5 States Assembly Election: ಚುನಾವಣಾ ಆಯೋಗದಿಂದ ಇಂದು ದಿನಾಂಕ ಪ್ರಕಟ!

Suvarna News   | Asianet News
Published : Jan 08, 2022, 12:58 PM ISTUpdated : Jan 08, 2022, 03:28 PM IST
5 States Assembly Election: ಚುನಾವಣಾ ಆಯೋಗದಿಂದ ಇಂದು ದಿನಾಂಕ ಪ್ರಕಟ!

ಸಾರಾಂಶ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಇಂದು ಮಧ್ಯಾಹ್ನ 3.30ಕ್ಕೆ ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ ಕುತೂಹಲದ ಕಣ್ಣುಗಳಲ್ಲಿ ನೋಡುತ್ತಿವೆ ರಾಜಕೀಯ ಪಕ್ಷಗಳು  

ನವದೆಹಲಿ (ಜ. 8): ಹೊಸ ವರ್ಷ, ಕರೋನಾ ಸಂಕಷ್ಟ ಇವೆಲ್ಲದರ ನಡುವೆ ತೀವ್ರವಾಗಿ ಕುತೂಹಲ ಕೆರಳಿಸಿರುವುದು ಮುಂಬರುವ ಪಂಚ ರಾಜ್ಯಗಳ ಚುನಾವಣೆ (5 States Assembly Election). ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ನಿಭಾಯಿಸುವ ಉತ್ತರ ಪ್ರದೇಶದೊಂದಿಗೆ (Uttar Pradesh)ಇತರ ನಾಲ್ಕು ರಾಜ್ಯಗಳಾದ ಪಂಜಾಬ್ (Punjab ), ಉತ್ತಾರಖಂಡ (Uttarakhand ), ಮಣಿಪುರ (Manipur ) ಹಾಗೂ ದಕ್ಷಿಣದ ಗೋವಾದ (Goa) ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ (Election Commission) ಇಂದು ಪ್ರಕಟ ಮಾಡಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದ ಸುದ್ದಿಗೋಷ್ಠಿ ನಡೆಯಲಿದ್ದು, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Chief Election Commissioner Sushil Chandra) ದಿನಾಂಕಗಳನ್ನು ಪ್ರಕಟ ಮಾಡಲಿದ್ದಾರೆ.

ದೇಶಾದ್ಯಂತ ಕೋವಿಡ್ (Covid) ಪ್ರಕರಣಗಳ ಭಾರೀ ಏರಿಕೆಯ ಮಧ್ಯೆ ಎಲ್ಲಾ ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿರುವುದು ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಒಟ್ಟಾರೆ ಚುನಾವಣೆ ಹಾಗೂ ರಾಜಕೀಯ ಸಮಾವೇಶಗಳಿಗೆ ಕಟ್ಟುನಿಟ್ಟಿನ ನಿಯಮಗಳ ಘೋಷಣೆಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 1.41 ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನಕ್ಕಿಂತ ಶೇ. 21ರಷ್ಟು ಹೆಚ್ಚಾಗಿದೆ. ಫೆಬ್ರವರಿ-ಮಾರ್ಚ್ ವೇಳೆಗೆ ಮೂರನೇ ಅಲೆ ಆಂತಕ ಇರುವುದರಿಂದಿ ಅದರ ಮುನ್ನೆಚ್ಚರಿಕೆಯಲ್ಲಿ ಕ್ರಮಗಳು ಘೋಷಣೆಯಾಗಬಹುದು.

ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಬಿಜೆಪಿ (BJP) ನಾಲ್ಕರದಲ್ಲಿ ಅಧಿಕಾರದಲ್ಲಿದ್ದರೆ, ಪಂಜಾಬ್ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ (Congress) ಅಧಿಕಾರದಲ್ಲಿದೆ. ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯದ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯ ರೀತಿಯಲ್ಲಿ ನೋಡುತ್ತಿದೆ. ತಾನು ಪೂರ್ಣವಾಗಿ ಅಧಿಕಾರದಲ್ಲಿರುವ ಪಂಜಾಬ್ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ನಿಟ್ಟಿನಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿದೆ. ಇನ್ನೊಂದೆಡೆ ಬಿಜೆಪಿ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ (Samajwadi Party) ದೊಡ್ಡ ಪೈಪೋಟಿ ಎದುರಾಗಲಿದೆ. ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ ತನ್ನ ಅಧಿಕಾರವನ್ನು ಮರಳಿ ಸ್ಥಾಪಿಸಲಿದೆ ಎಂದು ಕೆಲ ಸಮೀಕ್ಷೆಗಳು ಹೇಳಿದ್ದರೂ, ಅವರಿಗೆ ಅಖಿಲೇಶ್ ಯಾದವ್ ( Akhilesh Yadav) ನೇತೃತ್ವದ ಸಮಾಜವಾದಿ ಕೆಲ ಕ್ಷೇತ್ರಗಳಲ್ಲಿ ದೊಡ್ಡ ಪ್ರತಿಸ್ಪರ್ಧಿಯಾಗಿದೆ. ಇನ್ನು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷಗಳು ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನುವ ಕುತೂಹಲವಿದೆ.

