ಸಿದ್ದಾಂತಗಳು ಮೇಲೆ ಪ್ರಬಂಧ ಬರೆದು ಲೆಟರ್  ಪೋಸ್ಟ್ ಬಾಕ್ಸಿಗೆ ಹಾಕ್ತಾರೆ.. ಹೀಗೆ ಬಂದ ಲೆಟರ್ ಗಳನ್ನು ಓದಿಕೊಳ್ಳುವ ಸರದಿ ಈಗ ರಾಹುಲ್ ಗಾಂಧಿಯವರದ್ದು.

ದ್ವೇಷ ಬೇಡ, ಶಾಂತಿ ಹಾಗು ಸಹೋದರತೆಯೊಂದಿಗೆ ಬಾಳೋಣ. ವಿಭಜನೆ ಬೇಡ ಎಲ್ಲರೂ ಒಟ್ಟಾಗಿ ಹೋಗೋಣ ಅಂತಾ 3,500 ಕಿಲೋಮೀಟರ್ ಪಾದಯಾತ್ರೆ ಮಾಡಿ ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಅಂತಿಮಗೊಳಿಸಲು ರಾಹುಲ್ ಗಾಂಧಿ ಮತ್ತವರ ತಂಡ ಶ್ರಮಿಸುತ್ತಿದೆ.

ಆದ್ರೆ ಇತ್ತ ಪ್ರಾದೇಶಿಕ ಪಕ್ಷಗಳು ಅಥವಾ ಜಾತ್ಯತೀತಯನ್ನು ಮುಸುಕು ಹಾಕಿರುವ ಪಕ್ಷಗಳು ಮತ್ತು  ಅವುಗಳ  ಸೂತ್ರದರರು ಈಗ ಪತ್ರ ಬರೆದು ಬೆಂಬಲ ಸೂಚಿಸುತ್ತಿದ್ದಾರೆ. ಯಾತ್ರೆ ರಾಜ್ಯಗಳಿಗೆ ಬಂದಾಗ ಫೀಲ್ಡ್ ಗೆ ಬಂದು ಬೆಂಬಿಸಿದ್ದೇ ಕಡಿಮೆ. ಬರೀ ಟಿವಿಗಳ ಮುಂದೆ ಅಥವಾ ಕಾರ್ಯಕರ್ತರ ಸಭೆಗಳಲ್ಲಿ ಪುಂಖಾನು ಪುಂಖವಾಗಿ ಮಾತಾಡುವ ನಾಯಕರು ಅರ್ಥಾತ್ ಮುಸುಕುದಾರಿಗಳು  ಜೋಡೋ ಯಾತ್ರೆ ಶ್ರೀನಗರ ತಲುಪಿದಾಗ ಹೊಸ ವರಸೆ ಶುರು ಮಾಡಿದ್ದಾರೆ. ಪತ್ರ ಬರೆದ ಬೆಂಬಲ ಕೊಟ್ಟಿದೇವೆ ಅಂತಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಾಹುಲ್ ಯಾತ್ರೆಗೆ ಶಹಬಾಶ್ ಅಂತ ಪತ್ರ ಬರೆದಿದ್ದಾರೆ. ಇನ್ನೂ ಕೆಲ ನಾಯಕರು ಅವರ ಪಕ್ಷದ ಪರವಾಗಿ ಸೋತು ಸುಣ್ಣ ಆಗಿರುವ ಮುಖಂಡರನ್ನು ಕಳುಹಿಸಿ ಹನ್ನೊಂದರಲ್ಲಿ ನಮ್ಮದೂ ಒಂದು ಕಲ್ಲು ಹೊಡೆಯುತ್ತಿದ್ದಾರೆ. ಯಾತ್ರೆಯ ಉದ್ದೇಶದ ಹೆಸರಲ್ಲಿ ಬರೋ ಓಟು ಬೇಕು. ಆದ್ರೆ ಗಟ್ಟಿಯಾಗಿ ನಿಂತು  ಸಿದ್ದಾಂತಕ್ಕೆ ಬದ್ದವಾಗಿ ಮಾತ್ರ ಮಾತಾಡಲ್ಲ. ಇದನ್ನೇ ಬಹುಶಃ ರಾಜಕೀಯದ ವಿಚಿತ್ರ ಅಥವಾ ಮುಸುಕುದಾರಿಗಳ ಮರ್ಮ ಎನ್ನಬಹುದು ಅನ್ನಿಸುತ್ತೆ...

