ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಬೆಂಕಿ ಅವಘಡ, ಮತ್ತೊಂದು ಅಪಶಕುನದ ಸೂಚನೆಯೇ?

Published : May 05, 2025, 04:24 PM IST
ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಬೆಂಕಿ ಅವಘಡ, ಮತ್ತೊಂದು ಅಪಶಕುನದ ಸೂಚನೆಯೇ?

ಸಾರಾಂಶ

ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿ, ಸಿಸಿಟಿವಿ ಕೊಠಡಿ ಹಾಗೂ ಮಾಲಿನ್ಯ ನಿಯಂತ್ರಣ ಉಪಕರಣಗಳು ಸುಟ್ಟುಹೋದವು. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ ಬೆಂಕಿ ನಿಯಂತ್ರಿಸಿತು. ಯಾವುದೇ ಪ್ರಾಣಹಾನಿಯಾಗಿಲ್ಲ. ದರ್ಶನ ತಾತ್ಕಾಲಿಕವಾಗಿ ಸ್ಥಗಿತಗೊಂಡು, ನಂತರ ಪುನರಾರಂಭವಾಯಿತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪ್ರಸಿದ್ಧವಾದ ಮಹಾಕಾಳೇಶ್ವರ ದೇವಾಲಯದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿಯ ತೀವ್ರತೆ  ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇತ್ತು ಎಂದರೆ ಒಂದು ಕಿಲೋಮೀಟರ್ ದೂರದಿಂದಲೂ ಹೊಗೆ ಮತ್ತು ಬೆಂಕಿಯ ಜ್ವಾಲೆ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಇದು ಸ್ಥಳೀಯ ಜನರಲ್ಲಿ  ಭಯದ ಪರಿಸ್ಥಿತಿಯನ್ನು ಉಂಟುಮಾಡಿತು. ಜೊತೆಗೆ ಹಲವು ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿದೆ. ಇದು ಅಪಶಕುನದ ಸಂಕೇತ, ಭವಿಷ್ಯದಲ್ಲಿ ಭಾರೀ ಅನಾಹುತ ನಡೆಯಲಿದೆ ಎಂಬ ಚರ್ಚೆ ಆರಂಭವಾಗಿದೆ.

ಬೆಂಕಿ ಎಲ್ಲಿಗೆ ಹೊತ್ತಿಕೊಂಡಿತು?

ಬೆಂಕಿಯ ಹೊತ್ತಿಕೊಂಡ ಸ್ಥಳ ದೇವಾಲಯದ ಶಂಖದ್ವಾರ ಹಾಗೂ ಸಿಸಿಟಿವಿ ನಿಯಂತ್ರಣ ಕೊಠಡಿಯ ಮೇಲ್ಭಾಗವಾಗಿದೆ. ಈ ಭಾಗದಲ್ಲಿ ಸ್ಥಾಪಿಸಲಾಗಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಮೇಲ್ವಿಚಾರಣಾ ವ್ಯವಸ್ಥೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದೆ.

ತಕ್ಷಣದ ಕಾರ್ಯಚರಣೆ:

ಸುದ್ದಿ ತಿಳಿದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. 20 ನಿಮಿಷಗಳ ಕಾಲ ಸತತ  ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಮಹಾಕಾಲ್ ದೇವಾಲಯದ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ, ಎಸ್ಪಿ ಮತ್ತು ಪುರಸಭೆ ಆಯುಕ್ತರು ಎಲ್ಲರೂ ಕೂಡ ಸ್ಥಳಕ್ಕೆ ತಲುಪಿದರು.

ಯಾವುದೇ ಪ್ರಾಣಹಾನಿಯಿಲ್ಲ:

ಈ ಅವಘಡದಲ್ಲಿ ಯಾರಿಗೂ ಗಾಯವಾಗಿಲ್ಲ, ಅಥವಾ ಪ್ರಾಣಹಾನಿಯೂ ಸಂಭವಿಸಿಲ್ಲ. ಆದರೆ, ಭಾರೀ ಆಸ್ತಿಪಾಸ್ತಿಯ ನಾಶವಾಗಿದ್ದು, ದೇವಾಲಯದ ಕೆಲವು ವ್ಯವಸ್ಥೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಬೆಂಕಿಗೆ ಕಾರಣವೇನು?

ಆಧಿಕೃತ ಮಾಹಿತಿಯಂತೆ, ಸಿಸಿಟಿವಿ ನಿಯಂತ್ರಣ ಕೊಠಡಿಯ ಮೇಲ್ಭಾಗದಲ್ಲಿ ಬ್ಯಾಟರಿಗಳ ಸಂಗ್ರಹಣೆ ಇತ್ತು. ಈ ಬ್ಯಾಟರಿಗಳು ಹೆಚ್ಚು ಬಿಸಿಯಾಗಿದ್ದ ಕಾರಣ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಭಾಗದಲ್ಲಿದ್ದ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಕರಣಗಳು ಸಂಪೂರ್ಣವಾಗಿ ನಾಶವಾಗಿವೆ.  ಆದರೂ ಈ ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ದರ್ಶನ ತಾತ್ಕಾಲಿಕವಾಗಿ ಸ್ಥಗಿತ

ಬೆಂಕಿ ನಿಯಂತ್ರಣಕ್ಕೆ ಬಂದಿದ್ದರೂ, ದೇವಾಲಯದ ದರ್ಶನವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ದರ್ಶನ ಪ್ರಾರಂಭವಾಯಿತು. ಘಟನೆ ಸಮಯದಲ್ಲಿ ಯಾತ್ರಿಕರು, ಭಕ್ತರು ಭಯದಿಂದ ದೇವಾಲಯದ ಹೊರಗೆ ನಿಂತಿದ್ದರು.