UP Elections: ಗಾಡಿ, ಬ್ಯಾನರ್ ಸಮಾಜವಾದಿ ಪಕ್ಷದ್ದು, ಮತ ಮಾತ್ರ ಬಿಜೆಪಿಗೆ ಕೊಡಿ!
ಯುಪಿ ಚುನಾವಣೆಯು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸೂಚಕವಾಗಿದೆ. ಉತ್ತರ ಪ್ರದೇಶ ರಾಜ್ಯವು 403 ಸ್ಥಾನಗಳನ್ನು ಹೊಂದಿದ್ದು, ದೇಶದ ಉಳಿದೆಲ್ಲಾ ರಾಜ್ಯಗಳಿಂತ ಅಧಿಕ 80 ಸಂಸದರನ್ನು ಲೋಕಸಭೆಗೆ ಕಳಿಸುತ್ತದೆ. ದಕ್ಷಿಣದ ಪುಟ್ಟ ರಾಜ್ಯ ಗೋವಾದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಸದೃಢವಾಗಿ ಬೇರುಬಿಟ್ಟಿರುವ ಕಾಂಗ್ರೆಸ್ ನೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (AAP) ಹಾಗೂ ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್  ನಿಂದ (TMC) ದೊಡ್ಡ ಮಟ್ಟದ ಸವಾಲನ್ನು ಎದುರಿಸಲಿದೆ. ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಕೇವಲ 13 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಪಕ್ಷೇತರರು ಹಾಗೂ'ಪ್ರಾದೇಶಿಕ ಪಕ್ಷಗಳ ಸಹಾಯದೊಂದಿಗೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿತ್ತು.

ಕಳೆದ ವರ್ಷ ಆರು ತಿಂಗಳ ಅವಧಿಯಲ್ಲಿ ಎರಡು ಬಾರಿ ಉತ್ತರಾಖಂಡ ಮುಖ್ಯಮಂತ್ರಿಯನ್ನು ಬಿಜೆಪಿ ಹೈಕಮಾಂಡ್ ಬದಲಿಸಿತ್ತು. ಇದರ ಲಾಭ ಪಡೆಯುವ ಗುರಿಯಲ್ಲಿರುವ ಕಾಂಗ್ರೆಸ್ ಹಾಗೂ ಆಪ್, 70 ವಿಧಾಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಸವಾಲು ಎಸೆಯಲಿದೆ. ಮಾರ್ಚ್ ತಿಂಗಳಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಅವರಿಂದ ಮುಖ್ಯಮಂತ್ರಿ ಸ್ಥಾನವನ್ನು ತೀರತ್ ಸಿಂಗ್ ರಾವತ್ ಪಡೆದುಕೊಂಡರೆ, ಜುಲೈನಲ್ಲಿ ತೀರತ್ ಸಿಂಗ್ ರಾವತ್ ತಮ್ಮ ಸ್ಥಾನವನ್ನು ಪುಷ್ಕರ್ ಸಿಂಗ್ ಧಾಮಿಗೆ ಬಿಟ್ಟುಕೊಟ್ಟಿದ್ದರು.

5 States Election: ಚುನಾವಣಾ ರಾಜ್ಯಗಳಲ್ಲಿ ಲಸಿಕಾಕರಣ ತೀವ್ರಗೊಳಿಸಲು ಆಯೋಗದ ಆದೇಶ
ಇನ್ನು 60 ಸದಸ್ಯ ಬಲದ ಮಣಿಪುರ  ವಿಧಾನಸಭೆಯಲ್ಲೂ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಮೂರು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶ ಕಂಡಿತ್ತು. ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಕಳೆದ ತಿಂಗಳು ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿತ್ತು. ಆದರೆ, ಕೇಂದ್ರ ಚುನಾವಣಾ ಸಂಸ್ಥೆಯು ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಸಭೆ ನಡೆಸಿದ್ದು ಮತ್ತು ಚುನಾವಣೆಯನ್ನು ಮುಂದುವರಿಸಲು ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು