Farm Laws Repeal: ಹೋರಾಟ ಸದ್ಯಕ್ಕೆ ನಿಲ್ಲಲ್ಲ : ಪ್ರಧಾನಿ ಮೋದಿಗೆ ಕಿಸಾನ್‌ ಮೋರ್ಚಾ ಬಹಿರಂಗ ಪತ್ರ!

By Suvarna NewsFirst Published Nov 22, 2021, 7:58 AM IST
Highlights

*6 ಬೇಡಿಕೆ ಈಡೇರುವ ತನಕ ರೈತ ಹೋರಾಟ ನಿಲ್ಲಲ್ಲ
*ಪ್ರಧಾನಿ ಮೋದಿಗೆ ಕಿಸಾನ್‌ ಮೋರ್ಚಾ ಬಹಿರಂಗ ಪತ್ರ
*ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ಪರೇಡ್‌ ನಡೆಸಲು ನಿರ್ಧಾರ
*ಬೆಂಬಲ ಬೆಲೆ, ಮೃತ ರೈತರಿಗೆ ಪರಿಹಾರ, ಕೇಸು ರದ್ದತಿಗೆ ಪಟ್ಟು
*ಮಿಶ್ರಾ ವಜಾ, ವಿದ್ಯುತ್‌ ಕಾಯ್ದೆ ರದ್ದು, ಬೆಳೆ ಸುಡುವಿಕೆ ಕೇಸು ರದ್ದತಿಗೂ ಆಗ್ರಹ
*ಕಿಸಾನ್‌ ಪಂಚಾಯತ್‌, ಪ್ರತಿಭಟನೆ ವರ್ಷಾಚರಣೆಗೆ ತೀರ್ಮಾನ
 

ನವದೆಹಲಿ(ನ.22): ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದು (Farm Laws Repeal) ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ (Narendar Modi) ಘೋಷಿಸಿದ್ದಾರಾದರೂ ಸದ್ಯದ ಮಟ್ಟಿಗೆ ಹೋರಾಟ ನಿಲ್ಲಿಸದೇ ಇರಲು ಸಂಯುಕ್ತ ಕಿಸಾನ್‌ ಮೋರ್ಚಾ (Samyukt Kisan Morcha) ನಿರ್ಧರಿಸಿದೆ. ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿರುವ ಮೋರ್ಚಾ, 6 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು, ‘ಈ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳುವ ಪ್ರಶ್ನೆಯೇ ಇಲ್ಲ’ಎಂದು ಸ್ಪಷ್ಟಪಡಿಸಿದೆ. ಈ ನಡುವೆ, ಪರಿಸ್ಥಿತಿ ಆಧರಿಸಿ ಮುಂದಿನ ನಿರ್ಣಯ ಕೈಗೊಳ್ಳಲು ನ.27ರಂದು ಮತ್ತೊಂದು ಸಭೆ ಕರೆಯಲೂ ಅದು ತೀರ್ಮಾನಿಸಿದೆ. ಆದರೆ ಸೋಮವಾರದ ಲಖನೌ ಕಿಸಾನ್‌ ಮಹಾಪಂಚಾಯತ್‌ (lucknow kisan mahapanchayaţ) 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ಪರೇಡ್‌ (Tractor Parade) ಯಥಾಪ್ರಕಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ರ‍್ಯಾಲಿ!

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್‌ ಮೋರ್ಚಾ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ್‌, ‘ಮೋದಿ ಅವರು ರೈತ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ ಇದಕ್ಕೆ ಸಂಸತ್ತು (Parliament) ಅಂತಿಮ ಮುದ್ರೆ ಒತ್ತಬೇಕು’ ಎಂದು ಆಗ್ರಹಿಸಿದರು. ‘ಈ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ತಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಸೋಮವಾರದ ಲಖನೌ ಕಿಸಾನ್‌ ಮಹಾಪಂಚಾಯತ್‌ (Lucknow Kisan Mahapanchayat), 26ರಂದು ದಿಲ್ಲಿ ಗಡಿಗಳಲ್ಲಿ ರೈತ ಹೋರಾಟ ವಾರ್ಷಿಕೋತ್ಸವ ಹಾಗೂ ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ರ‍್ಯಾಲಿ (Tractor Rally) ಯಥಾಪ್ರಕಾರ ನಡೆಸಲು ನಿರ್ಧಾರ’ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮೀಕ್ಷೇ!

