
ಕೊಲ್ಹಾಪುರ: ಗುಜರಾತ್ನ ಜಾಮ್ನಗರದಲ್ಲಿರುವ ಅಂಬಾನಿ ಸಮೂಹದ ‘ವಂತಾರಾ’ (Vantara) ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ವೈದ್ಯಕೀಯ ಆರೈಕೆ ಮತ್ತು ಪುನರ್ವಸತಿ ಪಡೆದ 'ಮಾಧುರಿ' (ಸ್ಥಳೀಯವಾಗಿ 'ಮಹಾದೇವಿ' ಎಂದೂ ಕರೆಯಲ್ಪಡುವ) ಆನೆ, ಅಂತಿಮವಾಗಿ ತನ್ನ ಮೂಲ ನಿವಾಸವಾದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮರಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆ ಹಾಗೂ ಚಲನಶೀಲತೆಯ ಸವಾಲುಗಳನ್ನು ಎದುರಿಸುತ್ತಿದ್ದ ಮಾಧುರಿ, ಈಗ ಚೇತರಿಸಿಕೊಂಡು ಕೊಲ್ಹಾಪುರಕ್ಕೆ ಮರಳುತ್ತಿರುವುದು ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಜುಲೈ 30, 2023 ರಂದು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿಯ (HPC) ನಿರ್ದೇಶನದಂತೆ ಮಾಧುರಿಯನ್ನು ವಂತಾರಾಕ್ಕೆ ಕರೆತರಲಾಗಿತ್ತು. ವರ್ಷಗಳ ಕಾಲ ಗಟ್ಟಿಯಾದ ಕಾಂಕ್ರೀಟ್ ಮೇಲ್ಮೈಯಲ್ಲಿ ಕಟ್ಟಿಹಾಕಿದ್ದು, ಸರಪಳಿಗಳಿಂದ ನಿರ್ಬಂಧಿತ ಚಲನೆ, ಬಿಸಿ ಡಾಂಬರು ರಸ್ತೆಗಳಲ್ಲಿ ದೂರದವರೆಗೆ ನಡೆಸುವುದು ಹಾಗೂ ಹಬ್ಬ-ಹರಿದಿನಗಳ ಮೆರವಣಿಗೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದರಿಂದ ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ವಂಟಾರಾಕ್ಕೆ ಬಂದಾಗ ಆಕೆ ತೀವ್ರ ಸ್ವರೂಪದ ಸಂಧಿವಾತ (Arthritis), ದೀರ್ಘಕಾಲದ ಪಾದದ ಕೊಳೆತ (Foot Rot) ಮತ್ತು ತೀವ್ರ ಚಲನಶೀಲತೆಯ ಸಮಸ್ಯೆಗಳಿಂದ ಬಳಲುತ್ತಿದ್ದಳು.
ಅನಂತ್ ಅಂಬಾನಿ ಅವರ ಮಾರ್ಗದರ್ಶನದಲ್ಲಿ ವಂತಾರಾದ ಪಶುವೈದ್ಯರು, ಆರೈಕೆದಾರರು, ಪೌಷ್ಟಿಕತಜ್ಞರು ಹಾಗೂ ನಡವಳಿಕೆಯ ತಜ್ಞರ ತಂಡವು ಮಾಧುರಿಗೆ ತೀವ್ರ ಪುನರ್ವಸತಿ ಕಾರ್ಯಕ್ರಮವನ್ನು ರೂಪಿಸಿತು.
ದೈಹಿಕ ಚಿಕಿತ್ಸೆ: ಜಲಚಿಕಿತ್ಸೆ (Hydrotherapy), ಲೇಸರ್ ಥೆರಪಿ, ವಿಶೇಷ ಪಾದದ ಆರೈಕೆ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಚಲನಶೀಲತೆಯನ್ನು ಸುಧಾರಿಸಲಾಯಿತು.
ಭಾವನಾತ್ಮಕ ಪುನರ್ವಸತಿ: ಸುರಕ್ಷಿತ ವಾತಾವರಣದಲ್ಲಿ ಇತರ ಆನೆಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಿದ್ದರಿಂದ, ವರ್ಷಗಳ ಬಂಧನದಿಂದ ಉಂಟಾಗಿದ್ದ ಮಾನಸಿಕ ಒತ್ತಡ ಕಡಿಮೆಯಾಗಿ ಭದ್ರತೆಯ ಪ್ರಜ್ಞೆ ಮೂಡಿತು.
ಮಾಧುರಿಯ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆಯನ್ನು ಪರಿಶೀಲಿಸಿದ ಉನ್ನತಾಧಿಕಾರ ಸಮಿತಿಯು (HPC) ಸೆಪ್ಟೆಂಬರ್ 9 ರಂದು ಕೊಲ್ಹಾಪುರಕ್ಕೆ ವರ್ಗಾಯಿಸಲು ಅಗತ್ಯವಾದ ಸಾರಿಗೆ ಪರವಾನಗಿಗಳನ್ನು ನೀಡಿದೆ. ಕೊಲ್ಹಾಪುರದ ನಂದನಿಯಲ್ಲಿರುವ ಸೌಲಭ್ಯವನ್ನು ಪರಿಶೀಲಿಸಿದ ನಂತರವೇ ಈ ಅನುಮತಿ ನೀಡಲಾಗಿದ್ದು, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ.
ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದ ಕೊಲ್ಹಾಪುರದ ನಂದನಿ ಮಠಕ್ಕೆ ಮಾಧುರಿಯನ್ನು ಪಶುವೈದ್ಯಕೀಯ ತಂಡದೊಂದಿಗೆ ವಿಶೇಷವಾಗಿ ಸುಸಜ್ಜಿತವಾದ 'ಆನೆ ಆಂಬ್ಯುಲೆನ್ಸ್'ನಲ್ಲಿ ಕರೆತರಲಾಗುತ್ತಿದೆ. ನಂದನಿಯ ಆವರಣದಲ್ಲಿ ಅಗತ್ಯ ಮೂಲಸೌಕರ್ಯ, ವೈದ್ಯಕೀಯ ಉಪಕರಣ ಹಾಗೂ ಔಷಧಿಗಳ ವ್ಯವಸ್ಥೆ ಮಾಡಲು ವಂತಾರಾ ನೆರವಾಗಿದೆ. ಪ್ರಸ್ತುತ ಟೌನ್ ಪ್ಲಾನಿಂಗ್ ನಿಯಮಗಳಿಂದಾಗಿ ಮಠದ ಆವರಣದ ದೊಡ್ಡ ಮಟ್ಟದ ನವೀಕರಣಕ್ಕೆ ತಡೆಯಿದೆಯಾದರೂ, ಲಭ್ಯವಿರುವ ಜಾಗದಲ್ಲೇ ಉತ್ತಮ ವಾತಾವರಣ ನಿರ್ಮಿಸಲಾಗಿದೆ.
ವಂತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ಭೇಟಿ ನೀಡಿ ಮಾಧುರಿಯನ್ನು ತಪಾಸಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.
"ಮಾಧುರಿಯ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ. ಆಕೆಯ ಆರೋಗ್ಯ, ಕಲ್ಯಾಣ ಮತ್ತು ಘನತೆಗೆ ನಮ್ಮ ಬದ್ಧತೆ ಎಂದಿಗೂ ಮುಂದುವರಿಯುತ್ತದೆ," ಎಂದು ವಂತಾರಾ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