From the India Gate: ಹರಿಯೋ ನೀರಿಗೆ 'ಗೋವಾ' ದೊಣ್ಣೆ ನಾಯಕನ ಅಪ್ಪಣೆ: ರಾಜ್ಯದಲ್ಲಿ ಸಮರ್ಥ ಭಾಷಾಂತರಕಾರರ ಕೊರತೆ..!

ರಾಮಚರಿತಮಾನಸ ತಂದ ಸಂಕಷ್ಟ
ತುಳಸಿದಾಸರ ರಾಮಚರಿತಮಾನಸವನ್ನು ಉಲ್ಲೇಖಿಸಿ ಸಮಾಜವಾದಿ ಪಾರ್ಟಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮಾಡಿದ ಭಾಷಣ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. 2024ರ ಲೋಕಸಭೆಗೆ ತಯಾರಿ ಮಾಡಿಕೊಳ್ಳುತ್ತಿರುವ ಸಮಾಜವಾದಿ ಪಾರ್ಟಿಗೆ ಹಿನ್ನಡೆಯಾಗಿದೆ. ಮೌರ್ಯ ಭಾಷಣದಿಂದ ಅಖಿಲೇಶ್ ಯಾದವ್ ಸೇರಿದಂತೆ ಎಸ್‌ಪಿ ನಾಯಕರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುತ್ತಿದೆ. 

ತುಳಸಿದಾಸ್ ರಚಿತ ರಾಮಚರಿತಮಾನಸದಲ್ಲಿ ಜಾತಿ ವಿರುದ್ಧ ಬರೆಯಲಾಗಿದೆ. ತುಳಸಿದಾಸ್‌ಗೆ ಅಧಿಕಾರಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದರು. ಮೌರ್ಯ ಹೇಳಿಕೆ ಸಮಾಜವಾದಿ ಪಾರ್ಟಿಗೆ ಸಂಕಷ್ಟ ಎದುರಾಗಿದೆ. ತಮ್ಮದೇ ಪಕ್ಷದ ನಾಯಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಮಾಜವಾದಿ ಪಾರ್ಟಿ ಅಧ್ಯಕ್ಷನಾಗುವ ಕನಸು ಇಟ್ಟುಕೊಂಡಿದ್ದ ಪ್ರಸಾದ್ ಮೌರ್ಯಗೆ ಇದೀಗ ತೀವ್ರ ಹಿನ್ನಡೆಯಾಗಿದೆ.  

