
ನವದೆಹಲಿ (ಫೆ.17): ದೆಹಲಿ ಚಲೋಗೆ ಕರೆಕೊಟ್ಟಿರುವ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಗುರುವಾರ ನಡೆದ ಮೂರನೇ ಸುತ್ತಿನ ಮಾತುಕತೆ ಧನಾತ್ಮಕವಾಗಿ ಅಂತ್ಯಗೊಂಡಿದ್ದರೂ, ಅಪೂರ್ಣವಾಗಿದೆ. ಹೀಗಾಗಿ ಭಾನುವಾರ ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಉಭಯ ಬಣಗಳು ಸಮ್ಮತಿಸಿವೆ. ಇದರಿಂದಾಗಿ ಸಂಘರ್ಷಕ್ಕೆ ಶೀಘ್ರ ಕೊನೆ ಬೀಳಬಹುದೆಂಬ ಆಶಾಭಾವನೆ ಮೂಡಿದೆ.
ಈ ಹಿನ್ನೆಲೆಯಲ್ಲಿ ದಿಲ್ಲಿಯತ್ತ ಸಾಗದೇ ಸದ್ಯ ತಮ್ಮ ಪ್ರತಿಭಟನೆಯನ್ನು ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲೇ ಮುಂದುವರೆಸಲು ಮತ್ತು ದೆಹಲಿಯತ್ತ ತೆರಳುವ ಯತ್ನವನ್ನು ಮಾಡದೇ ಇರಲು ರೈತ ಸಂಘಟನೆಗಳು ನಿರ್ಧರಿಸಿವೆ. ಇದರ ನಡುವೆ ಶಂಭು ಗಡಿಯಲ್ಲಿ ರೈತರು ಹಾಗೂ ಹರ್ಯಾಣ ಪೊಲೀಸರ ನಡುವೆ ಶುಕ್ರವಾರ ಮಧ್ಯಾಹ್ನ ಜಟಾಪಟಿ ನಡೆದಿದ್ದು, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ರೈತರು ಮತ್ತು ಕೇಂದ್ರದ ಮೂರು ಸಚಿವರ ತಂಡದ ನಡುವೆ ಫೆ.8ರಂದು ಮೊದಲ ಸುತ್ತು ಮತ್ತು ಫೆ.12ರಂದು ಎರಡನೇ ಸುತ್ತಿನ ಮಾತುಕತೆ ನಡೆದಿತ್ತಾದರೂ ಅದು ವಿಫಲವಾಗಿತ್ತು. ಹೀಗಾಗಿ ಗುರುವಾರ ತಡರಾತ್ರಿವರೆಗೂ ಉಭಯ ಬಣಗಳು ಮುರನೇ ಸುತ್ತಿನ ಮಾತುಕತೆ ನಡೆಸಿವೆ. 5 ಗಂಟೆಗಳ ಕಾಲ ನಡೆದ ಮಾತುಕತೆ ಧನಾತ್ಮಕವಾಗಿ ಮುಕ್ತಾಯಗೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾತುಕತೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಅರ್ಜುನ್ ಮುಂಡಾ, ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆದಿದೆ. ಚರ್ಚೆ ಧನಾತ್ಮಕವಾಗಿತ್ತು. ಭಾನುವಾರ ಸಂಜೆ 6 ಗಂಟೆಗೆ ನಾವು ಮತ್ತೊಮ್ಮೆ ಒಂದಾಗಿ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ ಮಾತುಕತೆ ಕುರಿತು ಪ್ರತಿಕ್ರಿಯಿಸಿರುವ ರೈತ ನಾಯಕ ಸರವಣ್ ಸಿಂಗ್ ಪಂಧೇರ್, ‘ ಬೆಳೆಗಳಿಗೆ ಬೆಲೆ ಖಾತ್ರಿಗೆ ಕಾನೂನಿನ ಬದ್ಧತೆ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ. ಆದರೆ ಬೆಲೆ ಖಾತ್ರಿ ವಿಷಯದಲ್ಲಿ ನಮಗೆ ಇನ್ನಷ್ಟು ಸಮಯ ಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಮಾತುಕತೆ ಫಲಪ್ರದವಾಗಬೇಕು ಮತ್ತು ಸಂಘರ್ಷ ನಿಲ್ಲಬೇಕು ಎಂಬುದು ನಮ್ಮ ನಿಲುವು. ಇಲ್ಲದೇ ಹೋದಲ್ಲಿ ದೆಹಲಿ ಚಲೋ ನಡೆಸುವ ನಿರ್ಧಾರಕ್ಕೆ ನಾವು ಬದ್ಧರಾಗಿರಲಿದ್ದೇವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಗಡಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್, ರೈತರ ಮೇಲೆ ಅಶ್ರುವಾಯು ಸಿಡಿತದ ಘಟನೆಗಳ ಬಗ್ಗೆ ಸಂಘಟನೆಗಳು ಸಭೆಯಲ್ಲಿ ಕೇಂದ್ರದ ಗಮನ ಸೆಳೆದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