
ಚೆನ್ನೈ (ಮೇ.21): ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ತಮಿಳುನಾಡಿದ ಮಾಜಿ ವಿಶೇಷ ಡಿಜಿಪಿ ರಾಜೇಶ್ ದಾಸ್ ತಮ್ಮ ಮಾಜಿ ಪತ್ನಿ ಹಾಗೂ ಐಎಎಸ್ ಅಧಿಕಾರಿ ಬೇಲಾ ವೆಂಕಟೇಶನ್ ವಿರುದ್ಧ ಆಕ್ರೋಸ ಹೊರಹಾಕಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಆಕೆ ಕಟ್ ಮಾಡಿದ್ದಾರೆ. ಸೋಮವಾರ ಇಡೀ ದಿನ ಮನೆಗೆ ವಿದ್ಯುತ್ ಸಂಪರ್ಕವಿದ್ದಿರಲಿಲ್ಲ ಎಂದು ದೂರಿದ್ದು, ಇದಕ್ಕೆ ನನ್ನ ಮಾಜಿ ಪತ್ನಿ ಹಾಗೂ ಐಎಎಸ್ ಅಧಿಕಾರಿ ಬೇಲಾ ವೆಂಕಟೇಶನ್ ಕಾರಣ ಎಂದು ಹೇಳಿದ್ದಾರೆ. ಬೇಲಾ ವೆಂಕಟೇಶನ್ ತಮಿಳುನಾಡು ಸರ್ಕಾರ ಇಂಧನ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದಾರೆ. ಮನೆಯಲ್ಲಿ ಒಬ್ಬರು ಉಳಿದುಕೊಂಡಿರುವಾಗ ವಿದ್ಯುತ್ ಸಂಪರ್ಕವನ್ನು ಕಟ್ ಮಾಡುವ ಮೂಲಕ ತಮ್ಮ ಅಧಿಕಾರವನ್ನು ಅವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತಮಿಳುನಾಡು ಜನರೇಷನ್ ಮತ್ತು ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ (TANGEDCO) ಅಧಿಕಾರಿಗಳು ಭಾನುವಾರ, ಮೇ 19 ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ರಾಜೇಶ್ ದಾಸ್ ಅವರ ಮನೆಗೆ ಭೇಟಿ ನೀಡಿದ್ದರು. ಆದರೆ, ಇದನ್ನು ನಾನು ವಿರೋಧಿಸಿದ ಬಳಿಕ ಅವರು ವಾಪಾಸ್ ತೆರಳಿದ್ದರು. ಆದರೆ, ಸೋಮವಾರ ರಾಜ್ಯ ಇಂಧನ ಇಲಾಖೆಯ ಕಾರ್ಯದರ್ಶಿಯ ಪತ್ರದೊಂದಿಗೆ ಅವರು ಮನೆಗೆ ಮತ್ತೆ ಬಂದಿದ್ದರು ಎಂದಿದ್ದಾರೆ.
“ನಾನು ಮನೆಯಲ್ಲಿ ವಾಸವಾಗಿರುವುದರಿಂದ ಪೂರೈಕೆಯನ್ನು ಕಡಿತಗೊಳಿಸುವ ಮೊದಲು TANGEDCO ಲಿಖಿತವಾಗಿ ನನ್ನ ಅಭಿಪ್ರಾಯವನ್ನು ಪಡೆಯಬೇಕು. ಯಾವುದೇ ಬಾಕಿ ಉಳಿದಿಲ್ಲ ಅಥವಾ ಸಂಪರ್ಕ ಕಡಿತವನ್ನು ಸಮರ್ಥಿಸಲು ನ್ಯಾಯಾಲಯದ ಆದೇಶವಿಲ್ಲ. ಭೂಮಾಲೀಕರು ಹಾಗೆ ಮಾಡಲು ಬಯಸಿದರೂ, ಬಾಡಿಗೆದಾರರು ಇದ್ದಾಗ TANGEDCO ಇದನ್ನು ಮಾಡಲು ಸಾಧ್ಯವಿಲ್ಲ. ಆದರೆ ಅವರು ಕಟ್ಟಡದ ಹೊರಗಿರುವ ಕಂಬವನ್ನು ಏರಿದ್ದಲ್ಲದೆ, ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದರು, ”ಎಂದು ರಾಜೇಶ್ ತಿಳಿಸಿದ್ದಾರೆ.
ಅಧಿಕಾರ ದುರುಪಯೋಗದ ಆರೋಪಕ್ಕೆ ಪ್ರತಿಕ್ರಿಯಿಸಿದ ಬೀಲಾ, ಕಳೆದ ಮೂರು ತಿಂಗಳಿಂದ ಮನೆ ಖಾಲಿ ಇದ್ದು, ಸಂಪರ್ಕ ಹಾಗೂ ಜಮೀನು ತನ್ನ ಹೆಸರಲ್ಲಿರುವುದರಿಂದ ಅನಗತ್ಯವಾಗಿ ವಿದ್ಯುತ್ ಬಿಲ್ಗೆ ಖರ್ಚು ಮಾಡಲು ಬಯಸುವುದಿಲ್ಲ ಎಂದು ಹೇಳಿದರು. “ಮನೆಯಲ್ಲಿ ಇದ್ದೇವೆ ಎನ್ನುವ ಪುರಾವೆಯ ದಾಖಲೆಯನ್ನು ನೀಡಲು ಸಾಕಷ್ಟು ಸಮಯವನ್ನು ನೀಡಲಾಗಿದೆ (ರಾಜೇಶ್ ಅವರು ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವುದನ್ನು ಖಚಿತಪಡಿಸಲು). ಅವರು ಅದನ್ನು ಪೂರೈಸಲು ವಿಫಲವಾದ ಕಾರಣ, TANGEDCO ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ”ಎಂದು ಅವರು ಹೇಳಿದರು.
ಇಬ್ಬರು ಒಪ್ಪಿ ಅರ್ಜಿ ವಾಪಸ್ ಪಡೆದ್ರೆ ವ್ಯಾಜ್ಯ ಇತ್ಯರ್ಥ: ರೂಪ-ರೋಹಿಣಿಗೆ ಸುಪ್ರೀಂಕೋರ್ಟ್ ಸಲಹೆ
2023 ರಲ್ಲಿ, ವಿಲ್ಲುಪುರಂನ ವಿಚಾರಣಾ ನ್ಯಾಯಾಲಯವು ರಾಜೇಶ್ ದಾಸ್ ತನ್ನ ಅಡಿಯಲ್ಲಿ ಕೆಲಸ ಮಾಡುವ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಈ ವರ್ಷದ ಏಪ್ರಿಲ್ನಲ್ಲಿ, ಅವರು ಎರಡು ಮನವಿಗಳೊಂದಿಗೆ ಮದ್ರಾಸ್ ಹೈಕೋರ್ಟ್ಗೆ ತೆರಳಿದ್ದರು. ಒಂದು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮತ್ತು ಇನ್ನೊಂದು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವುದರಿಂದ ವಿನಾಯಿತಿ ಕೋರಿ, ಇವೆರಡನ್ನೂ ವಜಾಗೊಳಿಸಲಾಯಿತು. ಎರಡು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇ 17 ರಂದು ಅವರ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
'ಇಬ್ಬರೂ ಕೂತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ' ಡಿ.ರೂಪಾ, ಸಿಂಧೂರಿಗೆ ಸುಪ್ರೀಂ ಸಲಹೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