ಆದರೆ ‘ನ.27ರಂದು ಇನ್ನೊಂದು ಸಭೆ ನಡೆಯಲಿದೆ. ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಸ್ಪಷ್ಟಪಡಿಸಿದರು. ‘ಇನ್ನು ಕನಿಷ್ಠ ಬೆಂಬಲ ಬೆಲೆ (MSP) ನಿಗದಿಗೆ ಕಾಯ್ದೆ ಸಿದ್ಧಪಡಿಸಬೇಕು. ನೀರಾವರಿ ರೈತರಿಗೆ ಭಾರ ಆಗಿರುವ ವಿದ್ಯುತ್‌ ಕಾಯ್ದೆ-2020ನ್ನು ವಾಪಸು ಪಡೆಯಬೇಕು ಹಾಗೂ ರೈತರ ಮೇಲೆ ದೌರ್ಜನ್ಯ ಎಸಗಿದೆ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು’ ಎಂದೂ ರಾಜೇವಲ್‌ ಹೇಳಿದರು.

ಬುಧವಾರ ಕೃಷಿ ಕಾಯ್ದೆ ರದ್ದತಿಗೆ ಸಂಪುಟ ಅಸ್ತು!

ಶುಕ್ರವಾರ ಗುರುನಾನಕ್‌ ಜಯಂತಿಯ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ ಎಂದಿದ್ದರು. ‘ಇದರ ಔಪಚಾರಿಕ ಪ್ರಕ್ರಿಯೆಗಳು ಬುಧವಾರ ಆರಂಭವಾಗುವ ಸಾಧ್ಯತೆ ಇದೆ. ಅಂದು ಸಂಪುಟ ಸಭೆಯಲ್ಲಿ ಮೋದಿ ಘೋಷಣೆಗೆ ಮೊಹರು ಒತ್ತಲಾಗುವುದು. ನಂತರ, ಕಾಯ್ದೆ ರದ್ದು ಮಾಡುವ ಮಸೂದೆಗಳನ್ನು ನ.29ರಂದು ಆರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ವಿವಾದಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸಾವಿರಾರು ರೈತರು ಸುಮಾರು 1 ವರ್ಷದಿಂದ ದಿಲ್ಲಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

6 ಬೇಡಿಕೆಗಳು

1.ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಿ.

2. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ನಿಲ್ಲಿಸುವ ಮಸೂದೆ ಹಿಂಪಡೆಯಿರಿ

3. ಬೆಳೆ ತ್ಯಾಜ್ಯ ಸುಡುವ ರೈತರ ಮೇಲೆ ಕೇಸು ಹಾಕಬಾರದು

4. ಕೃಷಿ ಕಾಯ್ದೆ ಹೋರಾಟದಲ್ಲಿದ್ದ ಎಲ್ಲ ರೈತರ ಮೇಲಿನ ಕೇಸು ಹಿಂಪಡೆಯಿರಿ

5. ಪ್ರತಿಭಟನೆ ವೇಳೆ ಹುತಾತ್ಮರಾದ 700ಕ್ಕೂ ಹೆಚ್ಚು ರೈತರ ಕುಟುಂಬಕ್ಕೆ ಪರಿಹಾರ ನೀಡಿ

6. ಲಖೀಂಪುರ ಖೇರಿ ಹಿಂಸೆ ಆರೋಪಿ ಸಚಿವ ಅಜಯ್‌ ಮಿಶ್ರಾ ವಜಾ ಮಾಡಿ, ಬಂಧಿಸಿ.

click me!