
ಮುಂಬೈ (ಜೂ.18): ಕೊರೋನಾ 2ನೇ ಅಲೆಯ ವೇಳೆ ದೇಶದಲ್ಲೇ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದ ಮಹಾರಾಷ್ಟ್ರಕ್ಕೆ ಮುಂದಿನ 2ರಿಂದ 4 ವಾರದಲ್ಲಿ 3ನೇ ಅಲೆ ಅಪ್ಪಳಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅದರಿಂದಾಗಿ ಈಗಷ್ಟೇ 2ನೇ ಅಲೆ ಇಳಿಕೆಯಾಗುತ್ತಿದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಹಾರಾಷ್ಟ್ರಕ್ಕೆ ಮತ್ತೆ ಆತಂಕ ಎದುರಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, 3ನೇ ಅಲೆಯು 2ನೇ ಅಲೆಗಿಂತ ತೀವ್ರವಾಗಿರಲಿದೆ ಮತ್ತು ಈ ಅಲೆಯಲ್ಲಿ ಕೆಳ ಮಧ್ಯಮ ವರ್ಗದವರು ಹೆಚ್ಚು ನಷ್ಟಅನುಭವಿಸಲಿದ್ದಾರೆ ಎಂದು ತಜ್ಞರ ಸಮಿತಿ ಹೇಳಿದೆ.
2ನೇ ಹಂತದ ಅನ್ ಲಾಕ್ಗೆ ಸಿದ್ಧತೆ, ಯಾವುದಕ್ಕೆಲ್ಲ ವಿನಾಯಿತಿ? ..
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡೆಸಿದ ಸಭೆಯಲ್ಲಿ ರಾಜ್ಯ ಕೊರೋನಾ ಕಾರ್ಯಪಡೆಯ ತಜ್ಞರು ಈ ಕುರಿತು ವರದಿ ಮಂಡಿಸಿದ್ದಾರೆ. ಅದರಲ್ಲಿ ರಾಜ್ಯಕ್ಕೆ 2ರಿಂದ 4 ವಾರದಲ್ಲಿ 3ನೇ ಅಲೆ ಬರಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಧಾನಕರ ಸಂಗತಿಯೆಂದರೆ, ಈ ಹಿಂದೆ ನಿರೀಕ್ಷಿಸಿದ್ದಂತೆ 3ನೇ ಅಲೆಯು ಮಕ್ಕಳಿಗೆ ಮಾರಕವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ, 3ನೇ ಅಲೆ ಗರಿಷ್ಠಕ್ಕೆ ತಲುಪಿದಾಗ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಏರಬಹುದು. 3ನೇ ಅಲೆ ಸುಮಾರು 100 ದಿನಗಳ ಕಾಲ ರಾಜ್ಯವನ್ನು ಬಾಧಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಗರಿಷ್ಠ 3 ಲಕ್ಷ ಸಕ್ರಿಯ ಪ್ರಕರಣಗಳು, 2ನೇ ಅಲೆಯಲ್ಲಿ 7 ಲಕ್ಷ ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿದ್ದವು. 3ನೇ ಅಲೆಯಲ್ಲಿ ಆ ಸಂಖ್ಯೆ 8 ಲಕ್ಷಕ್ಕೆ ಏರಿಕೆಯಾಗಬಹುದು. 3ನೇ ಅಲೆಯಲ್ಲಿ ಶೇ.10ರಷ್ಟುಪ್ರಕರಣಗಳು ಮಕ್ಕಳು ಹಾಗೂ ಯುವಜನರಲ್ಲಿ ಕಂಡುಬರಬಹುದು. ಬ್ರಿಟನ್ನಿನಲ್ಲಿ 2ನೇ ಅಲೆ ಇಳಿಕೆಯಾದ ನಂತರ ಕೇವಲ 4 ವಾರಗಳಲ್ಲಿ 3ನೇ ಅಲೆ ಕಾಣಿಸಿಕೊಂಡಂತೆ ನಮ್ಮ ರಾಜ್ಯದಲ್ಲೂ ಆಗಬಹುದು. 1 ಮತ್ತು 2ನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿಲ್ಲದ ಕೆಳ ಮಧ್ಯಮ ವರ್ಗದವರೇ ಈ ಬಾರಿ ಹೆಚ್ಚು ಬಾಧಿತರಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ 2ನೇ ಅಲೆ ತಡೆಯಲು ಜಾರಿಗೊಳಿಸಿದ್ದ ಲಾಕ್ಡೌನನ್ನು ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ 5 ಹಂತಗಳಲ್ಲಿ ಬಹಳ ಎಚ್ಚರಿಕೆಯಿಂದ ಅನ್ಲಾಕ್ ಮಾಡಲಾಗಿದೆ. ಆದರೂ 3ನೇ ಅಲೆ ಈಗಲೇ ಬರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದು ತರಾತುರಿಯಲ್ಲಿ 2ನೇ ಅಲೆಯ ಕೊನೆಯಲ್ಲಿ ಅನ್ಲಾಕ್ ಮಾಡಿದ ಇತರ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆಯಿದ್ದಂತೆ ಎಂದು ಹೇಳಲಾಗುತ್ತಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