ರಾಜ್ಯದಲ್ಲಿ ಮತ್ತೆ ತಬ್ಲೀಘಿ ಆತಂಕ: ನಿನ್ನೆ 18 ಮಂದಿಗೆ ಸೋಂಕು ದೃಢ!

By Kannadaprabha NewsFirst Published May 9, 2020, 8:54 AM IST
Highlights

ರಾಜ್ಯದಲ್ಲಿ ಮತ್ತೆ ತಬ್ಲೀಘಿ ಆತಂಕ| ನಿನ್ನೆ 18 ಮಂದಿಗೆ ಸೋಂಕು ದೃಢ| ಬೆಳಗಾವಿಯಲ್ಲಿ 11, ಚಿತ್ರದುರ್ಗದಲ್ಲಿ 3, ಬೆಂಗಳೂರಲ್ಲಿ 4 ಪ್ರಕರಣ

ಬೆಂಗಳೂರು(ಮೇ.09): ರಾಜ್ಯದಲ್ಲಿ ತಬ್ಲೀಘಿಗಳ ಆತಂಕ ಇನ್ನೂ ನಿಂತಿಲ್ಲ. ಚಿತ್ರದುರ್ಗ, ಬೆಳಗಾವಿ ಹಾಗೂ ಬೆಂಗಳೂರಲ್ಲಿ ಶುಕ್ರವಾರ ಒಂದೇ ದಿನ ತಬ್ಲೀಘಿಗಳು ಹಾಗೂ ಅವರೊಂದಿಗೆ ಪರೋಕ್ಷವಾಗಿ ಸಂಪರ್ಕ ಹೊಂದಿದ್ದ ಒಟ್ಟು 18 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಬೆಳಗಾವಿಯೊಂದರಲ್ಲೇ 11 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ ಚಿತ್ರದುರ್ಗದಲ್ಲಿ ಮೂರು, ಬೆಂಗಳೂರಲ್ಲಿ ನಾಲ್ಕು ಪ್ರಕರಣಗಳು ತಬ್ಲೀಘಿ ಸಂಬಂಧಿತ ಪ್ರಕರಣಗಳಾಗಿವೆ.

ರಾಜ್ಯದಲ್ಲಿ 11 ಜನರಿಂದ 354 ಮಂದಿಗೆ ವೈರಸ್‌!

ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಾಜ್ಯದಲ್ಲಿ 300ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಈ ಪೈಕಿ 96 ಜನ ಬೆಳಗಾವಿ ಜಿಲ್ಲೆಯವರೇ ಆಗಿದ್ದರು. ಇವರಲ್ಲಿ ಏ.3ರಂದು ಮೂವರಲ್ಲಿ ಕೊರೋನಾ ದೃಢಪಟ್ಟಿತು. ಈ ಪೈಕಿ ಹಿರೇಬಾಗೇವಾಡಿಯ 20 ವರ್ಷದ ವ್ಯಕ್ತಿ (ಪಿ.128), ಬೆಳಗುಂದಿಯ 26 ವರ್ಷದ (ಪಿ.127) ಮತ್ತು ಬೆಳಗಾವಿ ಕ್ಯಾಂಪ್‌ ಪ್ರದೇಶದ 70 ವರ್ಷದ (ಪಿ.126) ವ್ಯಕ್ತಿಗಳು ಇದ್ದರು. ಇದರಲ್ಲಿ ಹಿರೇಬಾಗೇವಾಡಿಯ ಪಿ.128 ರೋಗಿಗೆ ಸೋಂಕು ದೃಢಪಡುವ ಮೊದಲು ಪರಿಸ್ಥಿತಿ ಕೈಮೀರಿ ಹೋಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೇವಲ ಒಬ್ಬನಿಂದ ಪ್ರಥಮ ಮತ್ತು ದ್ವಿತೀಯ ಸಂಪರ್ಕದಿಂದಾಗಿ ಶುಕ್ರವಾರದ 11 ಪ್ರಕರಣಗಳು ಸೇರಿ ಹಿರೇಬಾಗೇವಾಡಿಯ 47 ಮಂದಿಗೆ ಕೊರೋನಾ ಹರಡಿದೆ.

ಬೆಂಗಳೂರಿನ ಶಿವಾಜಿನಗರದಲ್ಲಿ ನಾಲ್ಕು ಪ್ರಕರಣಗಳಿಗೂ ತಬ್ಲೀಘಿ ಲಿಂಕ್‌ ಇದೆ. ತಬ್ಲೀಘಿಗಳಿಗೆ ಚಿಕಿತ್ಸೆ ನೀಡಿದ್ದ ಶಿಫಾ ಆಸ್ಪತ್ರೆ ವೈದ್ಯನಿಂದ ಸ್ಟಾಫ್‌ ನರ್ಸ್‌ಗೆ ಈ ಹಿಂದೆ ಸೋಂಕು ದೃಢಪಟ್ಟಿತ್ತು. ಆ ಬಳಿಕ ಆಕೆಯಿಂದ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹೌಸ್‌ ಕೀಪಿಂಗ್‌ ವ್ಯಕ್ತಿಗೆ, ಆ ವ್ಯಕ್ತಿಯೊಂದಿಗೆ ಒಂದೇ ರೂಮಿನಲ್ಲಿದ್ದ 3 ಮಂದಿಗೆ ಈಗ ಸೋಂಕು ತಗುಲಿದೆ.

ಕೊರೋನಾ ವೈರಸ್‌ ಜತೆ ಬದುಕಲು ಕಲೀರಿ: ಕೇಂದ್ರ!

ಚಿತ್ರದುರ್ಗದಲ್ಲಿ ಮೇ 5ರಂದು ಗುಜರಾತ್‌ನಿಂದ ಆಗಮಿಸಿದ್ದ 15 ತಬ್ಲೀಘಿಗಳನ್ನು ತಪಾಸಣೆ ನಡೆಸಿದಾಗ ಅವರಲ್ಲಿ ಈಗ ಮೂವರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಗುಜರಾತ್‌ನಲ್ಲಿ ಸೋಂಕು ದೃಢಪಟ್ಟಿತ್ತು. ಆ ಬಳಿಕ ಅಲ್ಲೇ ಚಿಕಿತ್ಸೆ ಪಡೆದು ಗುಣಮುಖರೂ ಆಗಿದ್ದರು.

click me!