ಪ್ರಶ್ನೆ ಪತ್ರಿಕೆ ಸೋರಿಕೆ
ರಾಜಸ್ಥಾನ ಶಿಕ್ಷಕರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತೀವ್ರ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಬಿಜೆಪಿ ಸಿಬಿಐ ತನಿಖೆಗ ಆಗ್ರಹಿಸಿದೆ. ಇತ್ತ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಇದು ರಾಜಕೀಯ ಎಂದಿದ್ದಾರೆ. ಬಿಜೆಪಿ ಕಳೆಮಟ್ಟದ ರಾಜಕೀಯ ಮಾಡುತ್ತಿದೆ. ಇದರಿಂದ ಬಿಜೆಪಿಗೆ ಮುಳುವಾಗಲಿದೆ ಎಂದಿದ್ದಾರೆ. ಬಿಜೆಪಿ ಪ್ರತಿಭಟನೆ ಹಾಗೂ ಆಗ್ರ ಹೆಚ್ಚಾಗುತ್ತಿದ್ದಂತೆ, ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ರಾಜ್ಯದಲ್ಲಿ ಇದೆ. ಇದನ್ನು ಗಂಭೀರ ಮಾಡುವಂತ ಅಗತ್ಯವಿಲ್ಲ. ಆದರೆ ರಾಜಸ್ಥಾನ ಸರ್ಕಾರ ಈ ಕುರಿತು ಕಠಿಣ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಕೇರಳ ಆಪ್‌ನಲ್ಲಿ ತಳಮಳ
ಸ್ಥಳೀಯ ರಾಜಕೀಯ ಅರ್ಥ ಮಾಡಿಕೊಳ್ಳದೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆ ಕೇರಳ ಆಮ್ ಆದ್ಮಿ ಪಾರ್ಟಿ ಭಾರಿ ತಳಮಳ ಸೃಷ್ಟಿಸಿತ್ತು. ಇದರ ಪರಿಣಾಮ ಕಳೆದ ಹಲವು ದಿನಗಳಿಂದ ಕೇರಳ ಆಮ್ ಆದ್ಮಿ ಪಾರ್ಟಿಯೊಳಗೆ ಆಕ್ರೋಶ, ಬಣ, ಬಂಡಾಯಗಳು ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಿತ್ತು. ಇದರ ಪರಿಣಾಮ ಕೇರಳದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ವಿಸರ್ಜಿಸಲಾಗಿದೆ. ಹೊಸ ಪದಾಧಿಕಾರಿಗಳನ್ನು ಶೀಘ್ರದಲ್ಲೇ ನೇಮಕ ಮಾಡುವುದಾಗಿ ಘೋಷಿಸಿದೆ. 

From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

ತೆಲಂಗಾಣ ರ್ಯಾಲಿಯಲ್ಲಿ ಅರವಿಂದ್ ಕೇಜ್ರಿವಾಲ್, ಪಿಣರಾಯಿ ವಿಜಯನ್ ಸರ್ಕಾರದ ಆಡಳಿತ ದೇಶಕ್ಕೆ ಮಾದರಿ ಎಂದಿದ್ದರು. ಪಿಣರಾಯಿ ವಿಜಯನ್ ಹೊಗಳಿ ಅಟ್ಟಕ್ಕೇರಿಸಿದ್ದರು. ಈ ಹೇಳಿಕೆ ಕೇರಳ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರಿಗೆ ತೀವ್ರ ಹಿನ್ನಡೆ ತಂದಿತ್ತು. ಪಿಣರಾಯಿ ವಿಜಯನ್ ಹಾಗೂ ಸರ್ಕಾರದ ವೈಫಲ್ಯ ಕುರಿತು ಸರಣಿ ಸಭೆ, ಪ್ರತಿಭಟನೆ ಮಾಡುತ್ತಿದ್ದ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. ಹೀಗಾಗಿ ಪಕ್ಷದೊಳಗೆ ಬಂಡಾಯ ಸೃಷ್ಟಿಯಾಗಿತ್ತು.

ಮದುವೆ ಆಮಂತ್ರಣ
ರಾಜಸ್ಥಾನ ಬಿಜೆಪಿಯಲ್ಲಿ ಮದುವೆ ಆಮಂತ್ರಣ ಒಳಗೊಳಗೆ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ಪ್ರಮುಖ ನಾಯಕರ ಪುತ್ರನ ಮದುವೆಗೆ ರಾಜಸ್ಥಾನದ ಬಹುತೇಕ ಬಿಜಿಪಿ ನಾಯಕರಿಗೆ ಆಹ್ವಾನ ನೀಡಿಲ್ಲ. ಆರಂಭಿಕ ಹಂತದಲ್ಲಿ 20 ನಾಯಕರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು. ಬಳಿಕ ಕೇವಲ ಇಬ್ಬರಿಗೆ ಮಾತ್ರ ಆಮಂತ್ರಣ ಪತ್ರ ನೀಡಲಾಗಿತ್ತು. ಇದು ಇನ್ನುಳಿದ ನಾಯಕರ ಅಸಧಾನಕ್ಕೆ ಕಾರಣವಾಗಿದೆ.

