ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ - ನ್ಯಾಯಾಲಯ

By Suvarna NewsFirst Published Apr 26, 2021, 2:39 PM IST
Highlights

ಕೊರೋನಾ ವೈರಸ್ 2ನೇ ಅಲೆಗೆ ಭಾರತ ಹೈರಾಣಾಗಿದೆ. ಸೋಂಕಿತರ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚಿನ ಕೇಸ್ ದಾಖಲಾಗುತ್ತಿದೆ. ಆಸ್ಪತ್ರೆ, ಆಕ್ಸಿಜನ್, ಲಸಿಕೆ ಸೇರಿದಂತೆ ಸಮಸ್ಯೆಗಳು ಸೋಂಕಿತರ ಜೀವವನ್ನೇ ಬಲಿತೆಗೆದುಕೊಳ್ಳುತ್ತಿದೆ. ಇದೀಗ ಕೊರೋನಾ 2ನೇ ಅಲೆ ಭಾರತದಲ್ಲಿ ಈ ಮಟ್ಟಿಗೆ ಅಬ್ಬರಿಸಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಚೆನ್ನೈ(ಏ.26): ಕೊರೋನಾ ವೈರಸ್ ಈ ರೀತಿ ದೇಶವನ್ನೇ ಅಲುಗಾಡಿಸಲು ಪಂಚ ರಾಜ್ಯ ಚುನಾವಣೆ, ಉಪ ಚುನಾವಣೆ, ಸ್ಥಳೀಯ ಚುನಾವಣೆಗಳೇ ಕಾರಣ ಅನ್ನೋದು ಜನರ ಆರೋಪ. ಆದರೆ ಸರ್ಕಾರ ಹೇಳುವುದು ಜನರ ನಿರ್ಲಕ್ಷ ಕಾರಣ. ಈ ಚರ್ಚೆಗೆ ಮದ್ರಾಸ್ ಹೈಕೋರ್ಟ್ ಪೂರ್ಣ ವಿರಾಮ ಹಾಕಿದೆ. ಕೊರೋನಾ 2ನೇ ಅಲೆ ಈ ಮಟ್ಟಿಗೆ ಅಬ್ಬರಿಸಲು ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಜನರ ಸಾವಿಗೆ ಕಾರಣವಾಗಿರುವ ಆಯೋಗದ ಮೇಲೆ ಮರ್ಡರ್ ಪ್ರಕರಣ ದಾಖಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಮೊದಲೇ ಎಚ್ಚರಿಸಿದ್ದರೂ ನಿರ್ಲಕ್ಷಿಸಿದ್ದ ಸರ್ಕಾರ?.

ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗಲು ಚುನಾವಣಾ ಆಯೋಗ ನಡೆಸಿದ ಚುನಾವಣೆಗೆ ಕಾರಣ. ಈ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸಿದ, ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟ ಚುನಾವಣಾ ಆಯೋಗ ಅತ್ಯಂತ ಬೇಜವಾಬ್ದಾರಿ ಸಂಸ್ಥೆಯಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಸದ್ಯದ ಪರಿಸ್ಥಿತಿಗೆ ಚುನಾವಣಾ ಆಯೋಗದ ನಿರ್ಧಾರಗಳೇ ಕಾರಣ. ರಾಜಕೀಯ ರ್ಯಾಲಿಗೆ ಅವಕಾಶ ಮಾಡಿಕೊಟ್ಟು, ಕೋವಿಡ್ ನಿಯಮ ಪಾಲಿಸಲು ಸೂಚಿಸಿತ್ತು. ಆದರೆ ಯಾವುದೇ ರ್ಯಾಲಿಯಲ್ಲಿ ಕೋವಿಡ್ ಮಾರ್ಗಸೂಚಿ ಸರಿಯಾಗಿ ಪಾಲನೆಯಾಗಿಲ್ಲ. ಪ್ರಚಾರದ ವೇಳೆ ಯಾವ ಪಕ್ಷವೂ  ನಿಯಮ ಪಾಲಿಸಿಲ್ಲ. ಇದು ಚುನಾವಣಾ ಆಯೋಗದ ಸುಪರ್ದಿಯಲ್ಲಿ ನಡೆದ ಬಹುದೊಡ್ಡ ತಪ್ಪು ಎಂದು ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಹಾಗೂ ಜಸ್ಟೀಸ್ ಸೆಂಥಿಲ್ ಕುಮಾರ್ ರಾಮೂರ್ತಿ ಹೇಳಿದ್ದಾರೆ.

ಮೇ.02ರಂದು ಮತ ಎಣಿಕೆ ವೇಳೆ ಕೊರೋನಾ ನಿಯಮಾವಳಿ ಪಾಲಿಸುವುದು ಕಷ್ಟ. ಇದು ಮತ್ತಷ್ಟ ಕೊರೋನಾ ಹರಡಲು ಕಾರಣವಾಗಲಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

click me!