ಉನ್ನತ ಅಧಿಕಾರಿಗಳ ಭೇಟಿ

ಘಟನೆಯ ತೀವ್ರತೆಗೆ ಗಮನ ಹರಿಸಿದ ಉಜ್ಜಯಿನಿ ಜಿಲ್ಲಾಧಿಕಾರಿ ರೋಷನ್ ಕುಮಾರ್, ಎಸ್ಪಿ ಪ್ರದೀಪ್ ಶರ್ಮಾ, ದೇವಾಲಯದ ಆಡಳಿತಾಧಿಕಾರಿ ಪ್ರಥಮ್ ಕೌಶಿಕ್ ಮತ್ತು ಪುರಸಭೆ ಆಯುಕ್ತ ಆಶಿಶ್ ಪಾಠಕ್ ಸ್ಥಳಕ್ಕೆ  ಬಂದು ಪರಿಸ್ಥಿತಿಯನ್ನು ಸಮೀಕ್ಷೆ ನಡೆಸಿದರು.

ಆಡಳಿತಾಧಿಕಾರಿಗಳ ಹೇಳಿಕೆ

"ನಿಯಂತ್ರಣ ಕೊಠಡಿಯ ಮೇಲ್ಭಾಗದಲ್ಲಿ ಬ್ಯಾಟರಿಗಳು ಸ್ಫೋಟಗೊಂಡು ಬೆಂಕಿಗೆ ಕಾರಣವಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬೆಂಕಿಯನ್ನು ಶೀಘ್ರ ನಿಯಂತ್ರಣಕ್ಕೆ ತರಲಾಗಿದೆ," ಎಂದು ಜಿಲ್ಲಾಧಿಕಾರಿ ರೋಶನ್ ಸಿಂಗ್ ತಿಳಿಸಿದ್ದಾರೆ.
 
ಪೂರಿ ಜಗನ್ನಾಥನ ಧ್ವಜದ ಬಳಿ ಕಂಡುಬಂದಿದ್ದ ಗರುಡ, 10 ದಿನದೊಳಗೆ ನಡೆದಿತ್ತು ಪಹಲ್ಗಾಮ್ ದಾಳಿ!

ಕಳೆದ ಎಪ್ರಿಲ್ 12ರಂದು ಒಡಿಶಾದ ಪ್ರಸಿದ್ಧ ಪೂರಿ ಜಗನ್ನಾಥ ದೇವಸ್ಥಾನದ ಕಳಶದ ಮೇಲೆ ಗರುಡ ಹಾರಾಡುತ್ತಿರುವುದು ಸೆರೆಯಾಗಿತ್ತು. ಮುಖ್ಯವಾಗಿ ಗರುಡ ತನ್ನ ಕಾಲುಗಳಲ್ಲಿ ಪೂರಿ ಜಗನ್ನಾಥ ದೇವಸ್ಥಾನದ ಮೇಲಿರುವ ಧ್ವಜದ ರೀತಿಯನ್ನೇ ಹೋಲು ಧ್ವಜವನ್ನು ಹಿಡಿದು ಹಾರಾಟ ಮಾಡಿರುವುದು ಅಚ್ಚರಿಗೆ ಕಾರಣವಾಗಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಊಹಾಪೋಹ ಹಾಗೂ ಆಧ್ಯಾತ್ಮಿಕ ಚರ್ಚೆ ನಡೆದಿತ್ತು. ಇದು ಅಪಶಕುನ, ಅನಾಹುತ ನಡೆಯಲಿದೆ ಎಂದು ಚರ್ಚೆ ನಡೆದಿತ್ತು. ಇದಾಗಿ 10 ದಿನದಲ್ಲಿ ಅಂದರೆ ಏ.22ರಂದು ಪಹಲ್ಗಾಮ್ ದಾಳಿ ನಡೆದಿತ್ತು. ಇದೀಗ ಪ್ರಸಿದ್ದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದಲ್ಲಿ ಬೆಂಕಿ ಅವಘಡದ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಭವಿಷ್ಯದಲ್ಲಿ ಗಂಡಾಂತರ ಕಾದಿದೆ ಎಂದು ಚರ್ಚೆ ಆರಂಭವಾಗಿದೆ.

ಪೂರಿ ಜಗನ್ನಾಥ ದೇವಾಲಯದ ನೀಲ ಚಕ್ರದ ಮೇಲೆ ಹಾರಿಸಲಾಗಿರುವ ಪವಿತ್ರ ಧ್ವಜವಾದ ಪತಿತಪಬನ್ ಬಣ್ಣವನ್ನು ಹೋಲುವ ಬಟ್ಟೆಯ ತುಂಡನ್ನು ಹಿಡಿದುಕೊಂಡು ದೇವಾಲಯದ ಆಕಾಶದಲ್ಲಿ ಸುತ್ತುತ್ತಿರುವ ಭವ್ಯ ಗರುಡ ಪಕ್ಷಿ ದೇವಾಲಯದ ಮೇಲೆ ಕೆಲವು ಸುತ್ತುಗಳನ್ನು ಸುತ್ತಿದ ನಂತರ ಸಮುದ್ರದ ಕಡೆಗೆ ಹಾರಿ ಕಣ್ಮರೆಯಾಯಿತು ಎಂದು ವರದಿಯಾಗಿದೆ. ಆದರೆ ದೇಗುಲ ಕಡೆಯಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ: ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು: ಎರಡೂ ಬಣಗಳಿಂದ ಘೋಷಣೆಗಳ ಸಮರ