ಬಿಜೆಪಿಗೆ ಬಿಸಿ ತುಪ್ಪವಾದ ಬೋಸ್
ಪಶ್ಚಿಮ ಬಂಗಾಳದಲ್ಲಿ ರಾಜ್ಯಾಪಲರು ಹಾಗೂ ಮಮತಾ ಬ್ಯಾನರ್ಜಿ ನಡುವೆ ಗುದ್ದಾಟಕ್ಕೆ ವರ್ಷಗಳ ಇತಿಹಾಸವಿದೆ. ಇದು ಜಗದೀಪ್ ಧನ್ಕರ್ ಕಾಲದಲ್ಲಿ ಉಚ್ಚಸ್ಥಿತೆಗೆ ತಲುಪಿತ್ತು. ಆದರೆ ಧನ್ಕರ್ ಉಪರಾಷ್ಟ್ರಪತಿಯಾದ ಬಳಿಕ ಪಶ್ಚಿಮ ಬಂಗಾಳಕ್ಕೆ ಆನಂದ್ ಬೋಸ್ ರಾಜ್ಯಪಾಲರಾಗಿ ನೇಮಕಗೊಂಡರು. ಪಶ್ಚಿಮ ಬಂಗಳಾ ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿತ್ತು. ಆದರೆ ಆನಂದ್ ಬೋಸ್, ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಆಪ್ತವಾಗಿಬಿಟ್ಟರು. ಗುದ್ದಾಟ, ಬಡಿದಾಟ ಸಂಪೂರ್ಣ ಬಂದ್ ಆಯಿತು. ದೀದಿ ಹೇಳಿದಂತೆ ರಾಜ್ಯಾಪಾಲರು ಕೇಳುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದರ ಪರಿಣಾಮ ಬೋಸ್ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿದೆ. ಇದರ ಪರಿಣಾಮ ಆನಂದ್ ಬೋಸ್ ಅವರನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ. 

ಪಾದಯಾತ್ರೆ ಪರ್ವ
ತೆಲುಗು ದೇಶಂ ಪಾರ್ಟಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ 4,000 ಕಿಲೋಮೀಟರ್ ಪಾದಯಾತ್ರೆ ಆರಂಭಿಸಿದ್ದಾರೆ. ಜನವರಿ 27 ರಂದು ಆರಂಭಗೊಂಡ ಈ ಪಾದಯಾತ್ರೆ ಸಂಪೂರ್ಣ ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಲಿದೆ. ಮುಂದಿನ 400 ದಿನಗಳಲ್ಲಿ 120 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಇದು ಯುವ ಸಮೂಹದ ಧ್ವನಿ ಎಂದೇ ಬಿಂಬಿಸಲಾಗುತ್ತಿದೆ. ಜಗಮೋಹನ್ ರೆಡ್ಡಿ ಇದೇ ರೀತಿ ಪಾದಯಾತ್ರೆ ಮೂಲಕ ಸಿಎಂ ಪಟ್ಟಕ್ಕೇರಿದ್ದರು.ದೇಶದ ಇತಿಹಾಸದಲ್ಲಿ ಹಲವು ಪಕ್ಷಗಳು ಪಾದಯಾತ್ರೆ ಮಾಡಿ ಅಧಿಕಾರ ಹಿಡಿದಿದೆ. ಇದೀಗ ತೆಲುಗಂ ದೇಶ ಪಾರ್ಟಿ ಕೂಡ ಪಾದಯಾತ್ರೆ ಮೂಲಕ ಅಧಿಕಾರ ಹಿಡಿಯಲು ಹೊಸ ಪ್ಲಾನ್ ರೆಡಿ ಮಾಡಿದೆ.

click me!