
ನವದೆಹಲಿ (ಅ.10): ‘ಹರ್ಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ವೇಳೆ 20 ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ವ್ಯತ್ಯಾಸ ಕಂಡುಬಂದಿದ್ದು, ಅವು ಹ್ಯಾಕ್ ಆಗಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಹಾಗೂ ಶಂಕಾಸ್ಪದ ಇವಿಎಂಗಳನ್ನು ಸೀಲ್ ಮಾಡಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಅಜಯ್ ಮಾಕನ್, ಉದಯ ಭಾನ್ ಮತ್ತು ಪವನ್ ಖೇರಾ ಅವರನ್ನು ಒಳಗೊಂಡ ಕಾಂಗ್ರೆಸ್ ಉನ್ನತ ನಾಯಕರ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿತು. ಇದನ್ನು ಸ್ವೀಕರಿಸಿದ ಆಯೋಗ, ‘ಪರಿಶೀಲಿಸುತ್ತೇವೆ’ ಎಂದು ಭರವಸೆ ನೀಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್ ಸಂಚು: ಪ್ರಧಾನಿ ಮೋದಿ
‘20 ಕ್ಷೇತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಪೈಕಿ 7 ಕ್ಷೇತ್ರಗಳ ದೂರನ್ನು ಅಧಿಕೃತವಾಗಿ ನೀಡಿದ್ದು, ಇನ್ನು 13 ಕ್ಷೇತ್ರಗಳ ದೂರನ್ನು 48 ತಾಸಲ್ಲಿ ನೀಡುತ್ತೇವೆ. ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿನ ಇವಿಎಂ ಬ್ಯಾಟರಿ ಸಾಮರ್ಥ್ಯ ಶೇ.99 ಇತ್ತು. ಕಾಂಗ್ರೆಸ್ ಗೆದ್ದ ಕ್ಷೇತ್ರಗಳಲ್ಲಿನ ಇವಿಎಂ ಬ್ಯಾಟರಿ ಸಾಮರ್ಥ್ಯ ಶೇ.60ರಿಂದ 70 ಇತ್ತು. ಹೇಗೆ ಕಾಂಗ್ರೆಸ್ ಹಾಗೂ ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಈ ರೀತಿ ಒಂದೇ ತೆರನಾದ ವ್ಯತ್ಯಾಸ ಆಗುತ್ತದೆ? ಇದು ಹ್ಯಾಕಿಂಗ್ ಶಂಕೆ ಮೂಡಿಸಿದೆ. ಈ ಬಗ್ಗೆ ಶಂಕಾಸ್ಪದ ಇವಿಎಂ ಸೀಜ್ ಮಾಡಿ ತನಿಖೆ ಮಾಡಬೇಕು’ ಎಂದು ನಿಯೋಗ ಒತ್ತಾಯಿಸಿದೆ. ಆದರೆ ಮಂಗಳವಾರ ಇಂಥದ್ದೇ ಒಂದು ಆರೋಪಕ್ಕೆ ಚುಣಾವಣಾ ಆಯೋಗ ಪ್ರತಿಕ್ರಿಯಿಸಿ, ‘ಇವಿಎಂ ಬ್ಯಾಟರಿಗೂ ಮತ ಎಣಿಕೆಗೂ ಸಂಬಂಧ ಇರುವುದಿಲ್ಲ’ ಎಂದಿತ್ತು.
ಕಾಂಗ್ರೆಸ್ ಮೇಲೆ ಚು.ಆಯೋಗ ಗರಂ: ಹರ್ಯಾಣ ಫಲಿತಾಂಶ ಸ್ವೀಕಾರಾರ್ಹವಲ್ಲ. ಇದರಲ್ಲಿ ಏನೋ ಸಂಚು ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಭಾರತದ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಇಂಥ ಘಟನೆ ಕಂಡುಕೇಳರಿಯದ್ದು ಮತ್ತು ನ್ಯಾಯಬದ್ಧ ವಾಕ್ ಸ್ವಾತಂತ್ರ್ಯಕ್ಕಿಂತ ಅತ್ಯಂತ ದೂರವಾಗಿರುವ ಸಂಗತಿ’ ಎಂದು ಹೇಳಿದೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ.
‘ಕಾಂಗ್ರೆಸ್ನ ಹಿರಿಯ ನಾಯಕರಾದ ಜೈರಾಂ ರಮೇಶ್ ಮತ್ತು ಪವನ್ ಖೇರಾ ಹರ್ಯಾಣ ಚುನಾವಣೆ ಫಲಿತಾಂಶ ಕುರಿತು ನೀಡಿರುವ ಹೇಳಿಕೆಗಳು ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಇದೇ ಮೊದಲು. ಜೊತೆಗೆ ಶಾಸನಾತ್ಮಕ ಹಾಗೂ ಚುನಾವಣಾ ಚೌಕಟ್ಟಿನಲ್ಲಿ ಜನತೆ ನೀಡಿರುವ ಅಭಿಪ್ರಾಯವನ್ನು ಪ್ರಜಾಸತಾತ್ಮಕವಲ್ಲದ ರೀತಿಯಲ್ಲಿ ತಿರಸ್ಕರಿಸುವಂತಿದೆ’ ಎಂದು ಹೇಳಿದೆ. ಜೊತೆಗೆ, ‘ಹರ್ಯಾಣ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶವನ್ನು ಪಕ್ಷ ವಿಶ್ಲೇಷಿಸಲು ಬಯಸುತ್ತದೆ ಮತ್ತು ಈ ಬಗ್ಗೆ ಆಯೋಗಕ್ಕೆ ದೂರು ನೀಡುತ್ತೇವೆ’ ಎಂಬ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನೂ ನಾವು ಗಮನಿಸಿದ್ದೇವೆ. ಹೀಗಾಗಿ ಅವರ ಆರೋಪವನ್ನು ಅಧಿಕೃತ ಎಂದು ಮನ್ನಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ದೂರಲು ಅವಕಾಶ ನೀಡಿದ್ದೇವೆ’ ಎಂದು ಆಯೋಗ ಹೇಳಿದೆ.
ಸಾವಿರಾರು ಕೋಟಿ ಉದ್ಯಮ ಕಟ್ಟಿದ್ದರೂ 4 ಬಾರಿ ಮದುವೆ ಚಾನ್ಸ್ ಮಿಸ್ ಮಾಡಿಕೊಂಡಿದ್ದ ರತನ್ ಟಾಟಾ!
ಕಾಂಗ್ರೆಸ್ ಆರೋಪ ಏನು: ಮಂಗಳವಾರ ಹರ್ಯಾಣ ಫಲಿತಾಂಶ ಪ್ರಕಟವಾಗುತ್ತಲೇ ಸುದ್ದಿಗೋಷ್ಠಿ ನಡೆಸಿದ್ದ ಜೈರಾಂ ರಮೇಶ್, ಪವನ್ ಖೇರಾ, ‘ಹರ್ಯಾಣ ಫಲಿತಾಂಶವು, ತಿರುಚುವಿಕೆಗೆ ಮತ್ತು ಜನಾಭಿಪ್ರಾಯ ಬುಡಮೇಲಿಗೆ ಸಿಕ್ಕ ಜಯವಾಗಿದೆ. ಜೊತೆಗೆ ಇದು ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಆದ ಸೋಲು’ ಮತ ಎಣಿಕೆ ಪ್ರಕ್ರಿಯೆ ಮತ್ತು 14 ವಿಧಾನಸಭಾ ಕ್ಷೇತ್ರಗಳಲ್ಲಿನ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ಗಳ ಕಾರ್ಯನಿರ್ವಹಣೆಯಲ್ಲಿ ಗಂಭೀರ ಲೋಪಗಳಿವೆ. ಹರ್ಯಾಣ ಫಲಿತಾಂಶ ಸಂಪೂರ್ಣ ಅನಿರೀಕ್ಷಿತ ಮತ್ತು ಅಚ್ಚರಿಯದ್ದಾಗಿದೆ. ಇದು ವಾಸ್ತವ ಮತ್ತು ಬದಲಾವಣೆ ಬಯಸಿದ್ದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ನಮ್ಮಿಂದ ಗೆಲುವು ಕಿತ್ತುಕೊಳ್ಳಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಫಲಿತಾಂಶ ಒಪ್ಪುವುದು ನಮಗೆ ಸಾಧ್ಯವಿಲ್ಲ. ಫಲಿತಾಂಶದ ಕುರಿತು ನಮ್ಮ ಹಲವು ಅಭ್ಯರ್ಥಿಗಳು ಹಲವು ಗಂಭೀರ ವಿಷಯಗಳನ್ನು ಮುಂದಿಟ್ಟಿದ್ದಾರೆ. ಈ ವಿಷಯವನ್ನು ನಾವು ಕೇಂದ್ರ ಚುನಾವಣಾ ಆಯೋಗದ ಮುಂದಿಡಲಿದ್ದೇವೆ’ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